ಚಳಿಗಾಲದ ಆರೋಗ್ಯ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ
ಚುಮುಚುಮು ಚಳಿಗಾಲ ಬಂದೇ ಬಿಟ್ಟಿದೆ. ಸೂರ್ಯ ನೆತ್ತಿ ಮೇಲೆ ಬಂದ್ರೂ ಹಾಸಿಗೆಯಿಂದ ಏಳೋದೇ ಬೇಡ ಅನಿಸೋ ಈ ಕಾಲದಲ್ಲಿ ಒಂದಷ್ಟು ಆರೋಗ್ಯ ಸಮಸ್ಯೆಗಳು ಕಾಡೋದು ಮಾಮೂಲು. ನಿಮಗೂ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆಯಾ? ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸುಲಭ ಪರಿಹಾರ.. ಚಳಿಗಾಲ ಪಂಚಕರ್ಮ ಚಿಕಿತ್ಸೆಗೆ ಉತ್ತಮ ಕಾಲ. ರಾತ್ರಿ ಬೇಗ ಮಲಗಿ ಬೇಗ ಏಳುವ ಹವ್ಯಾಸ ಆರೋಗ್ಯಕ್ಕೆ ಉತ್ತಮ. ಬಿಸಿ ಪದಾರ್ಥವನ್ನು ಹಚ್ಚು ಸೇವಿಸಬೇಕು. ವ್ಯಾಯಾಮ, ಪ್ರಾಣಾಯಾಮಗಳನ್ನು ಪ್ರತಿನಿತ್ಯ ರೂಢಿಯಲ್ಲಿರಿಸಿಕೊಂಡರೆ ಆರೋಗ್ಯವನ್ನು […]

ಚುಮುಚುಮು ಚಳಿಗಾಲ ಬಂದೇ ಬಿಟ್ಟಿದೆ. ಸೂರ್ಯ ನೆತ್ತಿ ಮೇಲೆ ಬಂದ್ರೂ ಹಾಸಿಗೆಯಿಂದ ಏಳೋದೇ ಬೇಡ ಅನಿಸೋ ಈ ಕಾಲದಲ್ಲಿ ಒಂದಷ್ಟು ಆರೋಗ್ಯ ಸಮಸ್ಯೆಗಳು ಕಾಡೋದು ಮಾಮೂಲು. ನಿಮಗೂ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆಯಾ? ಇಂತಹ ಸಂದರ್ಭದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸುಲಭ ಪರಿಹಾರ..
ಚಳಿಗಾಲ ಪಂಚಕರ್ಮ ಚಿಕಿತ್ಸೆಗೆ ಉತ್ತಮ ಕಾಲ. ರಾತ್ರಿ ಬೇಗ ಮಲಗಿ ಬೇಗ ಏಳುವ ಹವ್ಯಾಸ ಆರೋಗ್ಯಕ್ಕೆ ಉತ್ತಮ. ಬಿಸಿ ಪದಾರ್ಥವನ್ನು ಹಚ್ಚು ಸೇವಿಸಬೇಕು. ವ್ಯಾಯಾಮ, ಪ್ರಾಣಾಯಾಮಗಳನ್ನು ಪ್ರತಿನಿತ್ಯ ರೂಢಿಯಲ್ಲಿರಿಸಿಕೊಂಡರೆ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.
ಬೇಗ ಮಲಗಿ ಬೇಗ ಏಳುವ ಹವ್ಯಾಸ ಎಷ್ಟೋ ಕಾಯಿಲೆಗಳಿಗೆ ರಾಮಬಾಣ. ಬೆಳಿಗ್ಗೆ 6 ಗಂಟೆ ಒಳಗೆ ಎದ್ದು, ದೇಹಕ್ಕೆ ಕೊಬ್ಬರಿ ಎಣ್ಣೆಯ ಲೇಪನವನ್ನು ಮಾಡಿ ಅಭ್ಯಂಗ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಸಾಬೂನು ಬಳಸದೇ, ಕಡಲೆಹಿಟ್ಟು, ತ್ರಿಫಲ ಚೂರ್ಣ, ಅರಿಶಿಣದಂತಹ ಪದಾರ್ಥದಿಂದ ಸ್ನಾನ ಮಾಡುವುದು ಒಳಿತು ಎನ್ನುತ್ತಾರೆ ನಿಸರ್ಗ ಆಯುರ್ವೇದ ಚಿಕಿತ್ಸಾಲಯದ ವೈದ್ಯ ಡಾ. ವಿನಾಯಕ್ ಹೆಬ್ಬಾರ್
https://www.facebook.com/Tv9Kannada/videos/184901726555693/
ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಸುಲಭ ಪರಿಹಾರ ಇಲ್ಲಿದೆ..
