AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Communal Clashes: ಕವಿತೆ ಅವಿತಿಲ್ಲ; ನಾಳೆ ಹುಟ್ಟುವನು ತಾನೂ ಹಿಂದುಮುಂದಾಗಿ

Nuggikere Dharwad : ‘ಇವೊತ್ತು ಸೂರ್ಯ ಮುಳುಗುವದರೊಳಗೆ, ಇದೇ ಈ ಊರಿನ ಅದೇನೋ ಮಂದಿ, ಎಮ್ಮೆ ಕೋಣಗಳ ಮೇಲೆ ಸವಾರಿ ಮಾಡುತ್ತಾ, ಸಾಗುತ್ತಾ ಇರುತ್ತಾರೆ ಪಡುವಲದ ಕಡೆಗೆ.’ ಡಾ. ಎಚ್. ಎಸ್. ಶಿವಪ್ರಕಾಶ್

Communal Clashes: ಕವಿತೆ ಅವಿತಿಲ್ಲ; ನಾಳೆ ಹುಟ್ಟುವನು ತಾನೂ ಹಿಂದುಮುಂದಾಗಿ
ಕವಿ ಎಚ್ ಎಸ್ ಶಿವಪ್ರಕಾಶ್
ಶ್ರೀದೇವಿ ಕಳಸದ
|

Updated on:Apr 11, 2022 | 11:31 AM

Share

ಕವಿತೆ ಅವಿತಿಲ್ಲ : ನಬೀಸಾಬ್, ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ನಿನ್ನೆ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ; ಮನಸ್ಸು ವಿಷಣ್ಣವಾಗಿದೆ. ಆಕ್ರೋಶ ಅವಡುಗಚ್ಚಿ ಕುಳಿತಿದೆ. ಮಾತು ಸೋಲುತ್ತಿವೆ. ಅದೆಷ್ಟು ಅಗೆಯುತ್ತೀರೋ ಅಗೆಯಿರಿ. ನೀವು ಅಗೆದಷ್ಟೂ ನನ್ನನ್ನೇ ನಾ ಬಗೆದುಕೊಳ್ಳುತ್ತೇನೆ ಎನ್ನುತ್ತಿದೆ ಈ ಹೊತ್ತಿನಲ್ಲಿ ಕವಿತೆ.

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕವಿ ಡಾ. ಎಚ್. ಎಸ್. ಶಿವಪ್ರಕಾಶ್ ಕವಿತೆ

ಮುನ್ನೋಟ

ಇವೊತ್ತು ಸೂರ್ಯ ಮುಳುಗುವದರೊಳಗೆ ಇದೇ ಈ ಊರಿನ ಅದೇನೋ ಮಂದಿ ಎಮ್ಮೆ ಕೋಣಗಳ ಮೇಲೆ ಸವಾರಿ ಮಾಡುತ್ತಾ ಸಾಗುತ್ತಾ ಇರುತ್ತಾರೆ ಪಡುವಲದ ಕಡೆಗೆ ಹಿಂದುಮುಂದಾಗಿ ಹಿಂಡುಹಿಂಡಾಗಿ

ಇವೊತ್ತು ಸೂರ್ಯ ಮುಳುಗುವುದರೊಳಗೆ ಇದು ಈ ಥರ ಆಗಲೇಬೇಕೆಂದು ಯಾರೊಬ್ಬರಿಗೂ ಗೊತ್ತಿಲ್ಲ. ಆದ್ದರಿಂದಲೇ ಸಾಗಲೇಬೇಕಾಗಿದೆ ಎಲ್ಲಾ ಪಡುವಲದ ಕಡೆಗೆ ಹಿಂದುಮುಂದಾಗಿ ಹಿಂಡುಹಿಂಡಾಗಿ

ಇವೊತ್ತು ಸೂರ್ಯ ಮುಳುಗುವುದರೊಳಗೆ ಇದು ಈ ಥರ ಆಗಲೇಬೇಕೆಂದು ಗೊತ್ತಿದೆ ನನಗೆ ಚೆನ್ನಾಗಿ, ಆದರೂ ಸಾಗಲೇಬೇಕು ನಾನೂ ಎಲ್ಲರೂ ಸಾಗುತ್ತಿರುವಾಗ ಪಡುವಲದ ಕಡೆಗೆ ಹಿಂದುಮುಂದಾಗಿ ಹಿಂಡುಹಿಂಡಾಗಿ

ನಾವೆಲ್ಲಾ ದಾಟಿ ಹೋದ ಪಡುವಲದಲ್ಲಿ ಈವೊತ್ತು ಸೂರ್ಯ ಮುಳುಗಿದ ಮೇಲೆ ನಾಳೆ ಹುಟ್ಟುವನು ತಾನೂ ಹಿಂದುಮುಂದಾಗಿ

ಅದಕ್ಕೆ ಮೊದಲೇ ಹೊರಡಿ ಪಡುವಲದ ಕಡೆಗೆ ಹಿಂದುಮುಂದಾಗಿ ಹಿಂಡುಹಿಂಡಾಗಿ

(ಹಳೆಯ ಕವಿತೆ. ಎಲ್ಲ ಕಾಲಕ್ಕೂ ಸಲ್ಲುವ ಗುಣವಿದ್ದಿದ್ದರಿಂದ ಈ ಕವಿತೆಯನ್ನು ಪ್ರಕಟಿಸಲಾಗಿದೆ.)

ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ. : tv9kannadadigital@gmail.com

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ನಿಮ್ಮ ಜೈಶ್ರೀರಾಮ ಘೋಷಣೆಯ ಬರಿ ಹರಣ ಹರಣ ಹರಣ

ಇದನ್ನೂ ಓದಿ : Communal Clashes: ಕವಿತೆ ಅವಿತಿಲ್ಲ; ಗೆರೆ ಎಳೆಯೋಣ ಚುಕ್ಕಿಗಳ ಬಿಡಿಸೋಣ ಮನುಜಧರ್ಮದ ಸುಂದರ ರಂಗೋಲಿ ಹರಡೋಣ 

Published On - 10:56 am, Mon, 11 April 22