
ಸಾಮಾನ್ಯವಾಗಿ ಮದುವೆಯಾಗುವ (marriage) ಸಂದರ್ಭದಲ್ಲಿ ಹುಡುಗಿಯರು ಹಾಗೂ ಮನೆಯವರು ವರ ಉತ್ತಮ ಮನೆತನದವನೇ, ಆಸ್ತಿ ಅಂತಸ್ತನ್ನು ಹೊಂದಿದ್ದಾನೆಯೇ, ಆತನ ಆದಾಯ ಎಷ್ಟಿದೆ, ನೋಡಲು ಸುಂದರವಾಗಿದ್ದಾನೆಯೇ ಎಂಬುದನ್ನು ಮಾತ್ರ ಪರಿಗಣಿಸುತ್ತಾರೆ. ಮದುವೆಯು ಜೀವನದ ಒಂದು ಪ್ರಮುಖ ನಿರ್ಧಾರವಾಗಿರುವುದರಿಂದ ಕೇವಲ ವಿಷಯಗಳನ್ನು ಪರಿಗಣಿಸುವುದು ಸೂಕ್ತವಲ್ಲ ಆದಾಯದ ಬದಲು ಮುಖ್ಯವಾಗಿ ಹುಡುಗನ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆಸ್ತಿ ಅಂತಸ್ತಿದ್ದು, ಹುಡುಗನ ಗುಣ ಸ್ವಭಾವವೇ ಸರಿ ಇಲ್ಲದಿದ್ದರೆ, ಆತನನ್ನು ಮದುವೆಯಾದ ಹುಡುಗಿ ಜೀವನಪರ್ಯಂತ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಹುಡುಗಿಯು ಮದುವೆಯಾಗುವ ಹುಡುಗನ ಬಗ್ಗೆ ಈ ವಿಷಯಗಳನ್ನು ತಿಳಿಯಲೇಬೇಕು.
ಆಚಾರ್ಯ ಚಾಣಕ್ಯರ ಪ್ರಕಾರ, ಪುರುಷ ಎಷ್ಟೇ ಸ್ಮಾರ್ಟ್ ಆಗಿ ಕಾಣಲಿ ಅಥವಾ ಎಷ್ಟೇ ಹಣವಿರಲಿ, ಆದರೆ ಅವನ ಸ್ವಭಾವ ಕೆಟ್ಟದಾಗಿದ್ದರೆ, ಅಂತಹವನನ್ನು ಮದುವೆಯಾಗುವುದು ವ್ಯರ್ಥ ಎಂದಿದ್ದಾರೆ ಚಾಣಕ್ಯ. ನೀವು ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ್ದರೆ, ಮೊದಲು ಮಾಡಬೇಕಾದದ್ದು ಅವನು ಇತರರೊಂದಿಗೆ ಹೇಗೆ ವರ್ತಿಸುತ್ತಾನೆ, ಹಿರಿಯರಿಗೆ ಹಾಗೂ ಇತರೆ ಹೆಣ್ಣು ಮಕ್ಕಳಿಗೆ ಗೌರವ ನೀಡುತ್ತಾನೆಯೇ ಎಂಬುದನ್ನು ಪರೀಕ್ಷಿಸಬೇಕು ಚಾಣಕ್ಯರ ಪ್ರಕಾರ, ಇತರರನ್ನು ಗೌರವಿಸುವ ಪುರುಷನು ತನ್ನ ಹೆಂಡತಿಯನ್ನು ಸಹ ಗೌರವಿಸುತ್ತಾನೆ. ಹಾಗಾಗಿ ಪ್ರತಿಯೊಬ್ಬ ಹುಡುಗಿಯು ಮದುವೆಗೂ ಮುನ್ನ ತನ್ನ ಹುಡುಗ ಉತ್ತಮ ಗುಣ ಸ್ವಭಾವ, ಸಂಸ್ಕಾರ ಹೊಂದಿದ್ದಾನೆಯೇ ಎಂಬುದನ್ನು ಪರೀಕ್ಷಿಸಲೇಬೇಕು.
ಹುಡುಗಿಯರೇ ನೀವು ಯಾವಾಗಲೂ ಸೋಮಾರಿ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಕು ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಸೋಮಾರಿ ವ್ಯಕ್ತಿಯು ತನ್ನ ಕುಟುಂಬವನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲು ಸಾಧ್ಯವಿಲ್ಲ, ಅದೇ ರೀತಿ ತಾನು ಮದುವೆಯಾಗುವ ಹುಡುಗಿಯ ಆಸೆ, ಆಕಾಂಕ್ಷೆಗಳನ್ನು ಪೂರೈಸಲು ಸಹ ಆತನಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಸ್ವಾವಲಂಬಿ, ಕಠಿಣ ಪರಿಶ್ರಮಿಯಾಗಿರುವ ಪುರುಷನನ್ನು ಮದುವೆಯಾಗುವುದು ಉತ್ತಮ. ಅಂತಹ ಪುರುಷನು ನಿಮ್ಮನ್ನು ಸಹ ಜೀವನಪರ್ಯಂತ ಚೆನ್ನಾಗಿ ನೋಡಿಕೊಳ್ಳುತ್ತಾನೆ.
