Bharat Bandh: ಅಗ್ನಿಪಥ್​​ ಯೋಜನೆ ವಿರೋಧಿಸಿ ಪ್ರತಿಭಟನಾಕಾರರಿಂದ ಇಂದು ಭಾರತ್ ಬಂದ್​​ಗೆ ಕರೆ; ಯಾವ ರಾಜ್ಯದಲ್ಲಿ ಹೇಗಿದೆ ಬಂದೋಬಸ್ತ್?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 20, 2022 | 7:13 AM

ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ  ಫರಿದಾಬಾದ್ ಪೊಲೀಸರು ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.

Bharat Bandh: ಅಗ್ನಿಪಥ್​​ ಯೋಜನೆ ವಿರೋಧಿಸಿ ಪ್ರತಿಭಟನಾಕಾರರಿಂದ ಇಂದು ಭಾರತ್ ಬಂದ್​​ಗೆ ಕರೆ; ಯಾವ ರಾಜ್ಯದಲ್ಲಿ ಹೇಗಿದೆ ಬಂದೋಬಸ್ತ್?
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೇಂದ್ರವು ಹೊಸದಾಗಿ ಹೊರತಂದಿರುವ ಅಗ್ನಿಪಥ್ (Agnipath)ನೇಮಕಾತಿ ಯೋಜನೆಯ ವಿರುದ್ಧ  ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಹಲವಾರು ಪ್ರತಿಭಟನಾಕಾರರ ಗುಂಪುಗಳು ಇಂದು (ಜೂನ್ 20ರಂದು) ಭಾರತ್ ಬಂದ್‌ಗೆ (Bharat Bandh) ಕರೆ ನೀಡಿವೆ.

ಹರ್ಯಾಣ ಪೊಲೀಸ್ ಬಿಗಿ ಭದ್ರತೆ

ಭಾರತ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ  ಫರಿದಾಬಾದ್ ಪೊಲೀಸರು ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕಾಗಿ ವಿವಿಧ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ಹಾಕುವ ಮೂಲಕ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್ ವಕ್ತಾರ ಸುಬೇ ಸಿಂಗ್, ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವುದು ಭಾರತ್ ಬಂದ್ ಸಂದರ್ಭದಲ್ಲಿ ಪೊಲೀಸ್ ಕರ್ತವ್ಯದ ಮುಖ್ಯ ಉದ್ದೇಶವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡುವುದಿಲ್ಲ ಎಂದಿದ್ದಾರೆ.
ಇದಕ್ಕಾಗಿ ಈಗಾಗಲೇ ಫರಿದಾಬಾದ್ ಪೊಲೀಸರು ಬಾದರ್‌ಪುರ ಬಾರ್ಡರ್, ದುರ್ಗಾ ಬಿಲ್ಡರ್ಸ್, ಪ್ರಹ್ಲಾದಪುರ, ಶೂಟಿಂಗ್ ರೇಂಜ್, ಮಂಗರ್, ಸಿಕ್ರಿ ಗಡಿ, ಬಲ್ಲಭಗಢ ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ 11 ಪೊಲೀಸ್ ಬ್ಲಾಕ್‌ಗಳನ್ನು ಹಾಕಲಾಗಿದೆ. ನಾಳೆ ಫರಿದಾಬಾದ್‌ನಲ್ಲಿ 2,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಎಸಿಪಿಗಳು ತಮ್ಮ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಪೊಲೀಸ್ ಆಯುಕ್ತ ವಿಕಾಸ್ ಅರೋರಾ ಅವರ ಮಾರ್ಗಸೂಚಿಗಳ ಅಡಿಯಲ್ಲಿ ಗಮನಿಸುತ್ತಾರೆ ಎಂದು ಅವರು ಹೇಳಿದರು. ಬಂದ್ ವೇಳೆ ‘ಸಮಾಜ ವಿರೋಧಿ ಚಟುವಟಿಕೆ’ಗಳ ಮೇಲೆ ನಿಗಾ ಇಡಲು  ವಿಡಿಯೊಗ್ರಫಿ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ
ಅಗ್ನಿವೀರರಿಗೆ ಪಕ್ಷದ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್​​​ ಕೆಲಸದ ಆಫರ್​​ ನೀಡಿದ ಬಿಜೆಪಿ ನಾಯಕ
Agnipath: ಅಗ್ನಿಪಥ್ ಯೋಜನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದ 35 ವಾಟ್ಸಾಪ್‌ ಗ್ರೂಪ್​​ಗಳನ್ನು ಬ್ಯಾನ್​​ ಮಾಡಿದ ಕೇಂದ್ರ
Agnipath scheme ಹಳೆಯ ನೇಮಕಾತಿ ನೀತಿ ರದ್ದು; ಅಗ್ನಿಪಥ್ ಯೋಜನೆ ಮೂಲಕ ಮಾತ್ರ ಸೇನೆ, ನೌಕಾಪಡೆ, ವಾಯಪಡೆಗೆ ನೇಮಕಾತಿ

