ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಖಾಕಿ: ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್​!

ವಿಜಯಪುರದ ಗ್ರಾ.ಪಂ. ಮಾಜಿ ಸದಸ್ಯ ರಾಜು ಖರಿ ಅವರ 'ಸಿನಿಮಾ ಸ್ಟೈಲ್' ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆಸ್ತಿ ವಿವಾದವೇ ಈ ಕ್ರೂರ ಹತ್ಯೆಗೆ ಕಾರಣ ಎಂದು ತನಿಖೆಯಿಂದ ಬಹಿರಂಗಗೊಂಡಿದೆ. ಆರೋಪಿಗಳು ಥಾರ್ ಜೀಪ್‌ಗೆ ಡಿಕ್ಕಿ ಹೊಡೆದು, ಗುಂಡು ಹಾರಿಸಿ ಭೀಕರವಾಗಿ ಹತ್ಯೆ ನಡೆಸಿದ್ದರು. ಎಸ್‌ಪಿ ನೇತೃತ್ವದ ವಿಶೇಷ ತಂಡ 6 ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

ಸಿನಿಮಾ ಸ್ಟೈಲ್​​ ಕೊಲೆ ಕೇಸ್​ ಭೇದಿಸಿದ ಖಾಕಿ: ಆಸ್ತಿ ವಿವಾದಕ್ಕೆ ನಡೆದಿದ್ದು ಡೆಡ್ಲಿ ಮರ್ಡರ್​!
ಕೊಲೆಯಾದ ವ್ಯಕ್ತಿ
Image Credit source: Tv9 Kannada
Edited By:

Updated on: Apr 24, 2026 | 7:23 PM

ವಿಜಯಪುರ, ಏಪ್ರಿಲ್​​ 24: ಅಲಿಯಾಬಾದ್ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ರಾಜು ಖರಿ (48) ಏಪ್ರಿಲ್ 14ರಂದು ಭೀಕರವಾಗಿ ಕೊಲೆಯಾಗಿದ್ದರು. ಅಲಿಯಾಬಾದ್ ಬಳಿಯ ಕೈಗಾರಿಕಾ ಪ್ರದೇಶದ ಬಳಿ ಸಿನಿಮಾ ಸ್ಟೈಲ್​​ನಲ್ಲಿ ದಾಳಿ ನಡೆಸಿದ್ದ ಆರೋಪಿಗಳು ರಾಜು ಅವರನ್ನು ಬರ್ಬರವಾಗಿ ಕೊಂದಿದ್ದರು. ಪ್ರಕರಣ ಸಂಬಂಧ ಆರೋಪಿಗಳ ಕೈಗೆ ಕೋಳ ತೊಡಿಸಿರುವ ಪೊಲೀಸರು, ಆಸ್ತಿ ವಿವಾದವೇ ಡೆಡ್ಲಿ ಮರ್ಡರ್​​ಗೆ ಕಾರಣ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ಗ್ರಾಮ ಪಂಚಾಯತಿಯ ಮಾಜಿ ಸದಸ್ಯನ ಕೊಲೆಗೆ ಅಸಲಿ ಕಾರಣ ಏನೆಂಬುದು ಬಹಿರಂಗಗೊಂಡಿದೆ.

