Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?

BBK8: ಸ್ಪರ್ಧಿಗಳು ಊಹಿಸಲೂ ಸಾಧ್ಯವಾಗದಂತಹ ಟಾಸ್ಕ್​ಗಳನ್ನು ಬಿಗ್​ ಬಾಸ್​ ನೀಡುತ್ತಿದ್ದಾರೆ. ಅದನ್ನು ಎದುರಿಸಲಾಗದೆ ಎಲ್ಲರೂ ಕಷ್ಟಪಡುತ್ತಿದ್ದಾರೆ.

Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?
ಶಮಂತ್​ ಬ್ರೋ ಗೌಡ

Updated on: Mar 24, 2021 | 10:47 AM

ಶಮಂತ್​ ಬ್ರೋ ಗೌಡ ಎಲ್ಲರ ದೃಷ್ಟಿಯಲ್ಲೂ ದುರ್ಬಲ ಸ್ಪರ್ಧಿ ಎನಿಸಿಕೊಳ್ಳುತ್ತಿದ್ದಾರೆ. ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅವರ ಆಟದ ವೈಖರಿ ಮನೆಯ ಯಾವ ಸದಸ್ಯರಿಗೂ ಇಷ್ಟ ಆಗುತ್ತಿಲ್ಲ. ಆದರೆ ವೀಕ್ಷಕರು ನೀಡಿದ ವೋಟ್​ ಬಲದ ಮೇಲೆ ಶಮಂತ್ ಆಟ ಇನ್ನೂ ಮುಂದುವರಿಸಿದೆ. ಇತ್ತೀಚೆಗೆ ಬಿಗ್​ ಬಾಸ್​ ನೀಡಿದ್ದ ಒಂದು ಟಾಸ್ಕ್​ನಲ್ಲಿ ಶಮಂತ್​ ಸೋತಿದ್ದಾರೆ. ಅದು ಅವರ ಸಾಮಾನ್ಯ ಜ್ಞಾನಕ್ಕೆ ಸವಾಲು ಹಾಕುವ ಟಾಸ್ಕ್​.

ಹೌದು, ಚದುರಂಗದ ಆಟದಲ್ಲಿ ಬಿಳಿ ತಂಡದವರಿಂದ ಟಾರ್ಗೆಟ್​ ಆಗಿದ್ದ ಶಮಂತ್​ಗೆ ಬಿಗ್​ ಬಾಸ್​ 10 ಜನರಲ್​ ನಾಲೆಜ್ಡ್​ ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ಹೌದು ಅಥವಾ ಇಲ್ಲ ಎಂದು ಶಮಂತ್​ ಉತ್ತರ ನೀಡಬೇಕಿತ್ತು. ಶಮಂತ್​ ಕೆಲವು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದಾರೆ. ಆದರೂ ಕಡಿಮೆ ಪಾಯಿಂಟ್ಸ್​ ಗಳಿಸಿದ್ದರಿಂದ ಅವರು ಸೋಲು ಕಂಡಿದ್ದಾರೆ. ಶಮಂತ್​ಗೆ ಬಿಗ್​ ಬಾಸ್​ ಕೇಳಿದ ಪ್ರಶ್ನೆಗಳು ಹೀಗಿವೆ…

ಪ್ರಶ್ನೆ 1. ಚಿಕ್ಕ ತಿರುಪತಿ ಕರ್ನಾಟಕದಲ್ಲಿ ಇದೆ. ಹೌದು/ಇಲ್ಲ.
ಈ ಪ್ರಶ್ನೆಗೆ ಯಾವುದೇ ಗೊಂದಲ ಇಲ್ಲದೆ ಹೌದು ಎಂದು ಶಮಂತ್ ಉತ್ತರಿಸಿದರು. ಅವರ ಉತ್ತರ ಸರಿಯಾಗಿತ್ತು.

