ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ: ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ ಬಂಗಾಳದ ವೈದ್ಯರು
ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿಯ ಏಮ್ಸ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯರು ಇಂದು ( ಗುರುವಾರ) ಎರಡು ವಾರಗಳಿಂದ ನಡೆದುಕೊಂಡು ಬರುತ್ತಿದ್ದ ಮುಷ್ಕರವನ್ನು ನಿಲ್ಲಿಸಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವೈದ್ಯರು ಕೂಡ ಇಂದು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.

ಕೋಲ್ಕತ್ತಾ ಆಗಸ್ಟ್ 22: ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ (RG Kar Hospital) ತಮ್ಮ ಸಹೋದ್ಯೋಗಿಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ (West Bengal) ವೈದ್ಯರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ. ಮುಷ್ಕರವನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್ನ ಮನವಿಯ ಹೊರತಾಗಿಯೂ, ಪಶ್ಚಿಮ ಬಂಗಾಳದ ಜೂನಿಯರ್ ಡಾಕ್ಟರ್ಸ್ ಫ್ರಂಟ್ ತಮ್ಮ ಪ್ರತಿಭಟನೆಯನ್ನು ದೆಹಲಿಯ ಏಮ್ಸ್ನಲ್ಲಿರುವ ವೈದ್ಯರಂತೆ ಮುಕ್ತಾಯಗೊಳಿಸುವುದಿಲ್ಲ ಎಂದು ಹೇಳಿದೆ. ಮುಷ್ಕರ ನಿರತ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಭರವಸೆ ನೀಡಿತ್ತು.
ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿಯ ಏಮ್ಸ್ ಆಸ್ಪತ್ರೆಯ ರೆಸಿಡೆಂಟ್ ವೈದ್ಯರು ಇಂದು ( ಗುರುವಾರ) ಎರಡು ವಾರಗಳಿಂದ ನಡೆದುಕೊಂಡು ಬರುತ್ತಿದ್ದ ಮುಷ್ಕರವನ್ನು ನಿಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ನಿಂದ ಭರವಸೆಯನ್ನು ಪಡೆದ ನಂತರ ಮುಷ್ಕರ ನಿಲ್ಲಿಸುವ ತೀರ್ಮಾನ ಕೈಗೊಂಡಿದ್ದೇವೆ ಎಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(RDA) ಹೇಳಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ವೈದ್ಯರು ಕೂಡ ಇಂದು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.
ಮಂಗಳವಾರದಂದು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದ್ದು, ಕಾಲೇಜಿನ ಪ್ರಾಂಶುಪಾಲರ ನಡವಳಿಕೆ ಮತ್ತು ನಂತರ ನಡೆಸಿದ ತನಿಖೆಯ ವಿರುದ್ಧ ತೀವ್ರ ಅವಲೋಕನಗಳನ್ನು ಮಾಡಿತು. ವೈದ್ಯಕೀಯ ಆರೈಕೆಯ ಅಗತ್ಯವಿರುವ ಜನರ ಮೇಲೆ ಪರಿಣಾಮ ಬೀರುವ ಕಾರಣ ಕರ್ತವ್ಯವನ್ನು ಪುನರಾರಂಭಿಸುವಂತೆ ಸುಪ್ರೀಂ ಕೋರ್ಟ್ ವೈದ್ಯರಿಗೆ ಮನವಿ ಮಾಡಿತ್ತು.
ಗುರುವಾರ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, “ನಾವು ಎಲ್ಲಾ ವೈದ್ಯರಿಗೆ ಮನವಿ ಮಾಡುತ್ತೇವೆ. ಅವರ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಇಲ್ಲಿದ್ದೇವೆ. ದಯವಿಟ್ಟು ನಮ್ಮನ್ನು ನಂಬಿರಿ, ಆದ್ದರಿಂದ ನಾವು ಈ ವಿಷಯವನ್ನು ಕಲ್ಕತ್ತಾ ಹೈಕೋರ್ಟಿಗೆ ಬಿಟ್ಟಿಲ್ಲ ಎಂದಿದ್ದಾರೆ.
ಈ ವಿಷಯದ ಕುರಿತು ಅದರ ನಿರ್ದೇಶನಗಳ ಭಾಗವಾಗಿ, ಸುಪ್ರೀಂಕೋರ್ಟ್ 10 ಸದಸ್ಯರ ಕಾರ್ಯಪಡೆಯನ್ನು ಸ್ಥಾಪಿಸಲು ಆದೇಶ ನೀಡಿತು. ವೈದ್ಯಕೀಯ ವೃತ್ತಿಪರರಿಗೆ ಸುರಕ್ಷಿತ ಕೆಲಸದ ಪರಿಸ್ಥಿತಿಗಳ ವಿರುದ್ಧ ಹಿಂಸಾಚಾರವನ್ನು ತಡೆಗಟ್ಟಲು ಇದು ಶಿಫಾರಸು ಮಾಡಿದೆ.
ಇದನ್ನೂ ಓದಿ: ಆರ್ಜಿ ಕರ್ ಮಾಜಿ ಪ್ರಾಂಶುಪಾಲರು ಮತ್ತು ಇತರ 4 ವೈದ್ಯರ ಪಾಲಿಗ್ರಾಫ್ ಪರೀಕ್ಷೆಗೆ ನ್ಯಾಯಾಲಯ ಅನುಮತಿ
ಕಳೆದ ವಾರ ಆರ್ಜಿ ಕರ್ ಆಸ್ಪತ್ರೆಯ ವಿಧ್ವಂಸಕ ಕೃತ್ಯದ ಕುರಿತು ವರದಿ ಸಲ್ಲಿಸುವಂತೆ ಬಂಗಾಳ ಸರ್ಕಾರಕ್ಕೆ ತಿಳಿಸಿದ್ದರೆ, ತನಿಖೆಯ ಹೊಣೆ ಹೊತ್ತಿರುವ ಸಿಬಿಐಗೆ ಸ್ಥಿತಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ. ಈ ಅಪರಾಧವು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಆಡಳಿತಾರೂಢ ತೃಣಮೂಲ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ಜಟಾಪಟಿಯನ್ನುಂಟು ಮಾಡಿದ್ದು ಸಿಎಂ ರಾಜೀನಾಮೆಗೆ ವಿಪಕ್ಷ ಒತ್ತಾಯಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



