9 ಗುರಿ, ಪಾಕಿಸ್ತಾನದಲ್ಲಿ 100ಕ್ಕೂ ಹೆಚ್ಚು ಉಗ್ರರ ಹತ್ಯೆ; ಆಪರೇಷನ್ ಸಿಂಧೂರ್ ಕುರಿತು ಸಂಸತ್​​ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ

ಲೋಕಸಭಾ ಅಧಿವೇಶನದಲ್ಲಿ ಇಂದು ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್,'ಪಾಕಿಸ್ತಾನವೇ ಸೋಲನ್ನು ಒಪ್ಪಿಕೊಂಡಿತು, ಯುದ್ಧವನ್ನು ನಿಲ್ಲಿಸಲು ಕದನವಿರಾಮಕ್ಕೆ ಮುಂದಾಯಿತು' ಎಂದು ಹೇಳಿದ್ದಾರೆ. ಯಾವುದೇ ಒತ್ತಡದಿಂದ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಲಾಗಿದೆ ಎಂದು ಹೇಳುವುದು ಅಥವಾ ನಂಬುವುದು ಸಂಪೂರ್ಣವಾಗಿ ತಪ್ಪು. ಇದು ಆಧಾರರಹಿತವಾದುದು ಎಂದು ಸ್ಪಷ್ಟಪಡಿಸಿದ್ದಾರೆ.

9 ಗುರಿ, ಪಾಕಿಸ್ತಾನದಲ್ಲಿ 100ಕ್ಕೂ ಹೆಚ್ಚು ಉಗ್ರರ ಹತ್ಯೆ; ಆಪರೇಷನ್ ಸಿಂಧೂರ್ ಕುರಿತು ಸಂಸತ್​​ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ
Rajnath Singh In Session

Updated on: Jul 28, 2025 | 2:58 PM

ನವದೆಹಲಿ, ಜುಲೈ 28: ಆಪರೇಷನ್ ಸಿಂಧೂರ್ (Operation Sindoor) ಕುರಿತು ಸಂಸತ್ತಿನಲ್ಲಿ ಚರ್ಚೆ ಪ್ರಾರಂಭವಾಗಿದೆ. ನೆರೆಯ ಪಾಕಿಸ್ತಾನದಲ್ಲಿ (Pakistan)  ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ನಡೆಸುವ ಮೂಲಕ ಭಯೋತ್ಪಾದನೆಯ ವಿರುದ್ಧ ಭಾರತದ ಕ್ರಮದ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) 16 ಗಂಟೆಗಳ ಚರ್ಚೆಯನ್ನು ಪ್ರಾರಂಭಿಸಿದ್ದಾರೆ. ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) 26 ಅಮಾಯಕ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಗೆ ಭಾರತದ ಪ್ರತೀಕಾರದ ಕ್ರಮವೇ ಆಪರೇಷನ್ ಸಿಂಧೂರ್. ಈ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ರಾಜನಾಥ್ ಸಿಂಗ್, ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಲು ಕೇವಲ ’22 ನಿಮಿಷಗಳು’ ತೆಗೆದುಕೊಂಡಿತು ಎಂದು ಹೈಲೈಟ್ ಮಾಡಿ ಹೇಳಿದ್ದಾರೆ. ಗಡಿಗಳನ್ನು ರಕ್ಷಿಸಲು ಅವಿರತವಾಗಿ ಕೆಲಸ ಮಾಡುವ ಸೈನಿಕರಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