ಜಾರ್ಖಂಡ್ ಶಾಲೆಗಳು ಬಂದ್

ಅಗ್ನಿಪಥ್ ನೇಮಕಾತಿ ಯೋಜನೆಗೆ ಕರೆ ನೀಡಲಾದ ಬಂದ್‌ನ ದೃಷ್ಟಿಯಿಂದ ಜಾರ್ಖಂಡ್‌ನಲ್ಲಿ ಸೋಮವಾರ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 9 ಮತ್ತು 11 ನೇ ತರಗತಿಗಳ ನಡೆಯುತ್ತಿರುವ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ ಎಂದು ಅವರು ಹೇಳಿದರು. ಕೆಲವು ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಸೋಮವಾರ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ರಾಜೇಶ್ ಕುಮಾರ್ ಶರ್ಮಾ ಭಾನುವಾರ ಪಿಟಿಐಗೆ ತಿಳಿಸಿದರು.

“ಶಾಲಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬಸ್‌ನಲ್ಲಿ ಪ್ರಯಾಣಿಸುವವರಿಗೆ ಯಾವುದೇ ತೊಂದರೆಯಾಗಬಾರದು ಎಂದು ನಾವು ಬಯಸುವುದಿಲ್ಲ. ಬಿಹಾರದಲ್ಲಿ ಪ್ರತಿಭಟನಾಕಾರರು ಬಸ್‌ಗೆ ಬೆಂಕಿ ಹಚ್ಚಿದ್ದರಿಂದ ಬಲವಂತವಾಗಿ ಬಸ್‌ನಿಂದ ಕೆಳಗಿಳಿಸುವುದನ್ನು ನಾವು ನೋಡಿದ್ದೇವೆ” ಎಂದು ಅವರು ಹೇಳಿದರು. ಮುಂದೂಡಲ್ಪಟ್ಟ ಪರೀಕ್ಷೆಗಳ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ ಕೇರಳ ಪೊಲೀಸ್

ಹಿಂಸಾಚಾರ ಅಥವಾ ಸಾರ್ವಜನಿಕ ಆಸ್ತಿ ನಾಶಪಡಿಸುವವರನ್ನು ಬಂಧಿಸಲು ತನ್ನ ಸಂಪೂರ್ಣ ಪಡೆ ಕರ್ತವ್ಯದಲ್ಲಿದೆ ಎಂದು ಕೇರಳ ಪೊಲೀಸರು ಭಾನುವಾರ ಹೇಳಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥ (SPC) ಅನಿಲ್ ಕಾಂತ್ ಅವರು ಸಾರ್ವಜನಿಕರ ಮೇಲಿನ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ವ್ಯಾಪಾರಗಳನ್ನು ಬಲವಂತವಾಗಿ ಮುಚ್ಚುವುದನ್ನು ತಡೆಯಲು ಸಿಬ್ಬಂದಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದು ರಾಜ್ಯ ಪೊಲೀಸ್ ಮಾಧ್ಯಮ ಕೇಂದ್ರದ ಪ್ರಕಟಣೆ ತಿಳಿಸಿದೆ.

ಜೂನ್ 20 ರಂದು ನ್ಯಾಯಾಲಯಗಳು, ಕೆಎಸ್‌ಇಬಿ ಕಚೇರಿಗಳು, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಮತ್ತು ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ರಕ್ಷಣೆ ನೀಡುವಂತೆ ಎಸ್‌ಪಿಸಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ ಎಂದು ಅದು ಹೇಳಿದೆ. ಇದಲ್ಲದೆ ಇಂದು ರಾತ್ರಿಯಿಂದ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪಂಜಾಬ್

ಪಂಜಾಬ್ ಪೊಲೀಸರು ಯುವಜನರನ್ನು ಸಜ್ಜುಗೊಳಿಸುವುದನ್ನು ತಡೆಯಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶನಗಳನ್ನು ನೀಡಿದ್ದಾರೆ. ಅದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ತಡೆಯಲು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 11:15 pm, Sun, 19 June 22