ಎಸ್​ಡಿಪಿಐ ನಾಯಕನ ಕೊಲೆ ಬೆನ್ನಲ್ಲೇ ಕೇರಳದ ಬಿಜೆಪಿ ನಾಯಕನ ಕತ್ತು ಕೊಯ್ದು ಬರ್ಬರ ಹತ್ಯೆ

ನಿನ್ನೆಯಷ್ಟೇ ಎಸ್​ಡಿಪಿಐ ನಾಯಕ ಕೆ.ಎಸ್​ ಶಾನ್ ಅವರನ್ನು ಕೊಲೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಅಲಪ್ಪುಳದಲ್ಲಿ ಇಂದು ಮುಂಜಾನೆ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸ್ ಮನೆಗೆ ನುಗ್ಗಿದ ಅಪರಿಚಿತರು ಅವರ ಕುತ್ತಿಗೆ ಕತ್ತರಿಸಿ ಹತ್ಯೆ ಮಾಡಿದ್ದಾರೆ.

ಎಸ್​ಡಿಪಿಐ ನಾಯಕನ ಕೊಲೆ ಬೆನ್ನಲ್ಲೇ ಕೇರಳದ ಬಿಜೆಪಿ ನಾಯಕನ ಕತ್ತು ಕೊಯ್ದು ಬರ್ಬರ ಹತ್ಯೆ
ರಂಜಿತ್ ಶ್ರೀನಿವಾಸ್
Edited By:

Updated on: Dec 19, 2021 | 9:08 AM

ಅಲಪ್ಪುಳ: ಇಂದು ಮುಂಜಾನೆ ಕೇರಳದ ಅಲಪ್ಪುಳದಲ್ಲಿ ಬಿಜೆಪಿ ಮುಖಂಡರೊಬ್ಬರ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಿಜೆಪಿಯ ಒಬಿಸಿ ಮೋರ್ಚಾ ಕೇರಳ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಎಂಬ 40 ವರ್ಷದ ವ್ಯಕ್ತಿ ತಮ್ಮ ಮನೆಯಲ್ಲೇ ಅಪರಿಚಿತರಿಂದ ಕೊಲೆಗೀಡಾಗಿದ್ದಾರೆ. ಇಂದು ಬೆಳಗ್ಗೆ ಅವರ ಮನೆಗೆ ನುಗ್ಗಿದ ಗುಂಪೊಂದು ಬಾಗಿಲು ಬೆಲ್ ಮಾಡಿದೆ. ಮನೆಯ ಬಾಗಿಲು ತೆಗೆದ ಕೂಡಲೇ ಒಳಗೆ ನುಗ್ಗಿದ ದುಷ್ಕರ್ಮಿಗಳು ರಂಜಿತ್ ಶ್ರೀನಿವಾಸ್ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ.

ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆಎಸ್ ಶಾನ್ ಅವರ ಮೇಲೆ ಕೇರಳದ ಕೊಚ್ಚಿಯಲ್ಲಿ ಅಪರಿಚಿತ ಗ್ಯಾಂಗ್ ದಾಳಿ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸ್ ಅವರ ಕೊಲೆ ಸಂಭವಿಸಿದೆ. ಈ ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದರ ತನಿಖೆ ಇನ್ನು ನಡೆಯಬೇಕಿದೆ.

ಶನಿವಾರ ಕೆ.ಎಸ್. ಶಾನ್ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಅವರ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯರಾತ್ರಿ 12.45ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಎಸ್‌ಡಿಪಿಐ ಅಧ್ಯಕ್ಷ ಎಂ.ಕೆ. ಫೈಝಿ, ಕೆ.ಎಸ್.ಶಾನ್ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಅದರ ಬೆನ್ನಲ್ಲೇ ಇಂದು ಮುಂಜಾನೆ ಬಿಜೆಪಿ ನಾಯಕನ ಹತ್ಯೆ ನಡೆದಿರುವುದು ಕೇರಳದಲ್ಲಿ ಆತಂಕ ಹೆಚ್ಚಿಸಿದೆ. ರಂಜಿತ್ ಶ್ರೀನಿವಾಸ್ 2016ರ ವಿಧಾನಸಭಾ ಚುನಾವಣೆಯಲ್ಲಿ ಅಲಪ್ಪುಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ರಂಜಿತ್ ಶ್ರೀನಿವಾಸ್ ವೃತ್ತಿಯಲ್ಲಿ ವಕೀಲರಾಗಿದ್ದರು.

ಇದನ್ನೂ ಓದಿ: Bird flu ಕೇರಳದಲ್ಲಿ ಹೆಚ್ಚಿದ ಹಕ್ಕಿ ಜ್ವರ ಭೀತಿ; ಕೋಟ್ಟಯಂ, ಆಲಪ್ಪುಳದಲ್ಲಿ ಬಾತುಕೋಳಿಗಳ ಹತ್ಯೆ

ಮಗಳ ಕ್ಷೇಮಕ್ಕಾಗಿ ಪಾಲಕರು ನೀಡುವ ಉಡುಗೊರೆ ವರದಕ್ಷಿಣೆ ಅಲ್ಲ: ಕೇರಳ ಹೈಕೋರ್ಟ್