ಕಾಂಗ್ರೆಸ್​ನಲ್ಲಿ ಸಿಎಂ ಪುತ್ರ ಯತೀಂದ್ರ ದಳ್ಳುರಿ: ತನ್ವೀರ್ ಸೇಠ್ ಕ್ಷೇತ್ರದಲ್ಲೂ ಹಸ್ತಕ್ಷೇಪದ ಆರೋಪ, ಆಕ್ಷೇಪ

ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಆಂತರಿಕ ಬಿಕ್ಕಟ್ಟು ಹೆಚ್ಚಿಸಿದೆ. ಕೆಜೆ ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ವಿಚಾರ ತಣ್ಣಗಾಗುತ್ತಿದ್ದಂತೆಯೇ ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಇದು ವಿಪಕ್ಷಗಳಿಗೆ ಅಸ್ತ್ರವಾಗಿದ್ದು, ಯತೀಂದ್ರ ಹಸ್ತಕ್ಷೇಪ ಹಾಗೂ ನಾಯಕತ್ವ ಬದಲಾವಣೆ ಜಟಾಪಟಿ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಕಾಂಗ್ರೆಸ್​ನಲ್ಲಿ ಸಿಎಂ ಪುತ್ರ ಯತೀಂದ್ರ ದಳ್ಳುರಿ: ತನ್ವೀರ್ ಸೇಠ್ ಕ್ಷೇತ್ರದಲ್ಲೂ ಹಸ್ತಕ್ಷೇಪದ ಆರೋಪ, ಆಕ್ಷೇಪ
ಕಾಂಗ್ರೆಸ್​ನಲ್ಲಿ ಸಿಎಂ ಪುತ್ರ ಯತೀಂದ್ರ ದಳ್ಳುರಿ: ಹಸ್ತಕ್ಷೇಪಕ್ಕೆ ಆಕ್ಷೇಪ
Image Credit source: tv9
Edited By:

Updated on: Feb 09, 2026 | 8:12 AM

ಬೆಂಗಳೂರು, ಫೆಬ್ರವರಿ 9: ಕಾಂಗ್ರೆಸ್ (Congress) ಪಾಳಯದಲ್ಲಿ ಒಂದೆಡೆ ಕುರ್ಚಿ ಕದನ ನಡೆಯುತ್ತಿದ್ದರೆ, ಮತ್ತೊಂದೆಡೆ ಹಸ್ತಕ್ಷೇಪದ ಜಟಾಪಟಿ ಜೋರಾಗಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಆಡಿದ ಮಾತು, ಅವರ ನಡೆ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ತರುತ್ತಿದೆ ಎನ್ನಲಾಗಿದೆ. ಇಂಧನ ಇಲಾಖೆಯಲ್ಲಿ ಯತೀಂದ್ರ ಹಸ್ತಕ್ಷೇಪ ಮಾಡಿದ್ದರು ಎಂದು ಇತ್ತೀಚೆಗಷ್ಟೇ ಸಚಿವ ಕೆಜೆ ಜಾರ್ಜ್ ರಾಜೀನಾಮೆ ಕೊಡಲು ಮುಂದಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಬಳಿಕ, ‘ಅಪ್ಪಾಜಿಯೇ ಐದು ವರ್ಷ ಸಿಎಂ’ ಎನ್ನುವ ಮೂಲಕ ಯತೀಂದ್ರ ನಾಯಕತ್ವ ಬದಲಾವಣೆ ಚರ್ಚೆಯ ಬೆಂಕಿಗೆ ತುಪ್ಪ ಸುರಿದಿದ್ದರು. ಈಗ ಸಿಎಂ ತವರು ಜಿಲ್ಲೆ ಕಾಂಗ್ರೆಸ್​ ನಾಯಕರೇ ಯತೀಂದ್ರ ವಿರುದ್ಧ ಅಸಮಾಧಾನ ಗೊಂಡಿದ್ದಾರೆ.

ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಯತೀಂದ್ರ ವಿರುದ್ಧ ಕಿಡಿಕಾರಿದ್ದಾರೆ. ತನ್ವೀರ್ ಸೇಠ್ ಕ್ಷೇತ್ರದಲ್ಲೂ ಯತೀಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಶಾಸಕರ ಮಾತು ಕೇಳುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಪೊಲೀಸ್ ಠಾಣೆ ಉದ್ಘಾಟನೆ ಸಮಯದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಮುಂದೆ ತನ್ವೀರ್ ಸೇಠ್ ಬೇಸರ ಹೊರಹಾಕಿದ್ದಾರೆ.