ಪ್ರತಿಯೊಬ್ಬ ಹುಡುಗಿಯು ತಾನು ಮದುವೆಯಾಗುವ ಹುಡುಗ ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಾನೆಯೇ ಎಂಬುದನ್ನು ತಿಳಿದುಕೊಳ್ಳಲೇಬೇಕು. ಏಕೆಂದರೆ ಇತರೆ ಹೆಣ್ಣನ್ನು ಗೌರವಿಸುವ ಪುರುಷನು ನಿಮನ್ನು ಸಹ ಗೌರವದಿಂದ ನೋಡಿಕೊಳ್ಳುತ್ತಾನೆ. ಇದಕ್ಕಾಗಿ ನೀವು ಆ ಹುಡುಗ ತನ್ನ ತಾಯಿ ಮತ್ತು ಸಹೋದರಿಯನ್ನು ಹೇಗೆ ನಡೆಸಿಕೊಳ್ಳುತ್ತಾನೆ, ನೆರೆ ಹೊರೆಯ ಮಹಿಳೆಯರಿಗೆ ಗೌರವ ನೀಡುತ್ತಾನೆಯೇ ಎಂಬುದನ್ನು ಗಮನಿಸಿ. ತನ್ನ ಮನೆಯಲ್ಲಿರುವ ಮಹಿಳೆಯರನ್ನು ಗೌರವಿಸುವ ಪುರುಷನು ತನ್ನ ಹೆಂಡತಿಯನ್ನು ಸಹ ಉತ್ತಮವಾಗಿ ನಡೆಸಿಕೊಳ್ಳುತ್ತಾನೆ.
ಇದನ್ನೂ ಓದಿ: ಸಂಬಂಧಿಕರ ಮನೆಗೆ ಭೇಟಿ ನೀಡುವ ಮುನ್ನ ಈ ವಿಷಯಗಳನ್ನು ನೆನಪಿಡಿ
ಚಾಣಕ್ಯ ನೀತಿಯ ಪ್ರಕಾರ, ಕೋಪ, ದುರಾಸೆ ಮತ್ತು ವ್ಯಸನವು ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇಂತಹ ದುರಾಭ್ಯಾಸಗಳಿರುವ ವ್ಯಕ್ತಿಯನ್ನು ಮದುವೆಯಾಗುವ ಹೆಣ್ಣಿನ ಜೀವನ ಸಹ ಹಾಳಾಗುತ್ತದೆ. ಆದ್ದರಿಂದ, ಮದುವೆಯಾಗುವ ಮೊದಲು, ಹುಡುಗಿ ತಾನು ಮದುವೆಯಾಗಲಿರುವ ಪುರುಷನಿಗೆ ಮದ್ಯಪಾನ, ಜೂಜಾಟ ಅಥವಾ ಅತಿಯಾದ ಕೋಪದಂತಹ ಯಾವುದೇ ಕೆಟ್ಟ ಅಭ್ಯಾಸಗಳಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲ ವ್ಯಕ್ತಿ ಮಾತ್ರ ಹೆಂಡತಿ, ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಚಾಣಕ್ಯ ನೀತಿಯ ಪ್ರಕಾರ, ಕುಟುಂಬ ಮತ್ತು ಸಂಸ್ಕೃತಿ ವ್ಯಕ್ತಿಯ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಮದುವೆಯಾಗುವ ಹುಡುಗನ ನಡವಳಿಕೆ ಗುಣ ಸ್ವಭಾವ ಮಾತ್ರವಲ್ಲ, ಆತನ ಕುಟುಂಬದ ಹಿನ್ನೆಲೆ, ಅವರು ಸಂಸ್ಕಾರವಂತರೇ ಎಂಬುದನ್ನು ಪರೀಕ್ಷಿಸುವುದು ಮುಖ್ಯ. ಉತ್ತಮ ಮೌಲ್ಯಗಳು ಮತ್ತು ಸಕಾರಾತ್ಮಕ ವಾತಾವರಣವು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಆದ್ದರಿಂದ ಹುಡುಗಿಯರು ಯಾವಾಗಲೂ ಸುಸಂಸ್ಕೃತ ಕುಟುಂಬದ ವರನನ್ನೇ ಆಯ್ಕೆ ಮಾಡಬೇಕು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