Allahabad University ಅಲಹಾಬಾದ್ ವಿವಿಯಲ್ಲಿ ಹಿಂಸಾಚಾರ; ಕಲ್ಲುತೂರಾಟ, ಬೈಕ್​​ಗೆ ಬೆಂಕಿ

ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಶುಲ್ಕ ಹೆಚ್ಚಳ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆದಿದ್ದು, ಬೈಕ್ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ವರದಿ ಆಗಿದೆ.

Allahabad University ಅಲಹಾಬಾದ್ ವಿವಿಯಲ್ಲಿ ಹಿಂಸಾಚಾರ; ಕಲ್ಲುತೂರಾಟ, ಬೈಕ್​​ಗೆ ಬೆಂಕಿ
ಅಲಹಾಬಾದ್ ವಿವಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
Edited By:

Updated on: Dec 19, 2022 | 6:47 PM

ಇಂದು (ಸೋಮವಾರ) ಸಂಜೆ ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ (Allahabad University) ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆದಿದೆ. ಕ್ಯಾಂಪಸ್‌ಗೆ ಪ್ರವೇಶಿಸುವ ಬಗ್ಗೆ ವಾಗ್ವಾದ ನಡೆದು ಅದು ಹಿಂಸಾಚಾರಕ್ಕೆ (Violence) ತಿರುಗಿದೆ. ಈ ವೇಳೆ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೋಟಾರ್ ಸೈಕಲ್‌ಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದಲ್ಲಿ ಎರಡೂ ಕಡೆಯವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪೊಲೀಸರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ವಿಶ್ವವಿದ್ಯಾನಿಲಯದಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ತಿಂಗಳ ಕಾಲ ಪ್ರತಿಭಟನೆಯ ಭಾಗವಾಗಿರುವ ವಿದ್ಯಾರ್ಥಿ ನಾಯಕರೊಬ್ಬರು ಕ್ಯಾಂಪಸ್‌ನಲ್ಲಿರುವ ಬ್ಯಾಂಕ್‌ಗೆ ಹೋಗಲು ಬಯಸಿದ್ದರು. ಆದರೆ ಸಿಬ್ಬಂದಿ ಆತನನ್ನು ಒಳಗೆ ಬಿಡಲಿಲ್ಲ. ಇದು ವಾಗ್ವಾದಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರಯಾಗ್‌ರಾಜ್ ಸಿಪಿ ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಪೊಲೀಸರು ಪರಿಸ್ಥಿತಿಯ ನಿಗಾವಹಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಹೇಳಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಳೆದ 101 ದಿನಗಳಿಂದ ವಿದ್ಯಾರ್ಥಿಗಳು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ.

ಅಲಹಾಬಾದ್ ವಿಶ್ವವಿದ್ಯಾನಿಲಯದ ಸೆಕ್ಯುರಿಟಿ ಗಾರ್ಡ್‌ಗಳು ಮಾಜಿ ವಿದ್ಯಾರ್ಥಿ ನಾಯಕನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂಬ ಕಾರಣದಿಂದ ಇಲ್ಲಿ ಗಲಾಟೆಯಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ವಿದ್ಯಾರ್ಥಿ ಮುಖಂಡರು ಕಲ್ಲು ತೂರಾಟ ನಡೆಸಿದ್ದಾರೆ ಎಂದು  ಹೇಳಲಾಗಿದೆ. ಹೆಚ್ಚುವರಿ ಪೊಲೀಸ್ ಕಮಿಷನರ್ ಆಕಾಶ್ ಕುಲ್ಹಾರಿ ಅವರು ಪೊಲೀಸ್ ಪಡೆಗಳೊಂದಿಗೆ ಕ್ಯಾಂಪಸ್‌ನಲ್ಲಿ ಹಾಜರಿದ್ದು,  ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮೆಸ್ಸಿ ಹುಟ್ಟಿದ್ದು ಅಸ್ಸಾಂನಲ್ಲಿ ಎಂದ ಕಾಂಗ್ರೆಸ್ ಸಂಸದ, ನೆಟ್ಟಿಗರು ಕಾಲೆಳೆದ ನಂತರ ಟ್ವೀಟ್ ಡಿಲೀಟ್

ಪೊಲೀಸ್ ಕಮಿಷನರ್ ಪ್ರಯಾಗರಾಜ್, ಹೆಚ್ಚುವರಿ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಪೊಲೀಸರು ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸುತ್ತಿರುವುದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:12 pm, Mon, 19 December 22