ಪ್ರಶ್ನೆ 2. ಬೆಳಗಾವಿಯಲ್ಲಿ ವಿಮಾನ ನಿಲ್ದಾಣ ಇದೆ. ಹೌದು/ಇಲ್ಲ.
ಇದು ಶಮಂತ್​ಗೆ ಗೊತ್ತಿರಲಿಲ್ಲ. ಯಾವುದೋ ಅಂದಾಜಿನ ಮೇಲೆ ಹೌದು ಎಂದು ಉತ್ತರಿಸಿದರು. ಅನುಮಾನದಲ್ಲಿಯೇ ‘ಹೌದು’ ಎಂದು ಅವರು ಸರಿ ಉತ್ತರ ನೀಡಿದಾಗ ಅವರ ತಂಡದವರು ಕುಣಿದು ಕುಪ್ಪಳಿಸಿದರು.

ಪ್ರಶ್ನೆ: 3 ಭಾರತೀಯ ಚುನಾವಣೆಯಲ್ಲಿ ಬಳಸುವ ಇಂಕ್​ ತಯಾರಿಸುವ ಕಾರ್ಖಾನೆ ಕರ್ನಾಟದಲ್ಲಿ ಇದೆ. ಹೌದು/ಇಲ್ಲ.
ಈ ಪ್ರಶ್ನೆಗೆ ಶಮಂತ್​ ‘ಇಲ್ಲ’ ಎಂದು ತಪ್ಪು ಉತ್ತರ ನೀಡಿ ಪಾಯಿಂಟ್​ ಕಳೆದುಕೊಂಡರು. ಚುನಾವಣೆ ಲಿಂಕ್​ ತಯಾರಿಸುವ ‘ಮೈಸೂರ್​ ಪೇಂಟ್ಸ್​ ಆ್ಯಂಡ್​ ವಾರ್ನಿಷ್​ ಲಿಮಿಡೆಟ್​ ಕಂಪನಿ’ ಕರ್ನಾಟಕದಲ್ಲಿ ಇದೆ ಎಂದು ಬಿಗ್​ ಬಾಸ್​ ಸರಿ ಉತ್ತರ ಹೇಳಿದರು.

ಪ್ರಶ್ನೆ 4: ಭಾರತದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಮತ್ತು ರಫ್ತು ಮಾಡುವ ರಾಜ್ಯ ಕರ್ನಾಟಕ. ಹೌದು/ಇಲ್ಲ.
ಹೌದು ಎನ್ನುವ ಮೂಲಕ ಶಮಂತ್​ ಸರಿ ಉತ್ತರ ನೀಡಿದರು.

ಪ್ರಶ್ನೆ 5: ಕೃಷ್ಣರಾಜ ಸಾಗರ ಜಲಾಶಯ ಮೈಸೂರು ಜಿಲ್ಲೆಯಲ್ಲಿದೆ. ಹೌದು/ ಇಲ್ಲ.
ಈ ಪ್ರಶ್ನೆಗೆ ಬಹಳ ಕಾನ್ಫಿಡೆಂಟ್​ ಆಗಿ ಹೌದು ಎಂದು ಶಮಂತ್​ ಹೇಳಿದರು. ಆದರೆ ಅವರ ಉತ್ತರ ತಪ್ಪಾಗಿತ್ತು. ಕೃಷ್ಣರಾಜ ಸಾಗರ ಜಲಾಶಯ ಮಂಡ್ಯ ಜಿಲ್ಲೆಯಲ್ಲಿದೆ.