1. ಅಸ್ತಮ: ಈ ಸಮಯದಲ್ಲಿ ಕೆಮ್ಮು, ಶೀತ, ಕಫದ ಸಮಸ್ಯೆ ಸಾಮಾನ್ಯ. ಅಸ್ತಮಾ ಇರುವವರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಲೇಬಾರದು. ದೇಹವನ್ನು ಹೆಚ್ಚು ಬೆಚ್ಚಗಿರುವಂತೆ ಕಾಪಾಡಿಕೊಳ್ಳಿ. ಬಿಸಿನೀರು ಬಳಕೆ, ಬಿಸಿ ಆಹಾರ ಸೇವನೆ ದೇಹಕ್ಕೆ ಉತ್ತಮ.
2. ಜ್ವರ: ವಾತಾವರಣದ ಬದಲಾವಣೆಗೆ ಶರೀರ ಸ್ಪಂದಿಸುವ ರೀತಿಯಿದು. ಶುಂಠಿ, ಏಲಕ್ಕಿಯಂತಹ ಪದಾರ್ಥಗಳಿಂದ ಕಷಾಯವನ್ನು ತೆಗೆದುಕೊಳ್ಳುವುದರಿಂದ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಜ್ವರ ವಾಸಿಯಾಗುತ್ತವೆ.
3. ಮೈಕೈ ನೋವು: ಚಳಿಗಾಲದಲ್ಲಿ ಸಂಧಿವಾತ, ಗಂಟು ನೋವು ಕಾಣಿಸಿಕೊಳ್ಳುತ್ತವೆ. ಬೆಳಿಗ್ಗೆ ಎದ್ದ ತಕ್ಷಣ ಕೊಬ್ಬರಿ ಎಣ್ಣೆಯನ್ನು ದೇಹಕ್ಕೆ ಸವರಿಕೊಂಡು, ಅಭ್ಯಂಗ ಸ್ನಾನ ಮಾಡುವುದರ ಮೂಲಕ ಸಂಧಿವಾತದಂತಹ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದ ಮೇಲೆ ಸೂರ್ಯನ ಶಾಖ ಪ್ರತಿಫಲಿಸಿದರೆ ದೇಹದಲ್ಲಿನ ಇತರ ಸಣ್ಣಪುಟ್ಟ ನೋವುಗಳು ಮಾಯವಾಗುತ್ತವೆ.
4. ಚರ್ಮದ ಒಡೆತ: ಚಳಿಗೆ ತುಟಿ, ಪಾದದ ಹಿಮ್ಮಡಿ, ಕಾಲು ಕೈಗಳು ಬಿರುಕು ಬಿಡುವುದು ಸಾಮಾನ್ಯ. ಇದರಿಂದ ಉರಿಯೂತಗಳು ಶುರುವಾಗುತ್ತವೆ. ಒಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯ ಲೇಪನವನ್ನು ದೇಹಕ್ಕೆ ಸರಿಯಾಗಿ ಹಚ್ಚಿಕೊಳ್ಳಬೇಕು. ಪ್ರತಿನಿತ್ಯ ಮಲಗುವ ಮುನ್ನ ಮತ್ತು ಬೆಳಿಗ್ಗೆ ಸ್ನಾನ ಮಾಡಿದ ನಂತರ ಕೊಬ್ಬರಿ ಎಣ್ಣೆಯನ್ನು ದೇಹಕ್ಕೆ ಸವರಿಕೊಳ್ಳುವ ಅಭ್ಯಾಸವಿದ್ದರೆ ಉತ್ತಮ.
5. ಅಸಿಡಿಟಿ: ಚಳಿಗಾಲದಲ್ಲಿ ದೇಹದಲ್ಲಿ ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಬೂದುಗುಂಬಳ ಕಾಯಿ, ಹಾಲು, ತುಪ್ಪ, ಬಾದಾಮಿಯಂತಹ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಹಸಿವಾದಾಗ ಆಹಾರವನ್ನು ಸೇವಿಸಬೇಕು. ಹಸಿವು ಕಟ್ಟುವುದರಿಂದ ದೇಹದಲ್ಲಿ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಇದರಿಂದ ಎಸಿಡಿಟಿಯಂತಹ ರೋಗಗಳು ಹುಟ್ಟಿಕೊಳ್ಳುವುದು. ಪ್ರತಿದಿನ ನಿಗದಿತ ಸಮಯಕ್ಕೆ ತಿಂಡಿ, ಊಟ ಮುಗಿಸುವುದು ಉತ್ತಮ.
ಇದನ್ನೂ ಓದಿ: ಅಂಗೈಯಲ್ಲಿ ಆರೋಗ್ಯ: ಪಾಲಿಸಿ ಪಂಚ ಸೂತ್ರ, ಪಡೆಯಿರಿ ಉತ್ತಮ ಆರೋಗ್ಯ!
Published On - 5:57 pm, Mon, 23 November 20




