Krishna Janmashtami 2024 : ಹಬ್ಬಕ್ಕೆ ಕರಾವಳಿ ಸಾಂಪ್ರದಾಯಿಕ ತಿನಿಸು ಚಿಲಿಂಬಿ ಅಡ್ಡೆ, ಇಲ್ಲಿದೆ ರೆಸಿಪಿ

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಕೂಡ ಒಂದು. ಭಗವಂತ ಕೃಷ್ಣನು ಜನಿಸಿದ ಈ ದಿನವನ್ನು ಇಡೀ ದೇಶದಾದಂತ್ಯ ಸಂಭ್ರಮದಿಂದ ಆಚರಿಸಲಾಗುತ್ತದೆ. ಉಡುಪಿಯ ಭಾಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಿಂದಿನ ದಿನವೇ ಎಲ್ಲರ ಮನೆಯಲ್ಲಿ ಈ ಸಾಂಪ್ರಾದಾಯಿಕ ತಿನಿಸು ಚಿಲಿಂಬಿಯನ್ನು ಮಾಡಲಾಗುತ್ತದೆ. ಹಾಗಾದ್ರೆ ಈ ರೆಸಿಪಿಯು ಮಾಡುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

Krishna Janmashtami 2024 : ಹಬ್ಬಕ್ಕೆ ಕರಾವಳಿ ಸಾಂಪ್ರದಾಯಿಕ ತಿನಿಸು ಚಿಲಿಂಬಿ ಅಡ್ಡೆ, ಇಲ್ಲಿದೆ ರೆಸಿಪಿ
ಸಾಂದರ್ಭಿಕ ಚಿತ್ರ
Edited By:

Updated on: Aug 21, 2024 | 9:38 AM

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಹುಟ್ಟಿದ ದಿನ, ಈ ದಿನದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ದೇಶದಾದ್ಯಂತ ಭಕ್ತರು ಆಚರಿಸುತ್ತಾರೆ. ಈ ವರ್ಷ, ಆಗಸ್ಟ್ 26 ರಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಮಾಡಿ ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ಉಡುಪಿಯ ಕೆಲ ಭಾಗದಲ್ಲಿ ಕೃಷ್ಣ ಜನ್ಮಾಷ್ಟಮಿಯ ಒಂದು ದಿನ ಮುಂಚಿತವಾಗಿಯೇ ಸಾಂಪ್ರಾದಾಯಿಕ ತಿನಿಸು ಚಿಲಿಂಬಿ ಅಡ್ಡೆ ಮಾಡಲಾಗುತ್ತದೆ. ಈ ಸಿಹಿ ತಿನಿಸು ತಿನ್ನಲು ರುಚಿಕರ ಮಾತ್ರವಲ್ಲದೇ ಮಾಡುವುದಕ್ಕೂ ಸುಲಭ. ಈ ರುಚಿಕರ ತಿನಿಸನ್ನು ಸವಿಯುವುದರೊಂದಿಗೆ ಹಬ್ಬದ ಸಂಭ್ರಮವು ಆರಂಭವಾಗುತ್ತದೆ.

ಚಿಲಿಂಬಿ ಅಡ್ಡೆ ಮಾಡಲು ಬೇಕಾಗುವ ಸಾಮಗ್ರಿಗಳು

* ಹಲಸಿನ ಮರದ ಎಲೆ

* ಒಂದು ಕಪ್ ಕುಚ್ಚಲಕ್ಕಿ

* ತೆಂಗಿನಕಾಯಿ ತುರಿ

* ಬೆಲ್ಲದ ತುರಿ

* ತುಪ್ಪ

* ಏಲಕ್ಕಿ ಪುಡಿ

* ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ; ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ರೆಸಿಪಿ ಇಲ್ಲಿದೆ

ಚಿಲಿಂಬಿ ಅಡ್ಡೆ ಮಾಡಲು ವಿಧಾನ

* ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಎಂಟು ಗಂಟೆಗಳ ಕಾಲ ನೆನೆಸಿಡಬೇಕು.

* ನೆನೆಸಿಟ್ಟ ಅಕ್ಕಿಯನ್ನು ನೀರು ಮತ್ತು ಉಪ್ಪು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ.

* ತೆಂಗಿನಕಾಯಿ ತುರಿಗೆ ಬೆಲ್ಲ, ಏಲಕ್ಕಿ ಪುಡಿ ಬೆರೆಸಿಟ್ಟುಕೊಳ್ಳಿ.

* ಹಲಸಿನ ಎಲೆಗಳನ್ನು ಕೋನ್‌ ಆಕಾರದಲ್ಲಿ ಸುತ್ತಿ ಕಡ್ಡಿಯಿಂದ ಚುಚ್ಚಿ ಬಿಗಿ ಮಾಡಿಕೊಳ್ಳಿ.

* ಕೋನ್ ಒಳಗೆ ರುಬ್ಬಿದ ಮಿಶ್ರಣವನ್ನು ಹಾಕಿ ತೆಳುವಾಗಿ ಹರಡಿಸಿಕೊಳ್ಳಿ.

* ಆ ಬಳಿಕ ಇದಕ್ಕೆ ಬೆಲ್ಲ, ಕಾಯಿತುರಿ ಹಾಗೂ ಏಲಕ್ಕಿ ಮಿಶ್ರಣವನ್ನು ತುಂಬಿಸಿ, ಬೆಲ್ಲವು ಕಾಣದಂತೆ ಅದರ ಮೇಲೆ ರುಬ್ಬಿದ ಅಕ್ಕಿ ಮಿಶ್ರಣವನ್ನು ಹರಡಿಸಿಕೊಳ್ಳಿ.

* ಹೀಗೆ ಮಾಡಿದ ಈ ಚಿಲಿಂಬಿ ಕೋನ್‌ಗಳನ್ನು ಹಬೆಯಲ್ಲಿ ಹದಿನೈದು ನಿಮಿಷಗಳ ಕಾಲ ಬೇಯಿಸಿದರೆ ಸಾಂಪ್ರದಾಯಿಕ ತಿನಿಸು ಚಿಲಿಂಬಿ ಅಡ್ಡೆ ಸವಿಯಲು ಸಿದ್ಧ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:28 am, Wed, 21 August 24

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us