ಆಂಧ್ರಪ್ರದೇಶ: ದೇವಸ್ಥಾನಕ್ಕೆ ತೆರಳುತ್ತಿದ್ದವರ ಮೇಲೆ ಆನೆಗಳಿಂದ ದಾಳಿ, ಮೂವರು ಸಾವು

ಬೆಳಗಿನ ಜಾವ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಆನೆ ಹಿಂಡು ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಹಾಶಿವರಾತ್ರಿ ಆಚರಣೆಗೂ ಮುನ್ನ ಭಕ್ತರ ಗುಂಪೊಂದು ತಲಕೋಣ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ವೈ ಕೋಟಾದಿಂದ ಗುಂಡಲಕೋಣಕ್ಕೆ ಹೋಗುವ ಅರಣ್ಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು 15 ಆನೆಗಳ ಹಿಂಡು 30 ಭಕ್ತರ ಗುಂಪಿನ ಮೇಲೆ ಬೆಳಗಿನ ಜಾವ 2.30 ರ ಸುಮಾರಿಗೆ ದಾಳಿ ನಡೆಸಿತು.

ಆಂಧ್ರಪ್ರದೇಶ: ದೇವಸ್ಥಾನಕ್ಕೆ ತೆರಳುತ್ತಿದ್ದವರ ಮೇಲೆ ಆನೆಗಳಿಂದ ದಾಳಿ, ಮೂವರು ಸಾವು
ಆನೆಗಳು
Image Credit source: Wildlife

Updated on: Feb 25, 2025 | 2:22 PM

ಆಂಧ್ರಪ್ರದೇಶ, ಫೆಬ್ರವರಿ 25: ದೇವಸ್ಥಾನಕ್ಕೆ ತೆರಳುತ್ತಿದ್ದ 30ಕ್ಕೂ ಅಧಿಕ ಭಕ್ತರ ಮೇಲೆ ಆನೆಗಳ ಹಿಂಡು ದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕಾಡಿನಲ್ಲಿ ಮುಂಜಾನೆ ಆನೆಗಳ ಹಿಂಡು ಭಕ್ತರ ಮೇಲೆ ದಾಳಿ ನಡೆಸಿವೆ.

ಮಹಾಶಿವರಾತ್ರಿ ಆಚರಣೆಗೂ ಮುನ್ನ ಭಕ್ತರ ಗುಂಪೊಂದು ತಲಕೋಣ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ವೈ ಕೋಟಾದಿಂದ ಗುಂಡಲಕೋಣಕ್ಕೆ ಹೋಗುವ ಅರಣ್ಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು 15 ಆನೆಗಳ ಹಿಂಡು 30 ಭಕ್ತರ ಗುಂಪಿನ ಮೇಲೆ ಬೆಳಗಿನ ಜಾವ 2.30 ರ ಸುಮಾರಿಗೆ ದಾಳಿ ನಡೆಸಿತು.

ಮೃತರಲ್ಲಿ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ. ಗಾಯಗೊಂಡ ಮೂವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ, ಉಳಿದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಓಬುಲಂವರಿಪಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸಬ್-ಇನ್ಸ್‌ಪೆಕ್ಟರ್ ಮಹೇಶ್ ಶವಗಳನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಭಕ್ತರನ್ನು ಮನೆಗೆ ಕಳುಹಿಸಲಾಯಿತು.

ಮತ್ತಷ್ಟು ಓದಿ: ಕೇರಳದ ದೇವಾಲಯದ ಉತ್ಸವದಲ್ಲಿ ರೊಚ್ಚಿಗೆದ್ದ ಆನೆಗಳು; ಮೂವರು ಸಾವು, 36 ಜನರಿಗೆ ಗಾಯ

ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅವರು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳಿಂದ ದಾಳಿಯ ವಿವರಗಳನ್ನು ಸಂಗ್ರಹಿಸಿ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 5 ಲಕ್ಷ ರೂ. ಆರ್ಥಿಕ ನೆರವು ನೀಡುವಂತೆ ಅವರು ನಿರ್ದೇಶನ ನೀಡಿದರು. ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ, ಅರಣ್ಯ ಪ್ರದೇಶಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರಿಗೆ ಸರಿಯಾದ ಸುರಕ್ಷತಾ ಕ್ರಮಗಳ ಬಗ್ಗೆ ಒತ್ತಿಹೇಳಿದ್ದಾರೆ.

ರೈಲ್ವೆ ಕೊಡೂರು ಶಾಸಕ ಅರವೆ ಶ್ರೀಧರ್ ಅವರಿಗೆ ಸಂತ್ರಸ್ತರ ಕುಟುಂಬಗಳು ಮತ್ತು ಗಾಯಾಳುಗಳನ್ನು ಭೇಟಿ ಮಾಡಿ ಸರ್ಕಾರದ ಪರವಾಗಿ ಬೆಂಬಲ ಮತ್ತು ಭರವಸೆ ನೀಡಲು ಸೂಚಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