ಪ್ರಶ್ನೆ 6: ದೇಶದ ಅತಿ ದೊಡ್ಡ ಸಾರ್ವಜನಿಕ ಸಂಚಾರ ವಾಹನಗಳ ನಿರ್ವಹಣಾ ಸಂಸ್ಥೆ ಕರ್ನಾಟಕದಲ್ಲಿ ಇದೆ. ಹೌದು/ಇಲ್ಲ.
ಇಲ್ಲ ಎಂದು ಶಮಂತ್​ ಹೇಳಿದ ಉತ್ತರ ತಪ್ಪಾಗಿತ್ತು. ಕೆಎಸ್​ಆರ್​ಟಿಸಿ ಸಂಸ್ಥೆಯು ದೇಶದ ಅತಿ ದೊಡ್ಡ ಸಾರ್ವಜನಿಕ ಸಂಚಾರ ವಾಹನಗಳ ನಿರ್ವಹಣಾ ಸಂಸ್ಥೆಯಾಗಿದೆ ಎಂದು ಬಿಗ್​ ಬಾಸ್​ ಹೇಳಿದರು.

ಪ್ರಶ್ನೆ 7: ನೀನಾಸಂ ಹೆಗ್ಗೋಡಿನಲ್ಲಿದೆ. ಹೌದು/ಇಲ್ಲ.
ಹೌದು ಎನ್ನುವ ಮೂಲಕ ಸರಿ ಉತ್ತರ ಹೇಳಿದ ಶಮಂತ್​ಗೆ ಕಪ್ಪು ತಂಡದವರಿಂದ ಚಪ್ಪಾಳೆ, ಮೆಚ್ಚುಗೆ ಸಿಕ್ಕಿತು.

ಪ್ರಶ್ನೆ 8: ವಿದ್ಯುತ್​ ಚಾಲಿತ ಬೀದಿ ದೀಪಗಳನ್ನು ಸ್ಥಾಪಿಸಿದ ಮೊದಲ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಇದೆ. ಹೌದು/ಇಲ್ಲ.
ಇಲ್ಲ ಎಂದು ಹೇಳಿದ ಶಮಂತ್​ ಮತ್ತೆ ಸೋಲು ಅನುಭವಿಸಿದರು. ಶಿವನ ಸಮುದ್ರದಲ್ಲಿ ಉತ್ಪಾದಿಸಿದ ಹೆಚ್ಚುವರಿ ವಿದ್ಯುತ್​ ಬಳಸಲು ಈಗಿನ ಕೆಆರ್​ ಮಾರುಕಟ್ಟೆಯಲ್ಲಿ ವಿದ್ಯುತ್​ ದೀಪಗಳನ್ನು 1905ರಲ್ಲಿ ಸ್ಥಾಪಿಸಲಾಯಿತು ಎಂದು ಬಿಗ್​ ಬಾಸ್​ ಉತ್ತರ ಹೇಳಿದರು.

ಪ್ರಶ್ನೆ: 9: ಭಾರತದ ಮೊದಲ ರಣಹದ್ದು ಅಭಯಾರಣ್ಯ ರಾಮನಗರದಲ್ಲಿ ಇದೆ. ಹೌದು/ಇಲ್ಲ.
ಇದೆ ಎನ್ನುವ ಮೂಲಕ ಶಮಂತ್​ ಸರಿ ಉತ್ತರ ನೀಡಿದರು.

ಪ್ರಶ್ನೆ 10: ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಇದೆ. ಹೌದು/ಇಲ್ಲ.
ಇದೆ ಎಂದು ಶಮಂತ್​ ಹೇಳಿದ ಉತ್ತರ ತಪ್ಪಾಗಿತ್ತು. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿದೆ.

ಇವುಗಳಲ್ಲಿ ಕೆಲವೇ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಶಮಂತ್ ಸೋಲು ಅನುಭವಿಸಬೇಕಾಯಿತು. ಅವರನ್ನು ಟಾರ್ಗೆಟ್​ ಮಾಡಿದ ಬಿಳಿ ತಂಡದವರಿಗೆ ಗೆಲುವು ಸಿಕ್ಕಿತು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ ಕೂದಲಿಗೆ ಕತ್ತರಿ! ಇದು ಹೊಸಾ ಪನಿಶ್​ಮೆಂಟ್​?

Bigg Boss: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us