‘ನಾನು ವೇದಿಕೆಗೆ ಬರಲ್ಲ. ಬಂದರೆ ಬೇರೆಯೇ ಮಾತನಾಡಿಬಿಡುತ್ತೇನೆ’ ಎಂದು ತನ್ವೀರ್ ಸೇಠ್ ಗರಂ ಆಗಿದ್ದಾರೆ. ಶಾಸಕ ಅನಿಲ್ ಸೇರಿ ಹಲವರು ತನ್ವೀರ್ ಸೇಠ್‌ರನ್ನು ಮನವೊಲಿಸಿದ್ದಾರೆ. ಕೊನೆಗೆ ಒಲ್ಲದ ಮನಸಿನಿಂದಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಬಳಿಕ ಮಾತನಾಡಿದ ತನ್ವೀರ್ ಸೇಠ್, ಕೆಲವು ಅಧಿಕಾರಿಗಳು ಶಂಖದಿಂದ ಬಂದರೇನೇ ತೀರ್ಥ ಅಂದುಕೊಂಡಿದ್ದಾರೆ. ಹಸ್ತಕ್ಷೇಪ ರಾಜ್ಯದ ಉದ್ದಗಲಕ್ಕೂ ಆಗುತ್ತಿದೆ ಎಂದು ಅಂತಾ ಕಿಡಿಕಾರಿದ್ದಾರೆ.

ಪಟ್ಟದ ಫೈಟ್​: ಯತೀಂದ್ರ ಬಾಂಬ್ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಕಂಪನ

ಹಸ್ತಕ್ಷೇಪದ ಆರೋಪವಷ್ಟೇ ಅಲ್ಲ, ಸಿಎಂ ಬದಲಾವಣೆ ವಿಚಾರವಾಗಿ ಯತೀಂದ್ರ ನೀಡಿರುವ ಹೇಳಿಕೆ ಬಗ್ಗೆಯೂ ತಿವಿದಿರುವ ತನ್ವೀರ್ ಸೇಠ್, ಅಧಿಕಾರ ಶಾಶ್ವತವಲ್ಲ ಎಂದಿದ್ದಾರೆ. ಏತನ್ಮಧ್ಯೆ, ಯಾರೋ ಹೇಳಿಕೆ ಕೊಟ್ಟರೆ ಸಿಎಂ ಬದಲಾವಣೆ ಆಗಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರೆ, ಹೈಕಮಾಂಡ್ ಎಲ್ಲವನ್ನೂ ಗಮನಿಸ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಈ ಮಧ್ಯೆ ವಿಜಯಪುರದಲ್ಲಿ ಲಿಂಗಾಯತ ಶಾಸಕರ ಭೋಜನಕೂಟದ ಬಳಿಕ ಮಾತನಾಡಿದ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ನಮ್ಮ ಸಮುದಾಯದ ಹಿತಾಸಕ್ತಿ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು 34 ಶಾಸಕರಿದ್ದೇವೆ, ನಮಗೆ ಸಿಗಬೇಕಾಗಿರುವುದು ಸಿಗಲೇಬೇಕು ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಪುತ್ರನ ಹಸ್ತಕ್ಷೇಪಕ್ಕೆ ಸಿಡಿದ ‘ಕೈ’ ಶಾಸಕ: ಗೃಹ ಸಚಿವರ ಬಳಿ ಅಸಮಾಧಾನ ತೋಡಿಕೊಂಡ ತನ್ವೀರ್​​ ಸೇಠ್

ಕಾಂಗ್ರೆಸ್​​ನ ನಾಯಕತ್ವ ಬಡಿದಾಟವೇ ವಿಪಕ್ಷಕ್ಕೆ ಅಸ್ತ್ರವಾಗಿದ್ದು, ಕೇಂದ್ರ ಸಚಿವರು ಟೀಕಿಸಿದ್ದಾರೆ. ಈಗಿರುವ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂದು ಸಚಿವ ವಿ ಸೋಮಣ್ಣ ಕುಟುಕಿದ್ದಾರೆ. ನಾಯಕತ್ವ ಬದಲಾವಣೆ ಸಂಘರ್ಷ ಮುಂದೆ ಮತ್ತೆ ಯಾವ ಹಂತ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