ರಾಜಕೀಯ ರಹಸ್ಯ: ಸಿಎಂ, ಡಿಸಿಎಂಗೆ ಖರ್ಗೆ ಓಪನ್ ಆಗಿ ಕ್ಲಾಸ್ ತೆಗೆದುಕೊಂಡಿದ್ದೇಕೆ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇವಲ ಗ್ಯಾರಂಟಿ ಬಗ್ಗೆ ಲಘುವಾಗಿ ಮಾತಾಡಿದ್ದವರಿಗಷ್ಟೇ ಚಾಟಿ ಬೀಸಿಲ್ಲ. ಬದಲಾಗಿ ಬಣ ರಾಜಕೀಯ ಮಾಡ್ತಿದ್ದವರಿಗೂ ಕ್ಲಾಸ್ ತೆಗೆದುಕೊಂಡದ್ದಾರೆ. ಒಗ್ಗಟ್ಟಿನ ಪಾಠ ಮಾಡುತ್ತಲೇ ನಯವಾಗಿಯೇ ಸಂದೇಶ ರವಾನಿಸಿದ್ದಾರೆ. ಹಾಗಾದ್ರೆ, ಖರ್ಗೆ ಓಪನ್ ಆಗಿ ಕ್ಲಾಸ್ ತೆಗೆದುಕೊಂಡಿದ್ದೇಕೆ? ಇಲ್ಲಿದೆ ನೋಡಿ ರಿಪೋರ್ಟ್.

ರಾಜಕೀಯ ರಹಸ್ಯ: ಸಿಎಂ, ಡಿಸಿಎಂಗೆ ಖರ್ಗೆ ಓಪನ್ ಆಗಿ ಕ್ಲಾಸ್ ತೆಗೆದುಕೊಂಡಿದ್ದೇಕೆ?
ಖರ್ಗೆ ಕ್ಲಾಸ್
Edited By:

Updated on: Nov 01, 2024 | 5:27 PM

ಬೆಂಗಳೂರು, (ನವೆಂಬರ್ 01): ಬಹುಶಃ, ಇತ್ತೀಚಿನ ದಿನಗಳಲ್ಲಿ ಕೇಂದ್ರ ನಾಯಕರು ರಾಜ್ಯ ನಾಯಕರಿಗೆ ಬಹಿರಂಗವಾಗಿ ತಿಳಿ ಹೇಳಿದ್ದನ್ನ ಯಾರೂ ಕಂಡಿರಲಿಲ್ಲ. ಇವತ್ತು ಅಂಥಾದ್ದೊಂದು ಅಪರೂಪದ ಮತ್ತು ಮಹತ್ವದ ಬೆಳವಣಿಗೆ ನಿನ್ನೆ ಕೆಪಿಸಿಸಿ ಕಚೇರಿ ಸಾಕ್ಷಿಯಾಯ್ತು.. ಮಧ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಪಕ್ಕದಲ್ಲಿ ಸಿಎಂ ಮತ್ತು ಡಿಸಿಎಂ ಕೂತಿದ್ರು..ಇಬ್ಬರಿಗೂ ಸೇರಿದಂತೆ ರಾಜ್ಯ ನಾಯಕರಿಗೆ ಎಐಸಿಸಿ ಅಧ್ಯಕ್ಷ ಖರ್ಗೆ ಒಗ್ಗಟ್ಟಿನ ಪಾಠ ಮಾಡಿದ್ದಾರೆ.

ಒಗ್ಗಟ್ಟಿದ್ರೆ, ಯಾರೂ ಏನೂ ಮಾಡೋಕೆ ಆಗಲ್ಲ. ಒಬ್ಬರ ಮೇಲೆ ಒಬ್ಬರನ್ನ ಎತ್ತಿ ಕಟ್ಟೋರ ಮಾತನ್ನ ಕೇಳಬೇಡಿ. ಏನೇ ಸಮಸ್ಯೆ ಇದ್ದರೂ ನೀವೇ ಬಗೆಹರಿಸಿಕೊಳ್ಳಿ ಎಂದು ಖರ್ಗೆ ನಯವಾಗಿಯೇ ಸಿಎಂ,ಡಿಸಿಎಂಗೆ ಸಲಹೆ ನೀಡಿದ್ದಾರೆ. ಹೀಗೆ ಖರ್ಗೆ ಹೇಳೋದಕ್ಕೂ ಕಾರಣವಿದೆ. ಅದೇನಂದ್ರೆ, ಇತ್ತೀಚೆಗೆ ಗೌಪ್ಯ ಸಭೆಗಳು ನಡೆದಿದ್ವು. ಸಿಎಂ ಬದಲಾವಣೆ ವಿಚಾರ ಪದೇ ಪದೇ ಮುನ್ನಲೆಗೆ ಬರ್ತಿತ್ತು. ಹೀಗಾಗಿ ಬಣ ರಾಜಕೀಯಕ್ಕೆ ಫುಲ್‌ ಸ್ಟಾಪ್ ಹಾಕಲು ಖರ್ಗೆ, ಸಮಯ ಸಂದರ್ಭ ನೋಡಿ ಸಂದೇಶ ಪಾಸ್ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸೋಕೆ ಹೋದ್ರೆ ಕರ್ನಾಟಕದಲ್ಲಿ ಕ್ರಾಂತಿ ಆಗುತ್ತೆ: ವಾಟಾಳ್ ನಾಗರಾಜ್ ಎಚ್ಚರಿಕೆ

 ಖರ್ಗೆ ಓಪನ್ ಆಗಿ ಕ್ಲಾಸ್ ತೆಗೆದುಕೊಂಡಿದ್ದೇಕೆ?

