ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗೆ ಸಿಡ್ನಿಯಲ್ಲಿ 11 ಬಾರಿ ಚಾಕು ಇರಿತ

ಅವರ ಸಹೋದರಿ ಕಾವ್ಯಾ ಗಾರ್ಗ್, ಶುಭಂ ಅವರಿಗೆ ಹಲವಾರು ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ ಮತ್ತು ತುರ್ತು ವೀಸಾ ನೀಡಿ ಕುಟುಂಬಕ್ಕೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗೆ ಸಿಡ್ನಿಯಲ್ಲಿ 11 ಬಾರಿ ಚಾಕು ಇರಿತ
ಶುಭಂ ಗಾರ್ಗ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: Oct 14, 2022 | 4:14 PM

ಲಖನೌ: ಆಸ್ಟ್ರೇಲಿಯಾದಲ್ಲಿ (Australia )ಭಾರತೀಯ ವಿದ್ಯಾರ್ಥಿಯೊಬ್ಬ ಕಳೆದ ವಾರ 11 ಬಾರಿ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಇದು ದ್ವೇಷದ ಅಪರಾಧ ಎಂದು ಆತನ ಕುಟುಂಬ ಆರೋಪಿಸಿದೆ. ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಐಐಟಿ ಪದವೀಧರ ಶುಭಂ ಗಾರ್ಗ್ (28) (Shubham Garg)ಅವರ ಮೇಲೆ ಅಕ್ಟೋಬರ್ 6 ರಂದು ದಾಳಿ ನಡೆದಿತ್ತು. ದಾಳಿ ನಡೆದ ಒಂದು ವಾರದ ನಂತರ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಅವರ ಕುಟುಂಬಕ್ಕೆ ಇಂದು ವೀಸಾ ನೀಡಲಾಗಿದೆ. ಶುಭಂ ಸಹೋದರನಿಗೆ ಆಸ್ಟ್ರೇಲಿಯಾಕ್ಕೆ ತೆರಳಲು ವೀಸಾ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಇಂದು ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, ಅವರು ಸಹಾಯಕ್ಕಾಗಿ ಮನವಿ ಮಾಡುವಾಗ ಕ್ಯಾಮೆರಾ ಮುಂದೆ ಅತ್ತಿದ್ದಾರೆ. ಐಐಟಿ-ಮದ್ರಾಸ್‌ನಲ್ಲಿ ಪದವಿ ಪಡೆದ ನಂತರ ಶುಭಂ ಸೆಪ್ಟೆಂಬರ್ 1 ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ಅಕ್ಟೋಬರ್ 6ರಂದು ರಾತ್ರಿ 10.30ರ ಸುಮಾರಿಗೆ ಎಟಿಎಂನಿಂದ ಹಣದೊಂದಿಗೆ ವಾಪಸಾಗುತ್ತಿದ್ದಾಗ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆಯಿಟ್ಟು ಚಾಕು ತೋರಿಸಿ ಬೆದರಿಸಿದ್ದಾನೆ. ಅವನು ನಿರಾಕರಿಸಿದಾಗ, ದಾಳಿಕೋರ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ.

ಭಾರತೀಯ ಹೈಕಮಿಷನ್ ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಅದು ಹೇಳಿದೆ.

ಶುಭಂ ಅವರ ಮುಖ, ಎದೆ ಮತ್ತು ಹೊಟ್ಟೆಗೆ ಹಲವು ಗಾಯಗಳಾಗಿವೆ. ಆ ಸ್ಥಿತಿಯಲ್ಲಿಯೇ , ಅವರು ಹತ್ತಿರದಲ್ಲಿರುವ ಮನೆಗೆ ಹೋಗಿದ್ದು ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶುಭಂ ದಾಳಿಯಿಂದ ಬದುಕುಳಿದಿದ್ದಾನೆ. ಅವರು ನನ್ನ ಕರೆಗೆ ಉತ್ತರಿಸದಿದ್ದಾಗ ನಾವು ಅಕ್ಟೋಬರ್ 8 ರಂದು ಅವರ ಸ್ನೇಹಿತರಿಗೆ ಕರೆ ಮಾಡಿದ್ದೇವೆ” ಎಂದು ಅವರ ತಂದೆ ರಾಮ್ನಿವಾಸ್ ಗಾರ್ಗ್ ಹೇಳಿದರು.

