ಅಯೋಧ್ಯೆ ರಾಮ ಮಂದಿರದ ದೇಣಿಗೆ ಲೂಟಿ: ಬಯಲಾಯ್ತು ಆರೋಪಿಗಳ ಭ್ರಷ್ಟಾಚಾರ

ಅಯೋಧ್ಯೆ ಶ್ರೀರಾಮ ಮಂದಿರ ದೇಣಿಗೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಬಯಲಾಗಿದೆ. ಕಡಿಮೆ ಆದಾಯದ ಸಿಬ್ಬಂದಿ ಐಷಾರಾಮಿ ಬಂಗಲೆ, ಎಸ್‌ಯುವಿ ಹೊಂದಿದ್ದು, ಪ್ರತಿದಿನ 6-8 ಲಕ್ಷ ರೂ. ವಂಚಿಸುತ್ತಿದ್ದರು. ಜೇಬು, ಸಾಕ್ಸ್‌ಗಳಲ್ಲಿ ಹಣ ಸಾಗಿಸುತ್ತಿದ್ದರು. ಚಿನ್ನ-ಬೆಳ್ಳಿಗೆ ಲೆಕ್ಕವಿರಲಿಲ್ಲ. SIT ತನಿಖೆಯಲ್ಲಿ ಮಹಾಕುಂಭದ ವೇಳೆ ಗರಿಷ್ಠ ಕಳ್ಳತನ ನಡೆದಿದ್ದು, ಆರೋಪಿಗಳ ದಿಢೀರ್ ಆರ್ಥಿಕ ಏರಿಕೆ ಆಘಾತ ಮೂಡಿಸಿದೆ.

ಅಯೋಧ್ಯೆ ರಾಮ ಮಂದಿರದ ದೇಣಿಗೆ ಲೂಟಿ: ಬಯಲಾಯ್ತು ಆರೋಪಿಗಳ ಭ್ರಷ್ಟಾಚಾರ
ರಾಮ ಮಂದಿರ

Updated on: Jul 05, 2026 | 9:48 AM

ಅಯೋಧ್ಯಾ, ಜುಲೈ 05: ಅಯೋಧ್ಯೆಯ ಶ್ರೀರಾಮ ಮಂದಿರ(Ram Mandir)ದ  ದೇಣಿಗೆ ಹಣವನ್ನು ಅಕ್ರಮವಾಗಿ ವರ್ಗಾಯಿಸಿ, ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪಿಗಳ ಆರ್ಥಿಕ ಸ್ಥಿತಿಯಲ್ಲಿ ದಿಢೀರ್ ಭಾರಿ ಏರಿಕೆ ಕಂಡುಬಂದಿದೆ. ವಿಶೇಷ ತನಿಖಾ ತಂಡದ (SIT) ವರದಿಯ ಪ್ರಕಾರ, ತಿಂಗಳಿಗೆ ಕೇವಲ 14,000 ರೂ.ನಿಂದ 15,000 ರೂ. ಆದಾಯ ಹೊಂದಿದ್ದ ಸಾಮಾನ್ಯ ನೌಕರರು ಈಗ ಐಷಾರಾಮಿ ಬಂಗಲೆಗಳನ್ನು ನಿರ್ಮಿಸಿ, ಎಸ್‌ಯುವಿ (SUV) ಕಾರುಗಳಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ.