ತಮ್ಮ ತೋಟದ ಮನೆಯಿಂದ ವಿಜಯಪುರದತ್ತ ಪ್ರಯಾಣ ಮಾಡುತ್ತಿದ್ದ ರಾಜು ಖರಿ ಅವರ ಥಾರ್​​ ಜೀಪ್​​ಗೆ ಮೊದಲು ಟಿಪ್ಪರ್​​ ಡಿಕ್ಕಿ ಹೊಡೆಸಲಾಗಿತ್ತು. ಅಪಘಾತದ ತೀವ್ರತೆಗೆ ಥಾರ್​​ ಜೀಪ್​​ ಮುಂಭಾಗ ಜಖಂ ಆಗಿದ್ದು, ಇದೇ ವೇಳೆ ವಾಹನದ ಬಳಿ ಆಗಮಿಸಿದ್ದ ಹಂತಕರು ಜೀಪ್ ಡೋರ್​​ನ ದೊಡ್ಡ ಕಲ್ಲಿನಿಂದ ಜಜ್ಜಿ ಒಡೆದು, ರಾಜು ತಲೆ ಮತ್ತು ಎದೆ ಭಾಗಕ್ಕೆ 6 ಸುತ್ತು ಗುಂಡಿನ ದಾಳಿ ನಡೆಸಿದ್ದರು. ಕಂಟ್ರಿ ಪಿಸ್ತೂಲ್​​ನಿಂದ ಆರೋಪಿಗಳು ಮಾಡಿದ್ದ ಈ ಫೈರಿಂಗ್​​ಗೆ ರಾಜು ಉಸಿರು ಚೆಲ್ಲಿದ್ದರು. ಅದಾದ ಬಳಿಕವೂ ಅವರ ತಲೆಗೆ ಕಲ್ಲಿನಿಂದ ಹೊಡೆದು ಹಂತಕರು ಎಸ್ಕೇಪ್​​ ಆಗಿದ್ದರು. ಈ ಭೀಕರ ಕೊಲೆ ಇಡೀ ಜಿಲ್ಲೆಯನ್ನೇ ನಡುಗಿಸಿ ಬಿಟ್ಟಿತ್ತು. ಹೀಗಾಗಿ ಪ್ರಕರಣ ಸಂಬಂಧ ಎಸ್ಪಿ ಲಕ್ಷ್ಮಣ ನಿಂಬರಗಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಹಂತಕರ ಬೆನ್ನುಬಿದ್ದ ಖಾಕಿ ಪಡೆ ಒಟ್ಟು 6 ಮಂದಿಯನ್ನೀಗ ಬಂಧಿಸಿದೆ. ಪಾಂಗ್ರೂನ್ ದೊಡ್ಡಿಯ ಪ್ರಮುಖ ಆರೋಪಿ ಅಬಾಶ್ಯಾ ಕೊಡ್ಲೆಕರ, ಮಾನೇನದೊಡ್ಡಿಯ ಅಬಾಶ್ಯಾ ಮಾನೆ, ಅಲಿಯಾಬಾದಿನ ವಾಗೀಶ ಪೋಳ, ಅಲಿಯಾಬಾದ ತಾಂಡಾದ ಖಂಡೂಬಾ ತಾಂಡೆ, ಪಾಂಗ್ರೂಬನ್ ದೊಡ್ಡಿಯ ಜಾಲಿಂದರ್ ಹಕ್ಕೆ, ಪಾಂಗ್ರೂನ್ ದೊಡ್ಡಿಯ ಮುರುಗು ಹಕ್ಕೆ ಬಂಧಿತರಾಗಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು; 6 ಸುತ್ತು ಫೈರಿಂಗ್ ಮಾಡಿ ಗ್ರಾ.ಪಂ ಸದಸ್ಯನ ಹತ್ಯೆ

ಇನ್ನು ಕೊಲೆಗೆ ಆಸ್ತಿ ವಿಚಾರವೇ ಕಾರಣ ಎನ್ನಲಾಗಿದೆ. ಖರಿ ಕುಟುಂಬಕ್ಕೆ ಸೇರಿದ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ರಾಜೂ ಖರಿ ಭಾಗಿಯಾಗಿದ್ದರು. ಇದೇ ವಿಚಾರವಾಗಿ ಪ್ರಮುಖ ಆರೋಪಿ ಅಬಾಶ್ಯಾ ಕೋಪಕೊಂಡಿದ್ದ. ಇದೇ ಸಿಟ್ಟಲ್ಲಿ ಆರೋಪಿಗಳು ರಾಜು ಕೊಲೆ ಮಾಡಿರುವ ಬಗ್ಗೆ ಎಸ್ಪಿ ಮಾಹಿತಿ ನೀಡಿದ್ದಾರೆ. ಬಂಧಿತರಿಂದ 2 ಕಂಟ್ರಿ ಪಿಸ್ತೂಲ್ ಗಳು, 7 ಮೊಬೈಲ್, 2 ಮೋಟರ್ ಸೈಕಲ್ ಗಳು, ಟಿಪ್ಪರ್ ಮತ್ತು ಕಾರನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:33 pm, Fri, 24 April 26

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us