AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಟ್ರಸ್ಟಿಯಾಗಿರುವ ಸಂಜಯ್ ಗಾಂಧಿ ಆಸ್ಪತ್ರೆಯನ್ನು ದಿಢೀರನೆ ಮುಚ್ಚಿದ್ದೇಕೆ?

Sanjay Gandhi Hospital: ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಯನ್ನು ಏಕಾಏಕಿ ಮುಚ್ಚಲಾಗಿದೆ. ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಏನಿದು ಪ್ರಕರಣ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸೋನಿಯಾ ಗಾಂಧಿ ಟ್ರಸ್ಟಿಯಾಗಿರುವ ಸಂಜಯ್ ಗಾಂಧಿ ಆಸ್ಪತ್ರೆಯನ್ನು ದಿಢೀರನೆ ಮುಚ್ಚಿದ್ದೇಕೆ?
ಸಂಜಯ್ ಗಾಂಧಿ ಆಸ್ಪತ್ರೆ
ಸುಷ್ಮಾ ಚಕ್ರೆ
|

Updated on:Sep 21, 2023 | 2:27 PM

Share

ಅಮೇಥಿ: ಉತ್ತರ ಪ್ರದೇಶದ ಅಮೇಥಿಯಲ್ಲಿ ಸಂಜಯ್ ಗಾಂಧಿ ಆಸ್ಪತ್ರೆಯ ಲೈಸೆನ್ಸ್​ ಅನ್ನು ಸಸ್ಪೆಂಡ್ ಮಾಡಲಾಗಿದೆ. ಸಂಜಯ್ ಗಾಂಧಿ ಆಸ್ಪತ್ರೆಯನ್ನು 1982ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಉದ್ಘಾಟಿಸಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ಆಸ್ಪತ್ರೆಯ ಟ್ರಸ್ಟಿಗಳು. ಈ ಆಸ್ಪತ್ರೆಯ ಲೈಸನ್ಸ್ ರದ್ದಾದ ನಂತರ ಈ ಬಗ್ಗೆ ರಾಜಕೀಯ ಚರ್ಚೆಗಳು ತೀವ್ರಗೊಂಡಿದೆ. ರಾಜಕೀಯ ಹುನ್ನಾರದಿಂದ ಬಿಜೆಪಿ ಸಂಜಯ್ ಗಾಂಧಿ ಆಸ್ಪತ್ರೆಯ ಲೈಸೆನ್ಸ್​ ರದ್ದು ಮಾಡಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸುತ್ತಿದೆ.

ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಯನ್ನು ದಿಢೀರ್ ಮುಚ್ಚಲಾಗಿದೆ. ಟ್ರಸ್ಟ್ ನಡೆಸುತ್ತಿರುವ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಪ್ರಕರಣದ ಹಿನ್ನೆಲೆ ಏನು?:

22 ವರ್ಷದ ದಿವ್ಯಾ ಶುಕ್ಲಾ ಎಂಬ ಮಹಿಳೆಯನ್ನು ಸೆಪ್ಟೆಂಬರ್ 14ರಂದು ಅಮೇಥಿಯ ಮುನ್ಷಿಗಂಜ್‌ ಪ್ರದೇಶದಲ್ಲಿರುವ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಿತ್ತಕೋಶದ ಶಸ್ತ್ರಚಿಕಿತ್ಸೆಯನ್ನು ಆರಂಭಿಸುವುದಕ್ಕೂ ಮೊದಲೇ ಅವರ ಸ್ಥಿತಿ ತುಂಬಾ ಹದಗೆಟ್ಟಿತು. ಹೀಗಾಗಿ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಯಿಂದ ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಯಿತು. ಸೆಪ್ಟೆಂಬರ್ 16ರಂದು ಅಲ್ಲಿ ಆ ಮಹಿಳೆ ನಿಧನರಾದರು. ಸಂಜಯ್‌ಗಾಂಧಿ ಆಸ್ಪತ್ರೆಯವರು ಆಕೆಗೆ ಓವರ್‌ಡೋಸ್‌ ಅನಸ್ತೇಷಿಯಾ ನೀಡಿ ಸಾವಿಗೆ ಕಾರಣರಾಗಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾದ ಬಳಿಕ ಈ ಬಗ್ಗೆ ಭಾರೀ ಕೋಲಾಹಲ ಎದ್ದಿತ್ತು.

