Ganesha Chaturthi 2023: ಗೌರಿಪುತ್ರನಿಗೆ  ಪ್ರಿಯವಾದ ಹಣ್ಣುಗಳಾವುವು? ಇದರಿಂದ ಆರೋಗ್ಯ ಪ್ರಯೋಜನಗಳೇನು? 

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 13, 2023 | 7:03 PM

ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನೂ ಕೆಲವು ದಿನಗಳು ಮಾತ್ರ ಬಾಕಿ ಇದೆ. ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗೂ ಬಹುತೇಕ ಎಲ್ಲರ  ಮನೆಯಲ್ಲೂ ಗಣೇಶನ ಮೂರ್ತಿಯನ್ನು  ಪ್ರತಿಷ್ಠಾಪಿಸಿ,  ಹಣ್ಣು ಹಂಪಲು, ಸಿಹಿತಿನಿಸು ಸೇರಿದಂತೆ  ಹಲವು ಬಗೆಯ ನೈವೇದ್ಯಗಳನ್ನು ಇಡಲಾಗುತ್ತದೆ. ಈ ಬಾರಿಯ ಹಬ್ಬದಂದು ವಿಶೇಷವಾಗಿ ನೀವು ಗಣೇಶನಿಗೆ ಅತ್ಯಂತ  ಪ್ರಿಯವಾದ ಹಣ್ಣುಗಳನ್ನು  ನೈವೇದ್ಯ ರೂಪದಲ್ಲಿ ಇಡಬಹುದು.  ಹಾಗಾದರೆ ಗಣೇಶನಿಗೆ ಪ್ರಿಯವಾದ ಹಣ್ಣುಗಳು ಯಾವುವು, ಅವುಗಳ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.

Ganesha Chaturthi 2023: ಗೌರಿಪುತ್ರನಿಗೆ  ಪ್ರಿಯವಾದ ಹಣ್ಣುಗಳಾವುವು? ಇದರಿಂದ ಆರೋಗ್ಯ ಪ್ರಯೋಜನಗಳೇನು? 
ಸಾಂದರ್ಭಿಕ ಚಿತ್ರ
Follow us on
ಗಣೇಶ ಚತುರ್ಥಿ ಹಬ್ಬಕ್ಕೆ (Ganesha Chaturthi) ಇನ್ನೇನು ಕೆಲವು ದಿನಗಳು ಮಾತ್ರ ಬಾಕಿ ಇದೆ. ಗಣೇಶ ಚತುರ್ಥಿ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಷ ಪಕ್ಷದ ಚತುರ್ಥಿಯ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.  ಪ್ರತಿಯೊಂದು ಊರುಗಳಲ್ಲಿ ಮತ್ತು ಹೆಚ್ಚಿನವರ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಶ್ರದ್ದಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಮತ್ತು ಚೌತಿಯ ದಿನದ ಪೂಜಾ ಸಂದರ್ಭದಲ್ಲಿ ಗಣೇಶನಿಗೆ ಹಲವು ಬಗೆಯ ಸಿಹಿ ತಿನಿಸುಗಳು ಹಾಗೂ ಹಣ್ಣು ಹಂಪಲುಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಹಣ್ಣುಗಳನ್ನು ಗಣೇಶನಿಗೆ ಅರ್ಪಣೆ ಮಾಡುತ್ತಾರೆ.  ಗಣೇಶನಿಗೆ ಕೆಲವೊಂದು ಪ್ರಿಯವಾದ ಹಣ್ಣುಗಳಿವೆ ಈ ಬಾರಿಯ ಹಬ್ಬದಂದು ವಿಶೇಷವಾಗಿ ನೀವು ಗೌರಿಪುತ್ರನಿಗೆ ಪ್ರಿಯವಾದ ಹಣ್ಣುಗಳನ್ನು  ನೈವೇದ್ಯ ರೂಪದಲ್ಲಿ ಇಡಬಹುದು.  ಹಾಗಾದರೆ ಗಣೇಶನಿಗೆ ಪ್ರಿಯವಾದ ಹಣ್ಣುಗಳು ಯಾವುವು, ಅವುಗಳ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ಗಣೇಶನಿಗೆ ಪ್ರಿಯವಾದ  ಹಣ್ಣುಗಳು ಮತ್ತು ಅವುಗಳ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:

ಸೀತಾಫಲ:  ಸೀತಾಫಲ ಗಣೇಶನಿಗೆ ಪ್ರಿಯವಾದ ಹಣ್ಣುಗಳಲ್ಲಿ ಸೀತಾಫಲ ಕೂಡಾ ಒಂದು. ಆದ್ದರಿಂದ ಗೌರಿ ಪುತ್ರನ ಪೂಜೆಯಲ್ಲಿ ಸೀತಾಫಲ ಹಣ್ಣು ಇರಲೇಬೇಕು.  ಹಾಗಾಗಿ ನೀವು ಈ ಬಾರಿಯ ಗಣೇಶ ಚತುರ್ಥಿಯ ದಿನ ಈ ಹಣ್ಣನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಬಹುದು.  ಗೌರಿ ಪುತ್ರನಿಗೆ ಪ್ರಿಯವಾದ ಈ ಹಣ್ಣು ಹಲವಾರು   ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಸೀತಾಫಲದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಸಿ ಮತ್ತು ವಿಟಮಿ ಬಿ 6 ಜೀವಸತ್ವವಿದೆ. ಅಲ್ಲದೆ ಈ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.  ಇದು ಕ್ಯಾನ್ಸರ್ ಅಥವಾ ಯಾವುದೇ ದೀರ್ಘಾ ಕಾಲದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ  ಬಲವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸೀತಾಫಲದ ಸೇವನೆಯು ಉತ್ತಮ.
ಬಾಳೆಹಣ್ಣು:  ಸಾಮಾನ್ಯವಾಗಿ ಎಲ್ಲಾ ದೇವರ ಪೂಜೆಯಲ್ಲೂ ಬಾಳೆಹಣ್ಣು ಇರಲೇಬೇಕು. ಅದರಲ್ಲೂ ಬಾಳೆಹಣ್ಣು ಗಣೇಶನಿಗೆ ಅಚ್ಚುಮೆಚ್ಚು.  ಈ ಹಣ್ಣನ್ನು ಕೂಡಾ ದೇವರಿಗೆ ನೈವೇದ್ಯದ ಜೊತೆಗೆ ಇಡಲಾಗುತ್ತದೆ. ದೇವರ ಪೂಜೆಗೆ ಮಾತ್ರವಲ್ಲದೆ ಬಾಳೆಹಣ್ಣು ನಮ್ಮ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದು ವಿಟಮಿನ್ ಎ, ಸಿ ಮತ್ತು ವಿಟಮಿ ಬಿ6, ಫೈಬರ್, ಮೆಗ್ನೇಸಿಯಂ, ಫೋಲೇಟ್ ಫೋಲೇಟ್ ಕಬ್ಬಿಣ ಹಾಗೂ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬಾಳೆಹಣ್ಣಿನ ನಿಯಮಿತ ಸೇವೆಯಿಂದ ರಕ್ತದೊತ್ತಡವನ್ನು ಸಹ ನಿಯಂತ್ರಣದಲ್ಲಿಡಬಹುದು.  ಮಾತ್ರವಲ್ಲದೆ ಇದು  ಹೃದ್ರೋಗ, ಮಧುಮೇಹ, ಅಸ್ತಮಾದಂತಹ ರೋಗಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಾವು:  ಮಾವು ಕೂಡಾ ಗಣಪನಿಗೆ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ.  ಗಣೇಶನಿಗೆ ನೆಚ್ಚಿನ ಹಣ್ಣಾಗಿರುವ ಮಾವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿರುವ ಹಲವಾರು ಜೀವಸತ್ವಗಳು ಮತ್ತು ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಕಾಪಾಡಲು, ಚರ್ಮದ ಆರೋಗ್ಯವನ್ನು ಸುಧಾರಿಸಲು  ಪ್ರತಿರಕ್ಷಣಾ ವ್ಯವಸ್ಥೆಯ್ನು ಬಲಪಡಿಸಲು ಸಹಕಾರಿಯಾಗಿದೆ.  ಅಲ್ಲದೆ ಇದರಲ್ಲಿರುವ ಉತ್ಕರ್ಷಣ ನಿರೋಧಕ, ವಿಟಮಿನ್ ಸಿ ಹಾಗೂ ಬೀಟಾ- ಕ್ಯಾರೋಟೀನ್ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಇದನ್ನೂ ಓದಿ:  ಗಣಪನ  ನೈವೇದ್ಯಕ್ಕೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಮೋತಿಚೂರ್ ಲಡ್ಡು