ಮುಡಾ ಹಗರಣದ ನಡುವೆ ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್ ವರಿಷ್ಠರು ಬೇಸರಗೊಂಡಿದ್ದಾರೆ. ಯಾಕಂದ್ರೆ, ಹರಿಯಾಣ ಮತ್ತು ಜಮ್ಮು ಕಾಶ್ಮೀರ ಚುನಾವಣೆ ನಡುವೆ ಮಲ್ಲಿಕಾರ್ಜುನ ಖರ್ಗೆಗೆ ರಾಜ್ಯ ನಾಯಕರ ಮುಸುಕಿನ ಗುದ್ದಾಟ ತಲೆನೋವಾಗಿತ್ತು. ಸಿಎಂ ಬದಲಾವಣೆ ಬಗ್ಗೆ ನಾಯಕರಿಂದ ನಿತ್ಯ ಒಂದೊಂದು ಹೇಳಿಕೆ ಹೊರಬೀಳ್ತಿದ್ವು. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದ ನಾಯಕರು, ಸ್ವಹಿತಾಸಕ್ತಿಗಾಗಿ, ಮೂಗಿನ ನೇರಕ್ಕೆ ವಾದ ಮಂಡಿಸ್ತಿದ್ರು. ನೀವೇ ಸಿಎಂ ಆಗಿ ಅಂತಾ ಖರ್ಗೆ ಅವರಿಗೆ ಒತ್ತಡ ಹೇರಿದ್ದರು. ಕೆಲವರು ಮುಂದಿನ ಮುಖ್ಯಮಂತ್ರಿ ನಾನೇ ಆಗ್ತೇನೆ ಅಂತಿದ್ರು. ರಾಜ್ಯದ ಈ ವಿಚಾರಗಳನ್ನ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗಮನಿಸಿದ್ರು. ಹೀಗಾಗಿ ನೇರವಾಗಿಯೇ ರಾಜ್ಯ ನಾಯಕರಿಗೆ ಖರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಖರ್ಗೆ ತೆಗೆದುಕೊಂಡ ಈ ಕ್ಲಾಸ್‌ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ, ಅವರು ಹೇಳಿದ್ದು ನಮಗಲ್ಲ, ಕಾರ್ಯಕರ್ತರಿಗೆ ಎಂದು ಹೇಳಿದ್ದಾರೆ. ಇನ್ನು ಆರ್‌.ವಿ ದೇಶಪಾಂಡೆ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಖರ್ಗೆ ಹೇಳಿರುವುದು ಸರಿ ಇದೆ. ಭಿನ್ನಾಭಿಪ್ರಾಯವಿಲ್ಲದೇ ಹೋದರೆ ಪಕ್ಷಕ್ಕೆ ಶಕ್ತಿ ಬರುತ್ತೆ ಎಂದಿದ್ದಾರೆ.

ಇನ್ನೂ ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಮಲ್ಲಿಕಾರ್ಜುನ ಖರ್ಗೆ ಅವರು ಅವರ ಅನುಭವ ಹಂಚಿಕೊಂಡಿದ್ದಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಗಾಂಧಿ, ರಾಹುಲ್ ಗಾಂಧಿ ಕೈಯಿಂದ ಆಗದ ಕೆಲಸ ಖರ್ಗೆ ಅವರಿಂದ ಆಗುತ್ತಾ? ಖರ್ಗೆ ಎಷ್ಟೇ ಹೇಳಿದರೂ ನಾಯಿ ಬಾಲ ಡೊಂಕು ಅಂತಾ ಕಾಲೆಳೆದಿದ್ದಾರೆ.

ಒಟ್ಟಾರೆ ಖರ್ಗೆ ಒಂದು ಮಾತು, ಮುಟ್ಟಬೇಕಾದವರಿಗಂತೂ ಮುಟ್ಟಿದೆ. ಒಗ್ಗಟ್ಟಿನ ಪಾಠ ಮಾಡುತ್ತಲೇ ಸರ್ಕಾರ ಹೇಗೆ ನಡೆಸ್ಬೇಕು. ನಾಯಕರು ಹೇಗೆ ಇರ್ಬೇಕು ಅನ್ನೋದನ್ನ ತಿಳಿ ಹೇಳಿದ್ದಾರೆ. ಆದ್ರೆ, ಖರ್ಗೆ ಮಾತನ್ನ ರಾಜ್ಯ ಕಾಂಗ್ರೆಸ್ ನಾಯಕರು ಪಾಲಿಸ್ತಾರಾ ಕಾದು ನೋಡ್ಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us