
ನಿಮ್ಮ ಆಹಾರಕ್ರಮ ಅಥವಾ ಡಯಟ್ನಲ್ಲಿ ಆರೋಗ್ಯಯುತ ಆಹಾರಗಳನ್ನು ಒಳಗೊಂಡಿರುವುದು ಬಹಳ ಮುಖ್ಯ. ವಿವಿಧ ರೋಗಗಳನ್ನು ತಡೆಗಟ್ಟಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುವುದೇ ಈ ಸತ್ವಯುತ ಆಹಾರಗಳು. ಇತ್ತೀಚಿನ ದಿನಗಳಲ್ಲಿ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ತಮ್ಮ ಡಯಟ್ನಲ್ಲಿ ವಿವಿಧ ರೀತಿಯ ಆಹಾರಗಳನ್ನು ಒಳಗೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಪ್ರತಿಯೊಬ್ಬರೂ ಕೂಡ ಅವರವರ ದೇಹದ ಅಗತ್ಯಗಳಿಗೆ ಅನುಗುಣವಾಗಿ ನಿರ್ದಿಷ್ಟ ಆಹಾರಾಗಳನ್ನು ಡಯಟ್ನಲ್ಲಿ ಒಳಗೊಳ್ಳುವುದು ಬಹಳ ಮುಖ್ಯ. ಈ ವಿಚಾರದಲ್ಲಿ ನಮ್ಮ ದೇಹಕ್ಕೆ ಬೇಕಿಲ್ಲದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಜನರ ಆಹಾರ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಹೆಚ್ಚಿನ ಜನರು ದಿನಕ್ಕೆ ಮೂರು ಬಾರಿ ಊಟ ಮಾಡುವುದುಂಟು. ಕೆಲವರು ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ದಿನಕ್ಕೆ ನಾಲ್ಕರಿಂದ ಐದು ಬಾರಿ ತಿನ್ನಬಹುದು. ನೀವು ವ್ಯಾಯಾಮ ಮಾಡದಿದ್ದರೆ ಮತ್ತು ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತರೆ, ಅದು ದೇಹದ ಕೊಬ್ಬು ಮತ್ತು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವರು ತೂಕ ಇಳಿಸಲು ವಿವಿಧ ರೀತಿಯ ಉಪವಾಸಗಳನ್ನು ಅಭ್ಯಾಸ ಮಾಡುತ್ತಾರೆ. ಆಹಾರವನ್ನು ತಿನ್ನುವ ಸರಿಯಾದ ಕ್ರಮ ಬಹಳ ಕಡಿಮೆ ಜನರಿಗೆ ತಿಳಿದಿದೆ. ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಅವರು ಯೂಟ್ಯೂಬ್ನಲ್ಲಿ ತಮ್ಮ ಒಂದು ವೀಡಿಯೊದಲ್ಲಿ ಆರೋಗ್ಯ ದಿನಚರಿಯನ್ನು ಹೇಗೆ ಇಟ್ಟುಕೊಳ್ಳಬೇಕೆಂದು ವಿವರಿಸಿದ್ದಾರೆ. ಅದರಲ್ಲಿ ಅವರು ತಮ್ಮ ಆಹಾರ ಪದ್ಧತಿಯ ಬಗ್ಗೆ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಊಟ ವಿಚಾರದಲ್ಲಿ ಎಚ್ಚರ… ಸರಿಯಾದ ಆಹಾರ, ಸರಿಯಾದ ಸಮಯ, ಸರಿಯಾದ ಕ್ರಮ ಮುಖ್ಯ: ಬಾಬಾ ರಾಮದೇವ್ ಸಲಹೆಗಳಿವು
ಬಾಬಾ ರಾಮದೇವ್ ಅವರು ಇತ್ತೀಚಿನ ತಮ್ಮ ವಿಡಿಯೋವೊಂದರಲ್ಲಿ ಆಹಾರಕ್ರಮ ಎಷ್ಟು ಮಹತ್ವ ಎಂದು ವಿವರಿಸಿದ್ದಾರೆ. ನಿಮ್ಮ ಜೀವನದ ಆದ್ಯತೆಗಳನ್ನು ಹೆಲ್ತ್ ಡೈರಿಯಲ್ಲಿ ಬರೆಯಬಹುದು. ಜೀವನ ಅಥವಾ ಆರೋಗ್ಯದಲ್ಲಿ ನೀವು ಮಾಡಲು ಬಯಸುವ ಯಾವುದೇ ಬದಲಾವಣೆಗಳನ್ನು ಬರೆಯಬಹುದು. ಇದು ನಿಮ್ಮನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ ಎಂದು ಬಾಬಾ ಹೇಳಿದ್ದಾರೆ.