ಇದನ್ನೂ ಓದಿ: Aircraft Crash: ಉತ್ತರ ಪ್ರದೇಶದ ಅಮೇಥಿಯಲ್ಲಿ ತರಬೇತಿ ವಿಮಾನ ಪತನ; ಪೈಲಟ್ ಸೇಫ್

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಂದು ಸಂಜಯ್ ಗಾಂಧಿ ಆಸ್ಪತ್ರೆ ವಿರುದ್ಧ ಎಫ್‌ಐಆರ್ ದಾಖಲಿಸಿ, ಸೆಪ್ಟೆಂಬರ್ 18ರಂದು ಪರವಾನಗಿ ರದ್ದುಗೊಳಿಸಲಾಗಿದೆ. ಆಸ್ಪತ್ರೆಯ ಸಿಇಒ ಸೇರಿದಂತೆ ನಾಲ್ವರು ನೌಕರರ ವಿರುದ್ಧ ಪೊಲೀಸರು ಚಿಕಿತ್ಸೆಯ ವೇಳೆ ನಿರ್ಲಕ್ಷ್ಯದಿಂದ ಸಾವು ಎಂಬ ಆರೋಪದಡಿ ಕೇಸ್ ದಾಖಲಿಸಿದ್ದಾರೆ.

ಈ ಘಟನೆಯಾದ ಬಳಿಕ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಈ ಆಸ್ಪತ್ರೆಯ ಪರವಾನಗಿಯನ್ನು ಸೆಪ್ಟೆಂಬರ್ 18ರಂದು ರದ್ದುಗೊಳಿಸಲಾಯಿತು. ಆಸ್ಪತ್ರೆಯ ಆಡಳಿತ ಮಂಡಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ ಅದಾದ 24 ಗಂಟೆಗಳ ಒಳಗೆ ಸಂಜಯ್ ಗಾಂಧಿ ಆಸ್ಪತ್ರೆಯ ಲೈಸೆನ್ಸ್​ ರದ್ದುಗೊಳಿಸಲಾಗಿದೆ.

ಈ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಸಂಜಯ್ ಗಾಂಧಿ ಆಸ್ಪತ್ರೆ ಆಡಳಿತಾಧಿಕಾರಿ ಮನೋಜ್ ಮಟ್ಟು ತಿಳಿಸಿದ್ದಾರೆ. 3 ತಿಂಗಳ ಕಾಲಾವಕಾಶ ನೀಡಿದ್ದರೂ 24 ಗಂಟೆಯೊಳಗೆ ಆಸ್ಪತ್ರೆಯ ಪರವಾನಿಗೆಯನ್ನು ರದ್ದುಪಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಶಿಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ 450 ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇದೀಗ ದಿಢೀರನೆ ಆಸ್ಪತ್ರೆಯನ್ನು ಮುಚ್ಚಿರುವುದರಿಂದ ಅವರೆಲ್ಲರಿಗೂ ಜೀವನೋಪಾಯದ ಬಿಕ್ಕಟ್ಟು ಎದುರಾಗಿದೆ. ಇದಲ್ಲದೆ ಈ ಆಸ್ಪತ್ರೆಯಲ್ಲಿ 600 ನರ್ಸಿಂಗ್ ವಿದ್ಯಾರ್ಥಿಗಳು ಮತ್ತು 200 ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಈ ಆಸ್ಪತ್ರೆ ಮುಚ್ಚಿರುವುದರಿಂದ ಅಲ್ಲಿನ ನೂರಾರು ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬಿಗಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ಆಸ್ಪತ್ರೆಯ ಟ್ರಸ್ಟಿಗಳಾಗಿರುವುದರಿಂದ ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Thu, 21 September 23