ಅವಿನಾಶ್ ಶುಕ್ಲಾ: ಆರಂಭದಲ್ಲಿ ಹನುಮಾನ್ ಗುಫಾ ಬಳಿ ಕುಡಿಯುವ ನೀರು ಮಾರುತ್ತಿದ್ದ ಈತ, ನಂತರ ದೇವಸ್ಥಾನದ ದೇಣಿಗೆ ಎಣಿಕೆ ಕೇಂದ್ರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಪ್ರತಾಪ್‌ಗಢ ಮೂಲದ ಈತ ಅಯೋಧ್ಯೆಯಲ್ಲಿ ದೊಡ್ಡ ಮನೆ ಕಟ್ಟುತ್ತಿದ್ದು, ಶನಿವಾರ ರಾತ್ರಿ ಪೊಲೀಸರು ಈತನಿಗೆ ಸೇರಿದ ಮಾರುತಿ ಬ್ರೆಝಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಲವ್‌ಕುಶ್ ಮಿಶ್ರಾ: ಈತ ಕಳೆದ ವರ್ಷ ಅಕ್ಟೋಬರ್‌ನಲ್ಲಿ 1,000 ಚದರ ಅಡಿಯ ಜಮೀನನ್ನು ಕೇವಲ 8.8 ಲಕ್ಷ ರೂ.ಗೆ ಖರೀದಿಸಿದ್ದಾಗಿ ದಾಖಲೆ ಸೃಷ್ಟಿಸಿದ್ದ. ಆದರೆ ಸ್ಥಳೀಯರ ಪ್ರಕಾರ ಆ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 24 ರಿಂದ 25 ಲಕ್ಷ ರೂ. ಆಗಿದೆ. ಈ ನಿಧಿಯ ಮೂಲದ ಬಗ್ಗೆ ತನಿಖೆ ನಡೆಯುತ್ತಿದ್ದು, ಈತನ ಪತ್ನಿಗೂ ನೋಟಿಸ್ ಜಾರಿಯಾಗಿದೆ.

ರಾಮಶಂಕರ್ ಯಾದವ್ (ಟಿನ್ನು): ಆರಂಭದಲ್ಲಿ ಚಾಲಕನಾಗಿದ್ದ ಈತ, ಈಗ ದೊಡ್ಡ ಹಾಸ್ಟೆಲ್ ಅನ್ನೇ ನಿರ್ಮಿಸಿದ್ದಾನೆ.

ದಿನಕ್ಕೆ 6 ರಿಂದ 8 ಲಕ್ಷ ರೂ. ಲೂಟಿ
ಪ್ರಕರಣ ಬೆಳಕಿಗೆ ಬರುವ ಮುನ್ನ ದೇವಸ್ಥಾನದ ಬ್ಯಾಂಕ್ ಖಾತೆಗಳಿಗೆ ದಿನಕ್ಕೆ ಸರಾಸರಿ 16 ರಿಂದ 18 ಲಕ್ಷ ರೂ. ಜಮಾ ಆಗುತ್ತಿತ್ತು. ಆದರೆ ಅಕ್ರಮ ಪತ್ತೆಯಾದ ನಂತರ ಈ ಮೊತ್ತ ದಿನಕ್ಕೆ 24 ರಿಂದ 26 ಲಕ್ಷ ರೂ.ಗೆ ಏರಿಕೆಯಾಗಿದೆ. ಬ್ಯಾಂಕ್ ಅಂಕಿ-ಅಂಶಗಳ ಆಧಾರದ ಮೇಲೆ, ಆರೋಪಿಗಳು ಪ್ರತಿದಿನ ದೇವಸ್ಥಾನದ ಕಾಣಿಕೆಯಲ್ಲಿ 6 ರಿಂದ 8 ಲಕ್ಷ ರೂಪಾಯಿಗಳನ್ನು ವಂಚಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ; 8 ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನ

ಸಾಕ್ಸ್ ಮತ್ತು ಜೇಬಿನಲ್ಲಿ ಹಣ ಕಳ್ಳಸಾಗಣೆ
ದೇಣಿಗೆ ಎಣಿಕೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎಂಟು ಆರೋಪಿಗಳ ಪೈಕಿ ಐವರು ಅನುಮಾನಾಸ್ಪದವಾಗಿ ಹಣವನ್ನು ನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಕೆಲವರು ಸಿಸಿಟಿವಿ ಕ್ಯಾಮೆರಾಗಳನ್ನು ಮರೆಮಾಚುತ್ತಿದ್ದರು. ಎಣಿಕೆ ಸಿಬ್ಬಂದಿಗೆ ಜೇಬಿಲ್ಲದ ಬಟ್ಟೆಗಳನ್ನು ಧರಿಸಬೇಕು ಎಂಬ ನಿಯಮವಿದ್ದರೂ ಅದನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು. ಆರೋಪಿಗಳು ನೋಟುಗಳನ್ನು ತಮ್ಮ ಜೇಬು ಹಾಗೂ ಸಾಕ್ಸ್‌ಗಳಲ್ಲಿ ಅಡಗಿಸಿ, ದೇವಸ್ಥಾನದ ಶೌಚಾಲಯಗಳಲ್ಲಿ ಬಚ್ಚಿಡುತ್ತಿದ್ದರು. ನಂತರ ಅದನ್ನು ಸಣ್ಣ ಸಣ್ಣ ಭಾಗಗಳಲ್ಲಿ ಹೊರಗೆ ಸಾಗಿಸುತ್ತಿದ್ದರು.