“ಅವರ ಹೊಟ್ಟೆಯಲ್ಲಿ 11 ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನನ್ನ ಮಗನ ಚಿಕಿತ್ಸೆ ಮತ್ತು ನನ್ನ ಕಿರಿಯ ಮಗನಿಗೆ ವೀಸಾಕ್ಕೆ ಸಹಾಯ ಮಾಡಲು ನಾನು ಸರ್ಕಾರವನ್ನು ಕೋರುತ್ತೇನೆ” ಎಂದು ಅವರು ಹೇಳಿದರು. 27 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ವರದಿಗಳ ಪ್ರಕಾರ ದಾಳಿಕೋರರ ಬಗ್ಗೆ ಶುಭಂ ಅವರಿಗೆ ತಿಳಿದಿರಲಿಲ್ಲ. ಇದು ಜನಾಂಗೀಯ ದಾಳಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಅವರ ಸಹೋದರಿ ಕಾವ್ಯಾ ಗಾರ್ಗ್, ಶುಭಂ ಅವರಿಗೆ ಹಲವಾರು ಶಸ್ತ್ರಚಿಕಿತ್ಸೆಗಳ ಅಗತ್ಯವಿದೆ ಮತ್ತು ತುರ್ತು ವೀಸಾ ನೀಡಿ ಕುಟುಂಬಕ್ಕೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

“ಉತ್ತರ ಪ್ರದೇಶದ ನನ್ನ ಸಹೋದರ ಶುಭಂ ಗಾರ್ಗ್(28)ಮೇಲೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 11 ಬಾರಿ ಚಾಕುವಿನಿಂದ ಅಮಾನುಷವಾಗಿ ದಾಳಿ ಮಾಡಲಾಗಿದ್ದು, ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ವಿಷಯದಲ್ಲಿ ನಿಮ್ಮ ತಕ್ಷಣದ ಸಹಾಯವನ್ನು ಕೋರುತ್ತೇವೆ ಮತ್ತು ಅವರನ್ನು ನೋಡಿಕೊಳ್ಳಲು ಕುಟುಂಬ ಸದಸ್ಯರಿಗೆ ತುರ್ತು ವೀಸಾ ನೀಡಿ ಎಂದುಕಾವ್ಯ ಗಾರ್ಗ್ ಬುಧವಾರ ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ, ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಟ್ಯಾಗ್ ಮಾಡಿದ್ದಾರೆ.

ನಿನ್ನೆ ಅವರು ಮತ್ತೊಂದು ಟ್ವೀಟ್ ಮಾಡಿದ್ದು “ಅಪ್‌ಡೇಟ್!! ನನ್ನ ಸಹೋದರನಿಗೆ ಆಪರೇಷನ್‌ಗಳು ನಡೆಯುತ್ತಿದ್ದು ದೇಹದಲ್ಲಿ ಸೋಂಕು ಹರಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈ ವಿಷಯದಲ್ಲಿ ತುರ್ತು ಸಹಾಯಕ್ಕಾಗಿ ಮೋದಿ ಅವರಲ್ಲಿ ವಿನಂತಿಸುತ್ತಿದ್ದೇನೆ ಎಂದಿದ್ದಾರೆ. ಕುಟುಂಬವು ಬಿಜೆಪಿ ಸಂಸದ ರಾಜ್‌ಕುಮಾರ್ ಚಹರ್ ಅವರನ್ನು ಭೇಟಿ ಮಾಡಿದ್ದು, ಸಿಡ್ನಿಯಲ್ಲಿರುವ ಭಾರತೀಯ ಮಿಷನ್ ಪ್ರಕರಣವನ್ನು “ಬಹಳ ಗಂಭೀರವಾಗಿ” ತೆಗೆದುಕೊಳ್ಳುತ್ತಿದೆ ಎಂದು ಚಹರ್ ಭರವಸೆ ನೀಡಿರುವುದಾಗಿ ಹೇಳಿದ್ದಾರೆ.

ಸಿಡ್ನಿಯಲ್ಲಿರುವ ಭಾರತೀಯ ದೂತಾವಾಸವು ವ್ಯಕ್ತಿಗೆ ಕಾನ್ಸುಲರ್ ನೆರವು ನೀಡಿದೆ. ಆಸ್ಟ್ರೇಲಿಯನ್ ಹೈಕಮಿಷನ್ ಕುಟುಂಬದ ಸದಸ್ಯರಿಗೆ ವೀಸಾವನ್ನು ಸುಲಭಗೊಳಿಸಲು ಸಹಾಯ ಮಾಡಿದೆ ಎಂದು ಆಸ್ಟ್ರೇಲಿಯಾದ ಹೈಕಮಿಷನ್ ವಕ್ತಾರರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದ್ದಾರೆ.