ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಕ್ಕೂ, ನಾಯಿಗಳಿಗೂ ಇದೆಯಾ ಅಮಾವಾಸ್ಯೆ ಸಂಬಂಧ..
ಬೆಂಗಳೂರಿಗರಿಗೆ ಕಂಟಕವಾಗಿರೋ ಬೀದಿನಾಯಿಗಳನ್ನ ಹಿಡಿದು ನಗರ ಹೊರ ವಲಯಕ್ಕೆ ತಂದು ಬಿಡಲಾಗುತ್ತೆ. ಆದ್ರೆ ನಗರದ ಹೊರವಲಯಕ್ಕೆ ಬರುವ ನಾಯಿಗಳಿಗೆ ಹೆದ್ದಾರಿಯೇ ಅಡ್ಡವಾಗಿದೆ. ರಸ್ತೆಯಲ್ಲಿ ಬೇಕಾ ಬಿಟ್ಟಿ ಅಡ್ಡಾಡುವ ಬೀದಿನಾಯಿಗಳಿಂದ ಅಪಘಾತಗಳು ಹೆಚ್ಚುತ್ತಿದ್ದು, ಅಲ್ಲಿನ ಜನ ಅದಕ್ಕೆ ಬೇರೆಯದ್ದೇ ರೂಪ ಕೊಟ್ಟಿದ್ದಾರೆ.

ನೆಲಮಂಗಲ: ವಿಶಾಲವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸೌಂಡ್ ಮಾಡ್ತಾ ಹೋಗ್ತಾ ಇದ್ರೆ, ತಮ್ಮದೇ ಟೀಂ ಕಟ್ಕೊಂಡು ರಸ್ತೆ ಬದಿಯಲ್ಲಿ ರೌಂಡ್ಸ್ ಹಾಕ್ತಾ ಬೀದಿ ನಾಯಿಗಳು ಬೌಬೌ ಅಂತ ಬೊಗಳುತ್ತಿರುತ್ತವೆ. ಈಗ ಅದೇ ನಾಯಿಗಳಿಂದ ಭಾರಿ ಅನಾಹುತಗಳಾಗುತ್ತಿವೆ.
ಬೀದಿ ನಾಯಿಗಳ ಉಪಟಳಕ್ಕೆ ಅಮವಾಸ್ಯೆ ಕರಿ ನೆರಳು: ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರ ವ್ಯಾಪ್ತಿಯ ಅರಿಶಿನಕುಂಟೆ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹಿಡಿಯುವ ನಾಯಿಗಳನ್ನ, ಈ ಭಾಗದಲ್ಲಿ ತಂದು ಬಿಡಲಾಗುತ್ತೆ. ಹೀಗೆ ಬಿಡೋ ನಾಯಿಗಳು ಹೆದ್ದಾರಿ ಪಕ್ಕ ಅಡ್ಡಾದಿಡ್ಡಿ ಓಡಾಡೋದ್ರಿಂದ ಸಾಕಷ್ಟು ಅಪಘಾತಕ್ಕೆ ಕಾರಣವಾಗುತ್ತಿವೆ. ಅದರಲ್ಲೂ ಅಮಾವಾಸ್ಯೆ ಬಂದ್ರೆ ಸಾಕಂತೆ ಈ ನಾಯಿಗಳಿಂದ ಹೆಚ್ಚು ಹೆಚ್ಚು ಅಪಘಾತಗಳು ಆಗುತ್ತಂತೆ.
ಇನ್ನು ಸ್ಥಳೀಯರು ಹೇಳುವಂತೆ ಅಮಾವಾಸ್ಯೆಗೂ ನಾಯಿಗಳು ಬಂದು ಅಪಘಾತ ಮಾಡೋದಕ್ಕೂ ಯಾವುದೇ ಸಂಬಂಧವಿಲ್ಲ. ಹೆದ್ದಾರಿ ಪಕ್ಕದಲ್ಲಿನ ಮಾಂಸಹಾರಿ ಹೋಟೆಲ್ಗಳಲ್ಲಿ, ಢಾಬಾಗಳಲ್ಲಿ ಬಿಸಾಡುವ ಆಹಾರ, ತ್ಯಾಜ್ಯ ತಿನ್ನಲು ನಾಯಿಗಳು ಬರುತ್ತವೆ. ಅಷ್ಟೇ ಅಲ್ಲ ರಸ್ತೆ ಬದಿ ಸುರಿಯುವ ಕೋಳಿ ಕಸ ಹಾಗೂ ಗೃಹೋಪಯೋಗಿ ತ್ಯಾಜ್ಯ ತಿನ್ನಲು ರಸ್ತೆಗೆ ಬರುತ್ತೆ. ಹೀಗೆ ಬರುವ ನಾಯಿಗಳು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವುದರಿಂದ ಅಪಘಾತಗಳು ಹೆಚ್ಚಾಗಿ ನಡೆಯುತ್ತೆ. ಅದು ಬಿಟ್ಟರೆ ಅಮಾವಾಸ್ಯೆ ಬರುವುದಕ್ಕೂ, ನಾಯಿಗಳು ಅಡ್ಡ ಬರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪಶು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಕಾಕತಾಳಿಯ ಎಂಬಂತೆ ಅಮಾವಾಸ್ಯೆ ಹಿಂದೆ ಮುಂದೆ ನಾಯಿಗಳಿಂದಲೇ ಅಪಘಾತಗಳು ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಸ್ಥಳೀಯರು ಕೂಡ ಭಯಕೊಂಡು ತಮ್ಮದೇ ರೀತಿಯಲ್ಲಿ ಕಲ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರು ಎಚ್ಚೆತ್ತು, ನಾಯಿಗಳ ಕಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ, ಅಪಘಾತಗಳನ್ನು ತಪ್ಪಿಸಬೇಕಿದೆ. -ನೆಲಮಂಗಲ ಮೂರ್ತಿ