ಮಹಾಕುಂಭದ ವೇಳೆ ಗರಿಷ್ಠ ಕಳ್ಳತನ
ದೇವಸ್ಥಾನಕ್ಕೆ ದಿನಕ್ಕೆ ಸರಾಸರಿ 80,000 ದಿಂದ 1 ಲಕ್ಷ ಭಕ್ತರು ಬರುತ್ತಾರೆ. ಆದರೆ ಮಹಾಕುಂಭ ಮೇಳದ 45 ದಿನಗಳಲ್ಲಿ ಈ ಸಂಖ್ಯೆ ದಿನಕ್ಕೆ 10 ರಿಂದ 12 ಲಕ್ಷಕ್ಕೆ ಏರಿತ್ತು. ಆಗ ಕಾಣಿಕೆ ಎಣಿಸಲು ವಾರಾಣಸಿ ಮೂಲದ ಏಜೆನ್ಸಿಯಿಂದ 40-45 ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಯಿತು. ಇವರಲ್ಲಿ ಹಲವರನ್ನು ಕೆಲವೇ ಕೆಲವು ಟ್ರಸ್ಟ್ ಸದಸ್ಯರು ಶಿಫಾರಸು ಮಾಡಿದ್ದರು. ಇದೇ ಅವಧಿಯಲ್ಲಿ ಗರಿಷ್ಠ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ.

ಚಿನ್ನ-ಬೆಳ್ಳಿಗೂ ಇರಲಿಲ್ಲ ಲೆಕ್ಕ
ಭಕ್ತರು ನೀಡುತ್ತಿದ್ದ ಚಿನ್ನ, ಬೆಳ್ಳಿ ಮತ್ತು ಆಭರಣಗಳ ದೇಣಿಗೆಗೆ ಯಾವುದೇ ವ್ಯವಸ್ಥಿತ ಲೆಕ್ಕಪತ್ರ ಇರಲಿಲ್ಲ. ಇದು ಕಳ್ಳರಿಗೆ ಮತ್ತಷ್ಟು ಸುಲಭವಾಯಿತು. ಸದ್ಯ ಟ್ರಸ್ಟ್ ಮೊದಲ ಹಂತದಲ್ಲಿ ಪರೀಕ್ಷೆಗಾಗಿ 944 ಕೆಜಿ (9.44 ಕ್ವಿಂಟಾಲ್) ಬೆಳ್ಳಿಯನ್ನು ಸರ್ಕಾರಿ ಟಂಕಸಾಲೆಗೆ ಕಳುಹಿಸಿದೆ. ಎಸ್‌ಐಟಿ ತಂಡವು ಆಭರಣ ದೇಣಿಗೆಗಳ ಸಂಪೂರ್ಣ ದಾಖಲೆಗಳನ್ನು ಮತ್ತು ಭಾರತೀಯ ಮುದ್ರಣ ಹಾಗೂ ನಾಣ್ಯ ತಯಾರಿಕೆ ನಿಗಮದೊಂದಿಗೆ ನಡೆದ ವಹಿವಾಟಿನ ವಿವರಗಳನ್ನು ಕೋರಿದೆ.

ದೇವಸ್ಥಾನಕ್ಕೆ ಅಪಖ್ಯಾತಿ ಬರುತ್ತದೆ ಎಂಬ ಕಾರಣಕ್ಕೆ ಆರಂಭದಲ್ಲಿ ಸ್ಥಳೀಯ ಪೊಲೀಸರ ಸಹಾಯದಿಂದ ಲೂಟಿ ಮಾಡಿದ ಸ್ವತ್ತನ್ನು ವಶಪಡಿಸಿಕೊಳ್ಳಲಾಯಿತಾದರೂ, ಯಾವುದೇ ಎಫ್‌ಐಆರ್ (FIR) ದಾಖಲಿಸಿರಲಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us