ಶೇ 99ರಷ್ಟು ಜನರು, ತಾವು ಹೇಗೆ ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ. ಕೆಲವರು ಗಬಗಬನೆ ತಿಂದುಬಿಡುವುದುಂಟು. ನಿಧಾನವಾಗಿ ತಿನ್ನಬೇಕೆಂದು ಬುದ್ಧಿ ಹೇಳಿದರೆ ಅದನ್ನು ಅವರು ಒಪ್ಪುವುದಿಲ್ಲ. ಬೇಗ ಬೇಗ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿರಬೇಕು. ಇದರ ಜೊತೆಗೆ, ಅತಿಯಾಗಿ ತಿನ್ನುವುದೂ ಕೂಡ ತಪ್ಪು ಎಂದು ಪತಂಜಲಿ ಸಹ-ಸಂಸ್ಥಾಪಕರು ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.
ಹಾಲು ಮತ್ತು ಉಪ್ಪು ಇತ್ಯಾದಿ ತಪ್ಪು ಆಹಾರ ಸಂಯೋಜನೆಯನ್ನು ತಪ್ಪಿಸಬೇಕು. ಕೆಲವರು ಹಾಲಿನಿಂದ ತಯಾರಿಸಿದ ಚಹಾದೊಂದಿಗೆ ಉಪ್ಪುಮಿಶ್ರಿತ ಬಿಸ್ಕತ್ ಅಥವಾ ತಿಂಡಿಗಳನ್ನು ತಿನ್ನುವುದುಂಟು. ಇದು ತಪ್ಪು ಆಹಾರ ಸಂಯೋಜನೆ. ಇನ್ನೂ ಹಲವರು ಮೊಸರು ಮತ್ತು ಹಾಲಿನ ಪಾಯಸ ಎರಡನ್ನೂ ಒಂದೇ ಭೋಜನದಲ್ಲಿ ತಿನ್ನುತ್ತಾರೆ. ಇದೂ ಕೂಡ ಆರೋಗ್ಯಕ್ಕೆ ಹಾನಿ ಮಾಡಬಹುದು.
ಇದನ್ನೂ ಓದಿ: ಮಲಬದ್ಧತೆ ನಿವಾರಿಸಲು ಬಾಬಾ ರಾಮದೇವ್ ಯೋಗ ಮತ್ತು ಆಯುರ್ವೇದ ಮಾರ್ಗೋಪಾಯಗಳು
ಎಲ್ಲಾ ಆಹಾರ ಮತ್ತು ಇತರ ಖಾದ್ಯಗಳನ್ನು ನಿಮ್ಮ ದೇಹದ ವಾತ, ಪಿತ್ತ ಮತ್ತು ಕಫ ಗುಣಗಳಿಗೆ ಅನುಗುಣವಾಗಿ ಸೇವಿಸಬೇಕು. ಉದಾಹರಣೆಗೆ, ಮಧುಮೇಹ ರೋಗ ಇದ್ದರೆ ಹೆಚ್ಚು ಸಿಹಿ ತಿನ್ನುವುದರಿಂದ ಸಕ್ಕರೆ ಹೆಚ್ಚಾಗುತ್ತದೆ. ಬ್ಲಡ್ ಪ್ರೆಷರ್ ಕಾಯಿಲೆ ಇದ್ದಾಗ ಹೆಚ್ಚು ಉಪ್ಪು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಹೆಚ್ಚು ಎಣ್ಣೆಯುಕ್ತ ಆಹಾರವನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹೆಚ್ಚು ಮೆಣಸಿನಕಾಯಿ ತಿನ್ನುವುದರಿಂದ ಆ್ಯಸಿಡಿಟಿ ಹೆಚ್ಚಾಗುತ್ತದೆ. ಹೆಚ್ಚು ಎಣ್ಣೆಯುಕ್ತ ಮತ್ತು ತಣ್ಣನೆಯ ವಸ್ತುಗಳನ್ನು ತಿನ್ನುವುದರಿಂದ ಕಫ-ಶೀತ ಹೆಚ್ಚಾಗುತ್ತದೆ. ಅದೇ ರೀತಿ, ಹೆಚ್ಚು ಹುಳಿ ಆಹಾರವನ್ನು ತಿನ್ನುವುದರಿಂದ ವಾತ ರೋಗ ಹೆಚ್ಚಾಗುತ್ತದೆ. ಇದು ಕೀಲು ಮತ್ತು ಬೆನ್ನು ನೋವನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹದ ಸ್ವಭಾವ ಮತ್ತು ಅಗತ್ಯಕ್ಕೆ ಅನುಗುಣವಾಗಿ ಇಂಥ ಆಹಾರ ವಸ್ತುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