ಬೇಲ್ ಅಥವಾ ಮರ ಸೇಬು: ಬೇಲ್ ಅಥವಾ ಮರ ಸೇಬು ಗಣೇಶನಿಗೆ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ಕೂಡಾ ಗಣೇಶನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಬಹುದು.  ಇದರ ಔಷಧೀಯ ಪ್ರಯೋಜನಗಳಿಂದಾಗಿ ಆಯುರ್ವೇದದಲ್ಲಿ ಬೇಲ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.  ಇದರಲ್ಲಿರುವ ವಿಟಮಿನ್, ಕ್ಯಾಲ್ಸಿಯಂ ಮತ್ತು ಟ್ಯಾನಿನ್ ಗಳು ರಕ್ತವನ್ನು ಶುದ್ಧೀಕರಿಸಲು ಮತ್ತು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಟೊಕೆಮಿಕಲ್ಸ್ ಮತ್ತು ಫ್ಲೇವನಾಯ್ಡ್ ಗಳು ಹೃದಯ ಮತ್ತು ಯಕೃತ್ತನ್ನು ಆರೋಗ್ಯಕರವಾಗಿಡಲು ತುಂಬಾ ಪ್ರಯೋಜನಕಾರಿ. ಹಾಗೂ  ಇದರಲ್ಲಿರುವ ಉತ್ತಮ  ಪ್ರಮಾಣದ ವಿಟಮಿನ್ ಸಿ ಜೀವಸತ್ವವು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಸೀಬೆ ಹಣ್ಣು: ನಿಮಗೆ ಗೊತ್ತಾ, ಪೇರಳೆ ಕೂಡಾ ಗಣೇಶನ ನೆಚ್ಚಿನ ಹಣ್ಣುಗಳಲ್ಲಿ ಒಂದಾಗಿದೆ.  ಈ ಬಾರಿಯ ಗಣೇಶ ಚತುರ್ಥಿಯ ದಿನದಂದು ಗೌರಿ ಪುತ್ರನಿಗೆ ಪೇರಳೆ ಹಣ್ಣುಗಳನ್ನು ಅರ್ಪಿಸಬಹುದು. ಸುಲಭವಾಗಿ ಲಭ್ಯವಿರುವ ಈ ಹಣ್ಣು  ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಇದರಲ್ಲಿ ಹೇರಳವಾದ ವಿಟಮಿನ್ ಸಿ ಪೋಷಕಾಂಶವಿದ್ದು, ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಮಧುಮೇಹ, ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಲು ಕೂಡಾ ಸಹಕಾರಿಯಾಗಿದೆ. ಪೇರಳೆಯಲ್ಲಿರುವ ವಿಟಮಿನ್ ಸಿ ಅಂಶವು ಕಿತ್ತಳೆಗಿಂತ ಐದು ಪಟ್ಟು ಹೆಚ್ಚು. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ನಿಮ್ಮ ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣು:  ಗಣೇಶನಿಗೆ ನೇರಳೆ ಹಣ್ಣು ಕೂಡಾ ಅತ್ಯಂತ ಪ್ರಿಯವಾದ ಹಣ್ಣುಗಳಲ್ಲಿ ಒಂದಾಗಿದೆ.  ಈ ಹಣ್ಣು ಕೂಡಾ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.  ಇದು ಪೊಟ್ಯಾಸಿಯಂ, ತಾಮ್ರ, ಮ್ಯಾಂಗನೀಸ್​​ನ ಶಕ್ತಿ ಕೇಂದ್ರವಾಗಿದೆ. ಈ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಿರುವ ಕಾರಣ ಇದು ಮಲಬದ್ಧತೆಯ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ. ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಈ ಹಣ್ಣು ಸಹಕಾರಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Wed, 13 September 23