Air India Flight: ವಿಮಾನದ ಕಿಟಕಿಯಲ್ಲಿ ಬಿರುಕು; ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್​ ತುರ್ತು ಭೂಸ್ಪರ್ಶ

Air India Express: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಕಿಟಕಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

Air India Flight: ವಿಮಾನದ ಕಿಟಕಿಯಲ್ಲಿ ಬಿರುಕು; ಸೌದಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್​ ತುರ್ತು ಭೂಸ್ಪರ್ಶ
ಏರ್ ಇಂಡಿಯಾ ವಿಮಾನ
Updated By: ಸುಷ್ಮಾ ಚಕ್ರೆ

Updated on: Jul 31, 2021 | 3:54 PM

ತಿರುವನಂತಪುರಂ: ಕೇರಳದಿಂದ ಸೌದಿ ಅರೇಬಿಯಾಕ್ಕೆ (Saudi Arabia) ಹೊರಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನದ ಕಿಟಕಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಈ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ, ಕೇವಲ ವಿಮಾನದ ಸಿಬ್ಬಂದಿಗಳು ಮಾತ್ರ ಇದ್ದರು.

ಶನಿವಾರ ಬೆಳಗ್ಗೆ 7.52ಕ್ಕೆ ಏರ್ ಇಂಡಿಯಾ ಎಕ್ಸ್​​ಪ್ರೆಸ್ ವಿಮಾನ ತಿರುವನಂತಪುರ ವಿಮಾನ ನಿಲ್ದಾಣದಿಂದ ಟೇಕ್​ಆಫ್‌ ಆಗಿತ್ತು. ಆದರೆ, ವಿಮಾನ ಮೇಲಕ್ಕೇರಿದ ಬಳಿಕ ಕಿಟಕಿಯೊಂದರಲ್ಲಿ ಸಣ್ಣ ಬಿರುಕು ಮೂಡಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ವಿಮಾನ ಟೇಕ್​ಆಫ್ ಆದ 1 ಗಂಟೆಯೊಳಗೆ ಆ ವಿಮಾನ ಮತ್ತೆ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದೆ. ಇಂದು ಬೆಳಗ್ಗೆ 8.50ಕ್ಕೆ ವಿಮಾನ ಮತ್ತೆ ವಾಪಾಸಾಗಿದೆ ಎಂದು ತಿರುವನಂತಪುರದ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಕೋವಿಡ್ ಅಟ್ಟಹಾಸದಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಆಗಸ್ಟ್ 31ರವರೆಗೂ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸಲಾಗಿದೆ. ಕೇವಲ ಕಾರ್ಗೋ ವಿಮಾನಗಳು ಹಾಗೂ ಪೂರ್ವ ಅನುಮತಿ ಪಡೆದವರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಇಂದು ಕೇರಳದಿಂದ ಸೌದಿ ಅರೇಬಿಯಾಗೆ ಹೊರಟಿದ್ದ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಈ ವಿಮಾನದಲ್ಲಿ ಸರಕುಗಳು ಮತ್ತು ಎಂಟು ಸಿಬ್ಬಂದಿ ಮಾತ್ರ ಇದ್ದರು.

ವಿಮಾನದ ಪೈಲಟ್‌ಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ವಿಮಾನ ಟೇಕ್‌ ಆಫ್‌ ಆಗುವುದಕ್ಕಿಂತ ಮೊದಲು ವಿಮಾನವನ್ನು ಪರಿಶೀಲನೆ ಮಾಡಿದಾಗ ಯಾವುದೇ ಬಿರುಕುಗಳು ಕಂಡುಬಂದಿರರಲಿಲ್ಲ. ಬಹುಶಃ ಟೇಕ್ ಆಫ್ ವೇಳೆ ಈ ಬಿರುಕು ಉಂಟಾಗಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: International Flights: ಭಾರತದಲ್ಲಿ ಆ. 31ರವರೆಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿಷೇಧ

(Air India Express flight makes emergency landing in Thiruvananthapuram Airport due to windshield crack)