Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 15 ಲಕ್ಷ ದೀಪಗಳು; ಹೊಸ ಗಿನ್ನಿಸ್ ವಿಶ್ವ ದಾಖಲೆ

ದೀಪಾವಳಿ ಹಬ್ಬದ ಮುನ್ನಾದಿನದಂದು ಅಯೋಧ್ಯೆಯಲ್ಲಿ 15 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗುವ ಮೂಲಕ ಹೊಸ ಗಿನ್ನಿಸ್ ವಿಶ್ವ ದಾಖಲೆ ಬರೆಯಲಾಗಿದೆ. ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ಪ್ರದರ್ಶನ ಮಾಡಿದರು.

Ayodhya Deepotsav: ಅಯೋಧ್ಯೆಯಲ್ಲಿ ಬೆಳಗಿದ 15 ಲಕ್ಷ ದೀಪಗಳು; ಹೊಸ ಗಿನ್ನಿಸ್ ವಿಶ್ವ ದಾಖಲೆ
ಅಯೋಧ್ಯೆಯಲ್ಲಿ ನಡೆದ 6ನೇ ದೀಪೋತ್ಸವ
Follow us
| Updated By: Rakesh Nayak Manchi

Updated on:Oct 24, 2022 | 7:11 AM

ದೆಹಲಿ: ದೀಪಾವಳಿ ಹಬ್ಬ (Deepavali Festival)ದ ಮುನ್ನಾದಿನದಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಐತಿಹಾಸಿಕ ದೀಪೋತ್ಸವ (Deepotsav) ಆಚರಣೆಗೆ ಚಾಲನೆ ನೀಡುತ್ತಿದ್ದಂತೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 15 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿತು. ಇದು ಹೊಸ ಗಿನ್ನೆಸ್ ವಿಶ್ವ ದಾಖಲೆ (Guinness World Record)ಯನ್ನು ನಿರ್ಮಿಸಿದ್ದು, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಗಿನ್ನಿಸ್ ದಾಖಲೆ ಪ್ರಮಾಣ ಪತ್ರವನ್ನು ಪ್ರದರ್ಶಿಸಿದರು. ಭಾನುವಾರ ನಡೆದ ದೀಪೋತ್ಸವ ಆರನೇ ದೀಪೋತ್ಸವವಾಗಿದೆ. ಇದೇ ವೇಳೆ ‘ಜೈ ಶ್ರೀ ರಾಮ್’ ಎಂದು ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ, “ಶ್ರೀರಾಮನ ಪವಿತ್ರ ಜನ್ಮಸ್ಥಳದಿಂದ ನಾನು ನನ್ನ ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸುತ್ತೇನೆ. ಜನರು ಶ್ರೀರಾಮನಿಂದ ಎಷ್ಟು ಸಾಧ್ಯವೋ ಅಷ್ಟು ಕಲಿಯಬೇಕು, ಶ್ರೀರಾಮ ಯಾರನ್ನೂ ಬಿಡುವುದಿಲ್ಲ, ಯಾರಿಂದಲೂ ದೂರ ಸರಿಯುವುದಿಲ್ಲ” ಎಂದು ಮೋದಿ ಹೇಳಿದರು.

ದೀಪೋತ್ಸವ ಆಚರಣೆಗಾಗಿ ಅಯೋಧ್ಯೆ ತಲುಪಿದ ತಕ್ಷಣ ಪ್ರಧಾನಿಯವರು ತಾತ್ಕಾಲಿಕ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿ ಮಣ್ಣಿನ ದೀಪವನ್ನು ಹಚ್ಚಿ ಆರತಿ ಮಾಡಿದರು. ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮೋದಿಯವರ ಹಣೆಗೆ ಸಿಂಧೂರ ಹಚ್ಚಿದರು. ಸ್ಥಳದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಅಯೋಧ್ಯೆಯಲ್ಲಿ ಸಾಂಕೇತಿಕ ಭಗವಾನ್ ರಾಮನ ರಾಜ್ಯಾಭಿಷೇಕವನ್ನೂ ಮೋದಿ ನೆರವೇರಿಸಿದರು.

“ಪ್ರಪಂಚದಾದ್ಯಂತ ಜನರು ಅಯೋಧ್ಯೆಯಲ್ಲಿ ದೀಪೋತ್ಸವ ಆಚರಣೆಗಳನ್ನು ವೀಕ್ಷಿಸುತ್ತಿರುವುದು ಸಂತೋಷವಾಗಿದೆ. ಶ್ರೀರಾಮ ಲಲ್ಲಾ ದರ್ಶನ ಮತ್ತು ನಂತರ ರಾಜ ರಾಮನ ರಾಜ್ಯಾಭಿಷೇಕ ನೆರವೇರಿದೆ. ಈ ಅದೃಷ್ಟವು ಭಗವಾನ್ ರಾಮನ ಕೃಪೆಯಿಂದ ಮಾತ್ರ ದೊರೆಯುತ್ತದೆ. ನಾವು ಸ್ವಾತಂತ್ರ್ಯ ಪಡೆದು 75 ವರ್ಷ ಪೂರೈಸಿರುವ ಸಂದರ್ಭದಲ್ಲಿ ಈ ದೀಪಾವಳಿ ಬಂದಿದೆ. ಭಗವಾನ್ ರಾಮನ ಸಂಕಲ್ಪ ಶಕ್ತಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ” ಎಂದು ಮೋದಿ ಹೇಳಿದರು.

ಅಯೋಧ್ಯೆ ವಿಭಾಗದ ಕಮಿಷನರ್ ನವದೀಪ್ ರಿನ್ವಾ ಅವರು ಈ ಹಿಂದೆ ಸರಯು ಬ್ಯಾಂಕ್ ಬಳಿಯ ರಾಮ್ ಕಿ ಪೈಡಿಯಲ್ಲಿ ದೀಪೋತ್ಸವ ಆಚರಣೆಯ ಅಂಗವಾಗಿ 22,000 ಕ್ಕೂ ಹೆಚ್ಚು ಸ್ವಯಂಸೇವಕರಿಂದ 15 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಲಾಗುವುದು ಎಂದು ಹೇಳಿದ್ದರು. ಉಳಿದವುಗಳನ್ನು ಪಟ್ಟಣದ ಪ್ರಮುಖ ಛೇದಕಗಳು ಮತ್ತು ಸ್ಥಳಗಳಲ್ಲಿ ಇರಿಸಲಾಗುವುದು ಎಂದಿದ್ದರು.

“ಅಯೋಧ್ಯೆಯ ದೀಪೋತ್ಸವವು 6 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ಸ್ಫೂರ್ತಿಯೊಂದಿಗೆ ಪ್ರಾರಂಭವಾಯಿತು. ಉತ್ತರಪ್ರದೇಶದ ಈ ಹಬ್ಬ ದೇಶದ ಹಬ್ಬವಾಯಿತು. ಇಂದು ಇದು ಯಶಸ್ಸಿನ ಹೊಸ ಎತ್ತರವನ್ನು ಮುಟ್ಟುತ್ತಿದೆ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 am, Mon, 24 October 22