ವಿಜಯಪುರ, ಮಾರ್ಚ್ 1: ಕರ್ನಾಟಕದಲ್ಲಿ, ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲಿಯೇ ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಶ್ರೀ ಸದಾಶಿವ ಮುತ್ಯಾ ಸ್ಪೋಟಕ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ರಾಜ್ಯ ಹಾಗೂ ದೇಶದ ರಾಜಕೀಯದ ಬಗ್ಗೆ ಅವರು ಅಚ್ಚರಿಯ ಭವಿಷ್ಯ ವಾಣಿ ನುಡಿದಿದ್ದಾರೆ. 2025ನೇ ಸಾಲಿನ ಭವಿಷ್ಯವಾಣಿ ನುಡಿದ ಅವರು ಹಲವು ಸ್ಫೋಟಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠ ಕಾಲಜ್ಞಾನದಿಂದಲೇ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಇಲ್ಲಿ ಜಾತ್ರೆ ಆರಂಭವಾಗುತ್ತದೆ. ಶಿವರಾತ್ರಿ ಅಮಾವಾಸ್ಯೆ ಬಳಿಕ ಸದಾಶಿವ ಮುತ್ಯಾನ ಕಾಲಜ್ಞಾನ ನುಡಿಯಲಾಗುತ್ತದೆ.
ಸದಾಶಿವ ಮುತ್ಯಾ ನುಡಿದ ಭವಿಷ್ಯವಾಣಿ
‘‘ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಿಯಣ್ಣ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವು ಆಗಲಿದೆ. ಹಣದ ಹಿಂದೆ ಹೋಗುವರ ಬಂಧುತ್ವದ ಸಮಯ ತಿಳಿಯಿರಿಯಣ್ಣ. ಈ ವರ್ಷ ವಿದ್ಯುಚ್ಛಕ್ತಿ, ನೀರಿನ ಕೊರತೆ ಬಹಳ ಆಗುತ್ತದೆ’’ ಎಂದು ಅವರು ನುಡಿದಿದ್ದಾರೆ. ಆ ಮೂಲಕ ಮತ್ತೆ ಬರಗಾಲದ ಮುನ್ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಆ ಬಗ್ಗೆಯೂ ಮುತ್ಯಾ ಮಾತನಾಡಿದ್ದಾರೆ. ರಾಜ್ಯ ರಾಜಕೀಯದ ಕುರಿತು ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ಭೂಕಂಪ, ಅಗ್ನಿ ದುರಂತಗಳು ಹೆಚ್ಚಾಗಲಿವೆ. ಧರ್ಮ ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗುತ್ತದೆ. ಈ ವರ್ಷದಲ್ಲಿ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ಮೂಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: 24 ವರ್ಷದಿಂದ ನಾಪತ್ತೆಯಾಗಿದ್ದ ವಿಜಯಪುರದ ವ್ಯಕ್ತಿಯನ್ನು ಮನೆ ಸೇರಿಸಿದ ಕುಂಭಮೇಳ
ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವದ ವಿದ್ಯಮಾನಗಳು ಮತ್ತು ಅಚ್ಚರಿಯ ಘಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಮುತ್ಯಾ ಈ ರೀತಿ ಅಚ್ಚರಿಯ ಭವಿಷ್ಯವಾಣಿ ನುಡಿದಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣ ಮಧ್ಯೆ ಮುಸುಕಿನ ಗುದ್ದಾಟ ತೀವ್ರಗೊಂಡಿದೆ. ಅತ್ತ ವಿರೋಧ ಪಕ್ಷ ಬಿಜೆಪಿಯಲ್ಲಿ ಕೂಡ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವೆ ತಿಕ್ಕಾಟ ಜೋರಾಗಿದೆ. ಇಂಥ ಸಂದರ್ಭದಲ್ಲೇ ಸ್ಪೋಟಕ ಭವಿಷ್ಯ ವಾಣಿ ನುಡಿದಿರುವುದು ಕುತೂಹಲ ಹೆಚ್ಚಿಸಿದೆ.