ರಾಯಚೂರು, (ಡಿಸೆಂಬರ್ 09): ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯು ಸಹ ಜಲಸಮಾಧಿಯಾಗಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ಮಲಿಯಾಬಾದ್ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಲಿಯಾಬಾದ್ (Maliabad) ಗ್ರಾಮದ ನಿವಾಸಿ ತಾಯಿ ರಾಧಮ್ಮ (32) ಹಾಗೂ ಮಗ ಕೆ.ಸಂಜು (5) ಎಂದು ಗುರುತಿಸಲಾಗಿದೆ. ರಾಧಮ್ಮ ಇಂದು (ಡಿಸೆಂಬರ್ 09) ತನ್ನ ಪುತ್ರನನ್ನು ಕರೆದುಕೊಂಡು ಸಂಜು ಬಟ್ಟೆ ತೊಳೆಯಲೆಂದು ಕೆರೆ ಹೋಗಿದ್ದಾಳೆ. ಆ ವೇಳೆ ಸಂಜು ಕಾಲು ಜಾರಿ ಕರೆಯೊಳಗೆ ಬಿದ್ದಿದ್ದಾನೆ. ಕೂಡಲೇ ತಾಯಿ ರಾಧಮ್ಮ ಸಹ ಸಂಜುನನ್ನು ಕಾಪಾಡಲು ಹೋಗಿ ಜಲಸಮಾಧಿಯಾಗಿದ್ದಾಳೆ.
5 ವರ್ಷದ ಸಂಜು ಇನ್ನೂ ಶಾಲೆಗೆ ಕೂಡ ದಾಖಲಾಗಿರಲಿಲ್ಲ. ಹೆತ್ತವರು ಬೆಟ್ಟದಷ್ಟು ಕನಸು ಕಂಡಿದ್ರು. ಆದ್ರೆ, ಎಲ್ಲವೂ ಜಲಸಮಾಧಿ. ನೀವು ಹೀಗೆ ಮಕ್ಕಳನ್ನು ಕರೆದುಕೊಂಡು ಕೆರೆ, ಕಾಲುವೆ, ಹಳ್ಳಗಳಿಗೆ ನೀರು ತರಲೋ ಅಥವಾ ಬಟ್ಟೆ ತೊಳೆಯೋದಕ್ಕೆಂದು ಹೋಗುತ್ತಿದ್ದರೆ ಹುಷಾರಾಗಿರಿ. ಎಲ್ಲಿಗಾದರೂ ಮಕ್ಕಳನ್ನ ಕರೆದುಕೊಂಡು ಹೋಗುವಾಗ ಅವರ ಬಗ್ಗೆ ಹೆಚ್ಚು ಗಮನವಿರಲಿ.
ಬಾಗಲಕೋಟೆ: ಮತ್ತೊಂದೆಡೆ ಬಾಗಕೋಟೆಯಲ್ಲಿ ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರ ನೀರುಪಾಲಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಬಳಿ ಈ ದುರ್ಘಟನೆ ನಡೆದಿದ್ದು.ಹುಚ್ಚೇಶ್ ಗೌಡರ(14), ರಾಜು ಮಡಿಕೇರಿ(12) ಮೃತ ಬಾಲಕರು. ಇನ್ನು ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮೃತದೇಹಗಳ ಶೋಧಕಾರ್ಯ ನಡೆಸಿದರು. ಅಂತಿಮವಾಗಿ ಇಂದು(ಡಿಸೆಂಬರ್ 09) ಸಂಜೆ ಅಗ್ನಿಶಾಮಕ ಸಿಬ್ಬಂದಿ. ನದಿಯಿಂದ ಬಾಲಕರ ಶವಗಳನ್ನು ಹೊರತೆಗೆದರು.
ಬಾಗಲಕೋಟೆ: ಇನ್ನೊಂದೆಡೆ ಕಾರು ಹಾಗೂ ಬೈಕ್ ಮಧ್ಯ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನೀಲನಗೌಡ ಗೌಡರ(45) ಮೃತ ವ್ಯಕ್ತಿ. ಆದ್ರೆ ಕಾರು ನಿಲ್ಲಿಸದೆ ಹೋಗಿದ್ದು, ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಪತ್ತೆಯಾಗಿದೆ. ಕಾರಿನ ನಂಬರ್ ಪ್ಲೇಟ್ ಹಾಗೂ ಅಂಕಲಗಿಮಠ ಎಂಬ ಬೋರ್ಡ್ ಪತ್ತೆಯಾಗಿದ್ದು, ಇದೊಂದು ಸ್ವಾಮೀಜಿಯವರ ಕಾರು ಎಂದು ಶಂಕೆ ವ್ಯಕೆ ವ್ಯಕ್ತವಾಗಿದೆ. ಹೀಗಾಗಿ ಕಾರಿನಲ್ಲಿ ಸ್ವಾಮೀಜಿಗಳಿದ್ರಾ? ಅಥವಾ ಚಾಲಕ ಮಾತ್ರ ಇದ್ದನಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿದ್ದು, ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 pm, Mon, 9 December 24