“ಪಹಲ್ಗಾಮ್ ದಾಳಿಯ ನಂತರ, ನಮ್ಮ ಸಶಸ್ತ್ರ ಪಡೆಗಳು ಕ್ರಮ ಕೈಗೊಂಡವು. 100ಕ್ಕೂ ಹೆಚ್ಚು ಭಯೋತ್ಪಾದಕರು, ಅವರ ಟ್ರೈನಿಂಗ್ ಕ್ಯಾಂಪ್​ಗಳನ್ನು ಗುರಿಯಾಗಿಸಿಕೊಂಡಿದ್ದ 9 ಭಯೋತ್ಪಾದಕ ಮೂಲಸೌಕರ್ಯ ತಾಣಗಳ ಮೇಲೆ ನಿಖರವಾಗಿ ದಾಳಿ ನಡೆಸಲಾಯಿತು” ಎಂದು ಅವರು ಒತ್ತಿ ಹೇಳಿದರು. “ಈ ಕಾರ್ಯಾಚರಣೆ ವೇಳೆ ಎಸ್ -400, ಆಕಾಶ್ ಕ್ಷಿಪಣಿ ವ್ಯವಸ್ಥೆ, ವಾಯು ರಕ್ಷಣಾ ಬಂದೂಕುಗಳು ಬಹಳ ಉಪಯುಕ್ತವೆಂದು ಸಾಬೀತಾಯಿತು. ಪಾಕಿಸ್ತಾನದ ದಾಳಿಯನ್ನು ಇವುಗಳು ಸಂಪೂರ್ಣವಾಗಿ ವಿಫಲಗೊಳಿಸಿದವು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Parliament Monsoon Session: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ, ಯಾವೆಲ್ಲಾ ವಿಚಾರಗಳ ಕುರಿತು ಚರ್ಚೆ?


“ಮೇ 10ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಅನೇಕ ವಾಯುನೆಲೆಗಳ ಮೇಲೆ ಬಲವಾದ ದಾಳಿ ನಡೆಸಲಾಯಿತು. ಪಾಕಿಸ್ತಾನ ಸೋಲನ್ನು ಒಪ್ಪಿಕೊಂಡಿತು ಮತ್ತು ಯುದ್ಧವನ್ನು ನಿಲ್ಲಿಸಲು ಮುಂದಾಯಿತು” ಎಂದು ಅವರು ಹೇಳಿದ್ದಾರೆ. ಈ ಮೂಲಕ ಕದನವಿರಾಮಕ್ಕೆ ಅಮೆರಿಕದ ಮಧ್ಯಸ್ಥಿಕೆ ಕಾರಣ ಎಂಬ ವದಂತಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ ರಾಜನಾಥ್ ಸಿಂಗ್, ಪಾಕಿಸ್ತಾನವೇ ಮುಂದೆ ಬಂದು ಕದನವಿರಾಮಕ್ಕೆ ಮನವಿ ಮಾಡಿತು ಎಂದಿದ್ದಾರೆ. ಹಾಗೇ, “ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಕಡೆಯಿಂದ ಯಾವುದೇ ದಾಳಿಗಳು ನಡೆದರೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Video: ಮುಂಗಾರು ಅಧಿವೇಶನಕ್ಕೂ ಮುನ್ನ ಆಪರೇಷನ್ ಸಿಂಧೂರ್, ಭಯೋತ್ಪಾದನೆ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು?

“ಆಪರೇಷನ್ ಸಿಂಧೂರ್” ಸಂದರ್ಭದಲ್ಲಿ ನಮ್ಮ ಕ್ರಮಗಳು ಸಂಪೂರ್ಣವಾಗಿ ಆತ್ಮರಕ್ಷಣೆಗಾಗಿಯೇ ಇದ್ದವು, ಪ್ರಚೋದನಕಾರಿ ಅಥವಾ ವಿಸ್ತರಣಾವಾದಿಯಾಗಿರಲಿಲ್ಲ. ಆದರೂ, ಮೇ 10, 2025ರಂದು, ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಪಾಕಿಸ್ತಾನವು ಕ್ಷಿಪಣಿಗಳು, ಡ್ರೋನ್‌ಗಳು, ರಾಕೆಟ್‌ಗಳು ಮತ್ತು ಇತರ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರತದ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತು. ಆ ದಾಳಿಯನ್ನು ತಡೆಯಲು ನಮ್ಮ ಸೇನೆ ಸಫಲವಾಯಿತು” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