ಕ್ಷೇತ್ರ ಪುನರ್ವಿಂಗಡಣೆಯಿಂದ ಒಂದು ಸ್ಥಾನವೂ ನಷ್ಟವಾಗುವುದಿಲ್ಲ; ತಮಿಳುನಾಡಿನಲ್ಲಿ ಅಮಿತ್ ಶಾ ಭರವಸೆ

|

Updated on: Feb 26, 2025 | 7:15 PM

ದಕ್ಷಿಣ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೊಡ್ಡ ಭರವಸೆ ನೀಡಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತದ ಒಂದು ಸ್ಥಾನವೂ ಕಳೆದುಹೋಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಸೀಮಿತ ವಿಂಗಡಣೆಯಿಂದಾಗಿ ತಮಿಳುನಾಡು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂಬ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆಯನ್ನು ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆಯಿಂದ ಒಂದು ಸ್ಥಾನವೂ ನಷ್ಟವಾಗುವುದಿಲ್ಲ; ತಮಿಳುನಾಡಿನಲ್ಲಿ ಅಮಿತ್ ಶಾ ಭರವಸೆ
Amit Shah In Tamil Nadu
Follow us on

ಚೆನ್ನೈ (ಫೆಬ್ರವರಿ 26): ಜನಸಂಖ್ಯೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಸಿದರೆ ರಾಜ್ಯವು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂಬ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಳ್ಳಿಹಾಕಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ತಮಿಳುನಾಡು ಒಂದೇ ಒಂದು ಸಂಸದೀಯ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. “ಕ್ಷೇತ್ರ ಪುನರ್ವಿಂಗಡಣೆಯ ನಂತರವೂ, ದಕ್ಷಿಣದ ಯಾವುದೇ ರಾಜ್ಯಗಳ ಲೋಕಸಭಾ ಸ್ಥಾನಗಳು ಕಡಿಮೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ” ಎಂದು ಅಮಿತ್ ಶಾ ಈ ವಿವಾದದ ಬಗ್ಗೆ ತಮಿಳುನಾಡಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ವರ್ಷ ನಿರೀಕ್ಷಿಸಲಾದ ಕ್ಷೇತ್ರ ಪುನರ್ವಿಂಗಡಣೆಯು ಜನಸಂಖ್ಯೆಯ ಮಟ್ಟವನ್ನು ಆಧರಿಸಿ ಸಂಸದೀಯ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವುದನ್ನು ಒಳಗೊಂಡಿರುತ್ತದೆ. ಇದು ದಕ್ಷಿಣ ರಾಜ್ಯಗಳ ಲೋಕಸಭಾ ಸಂಸದರ ಅನುಪಾತವನ್ನು ಬದಲಾಯಿಸಬಹುದು. ಈ ವಿಷಯವು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ವಿವಾದವನ್ನು ಹುಟ್ಟುಹಾಕಿದೆ.


ಇದನ್ನೂ ಓದಿ: ಮತ್ತೊಂದು ಭಾಷಾ ಸಮರಕ್ಕೆ ತಮಿಳುನಾಡು ಸಿದ್ಧ; ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸ್ಟಾಲಿನ್ ಗುಡುಗು

ಇಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ, “ಸೀಮಿತ ವಿಂಗಡಣೆ ಪ್ರಕ್ರಿಯೆ ಮೂಲತಃ 2026ಕ್ಕೆ ನಿಗದಿಯಾಗಿತ್ತು. ಇದು ಜನಸಂಖ್ಯೆಯ ಆಧಾರದ ಮೇಲೆ ರಾಜ್ಯವು ಲೋಕಸಭೆಗೆ ಕಳುಹಿಸುವ ಪ್ರತಿನಿಧಿಗಳ ಸಂಖ್ಯೆಯನ್ನು ಮರು ವ್ಯಾಖ್ಯಾನಿಸುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.


ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮಾರ್ಚ್ 5ರಂದು ಚೆನ್ನೈನಲ್ಲಿ ಸರ್ವಪಕ್ಷ ಸಭೆ ಕರೆದ ನಂತರ ಇಂದು ಕೊಯಮತ್ತೂರಿನಲ್ಲಿ ನಡೆದ ರ್ಯಾಲಿಯಲ್ಲಿ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಯಮತ್ತೂರಿನಲ್ಲಿ ಬಿಜೆಪಿ ಜಿಲ್ಲಾ ಕಚೇರಿಗಳನ್ನು ಉದ್ಘಾಟಿಸಿದರು ಮತ್ತು ತಮಿಳುನಾಡಿನ ತಿರುವಣ್ಣಾಮಲೈ ಮತ್ತು ರಾಮನಾಥಪುರದಲ್ಲಿ ಪಕ್ಷದ ಕಚೇರಿಗಳನ್ನು ಉದ್ಘಾಟಿಸಿದರು.

ಇದನ್ನೂ ಓದಿ: ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ಸರ್ಕಾರದ ಗುರಿ; ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಅಮಿತ್ ಶಾ

ಡಿಎಂಕೆ ಭ್ರಷ್ಟಾಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದೆ:

“1998ರ ಬಾಂಬ್ ಸ್ಫೋಟದ ಆರೋಪಿ ಮತ್ತು ಮಾಸ್ಟರ್ ಮೈಂಡ್ ಎಸ್‌.ಎ ಬಾಷಾ ಕೊನೆಯ ಪ್ರಯಾಣದ ಸಮಯದಲ್ಲಿ ತಮಿಳುನಾಡು ಸರ್ಕಾರ ಆತನಿಗೆ ಭದ್ರತೆ ಒದಗಿಸಿದೆ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. “ತಮಿಳುನಾಡಿನಲ್ಲಿ ಡ್ರಗ್ಸ್ ಮಾಫಿಯಾ ಮಾದಕ ದ್ರವ್ಯಗಳನ್ನು ಮಾರಾಟ ಮಾಡುವಲ್ಲಿ ಮುಕ್ತವಾಗಿ ತೊಡಗಿಸಿಕೊಂಡಿದೆ. ಅಕ್ರಮ ಗಣಿಗಾರಿಕೆ ಮಾಫಿಯಾ ಇಲ್ಲಿ ರಾಜಕೀಯವನ್ನು ಭ್ರಷ್ಟಗೊಳಿಸುತ್ತಿದೆ. ಡಿಎಂಕೆಯ ಎಲ್ಲಾ ನಾಯಕರು ಭ್ರಷ್ಟಾಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ” ಎಂದು ಅಮಿತ್ ಶಾ ಆರೋಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:14 pm, Wed, 26 February 25