AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕೋಪ ನಿರ್ವಹಣೆ ಕಾಯ್ದೆಯಡಿ ಕೇಂದ್ರ ಸರ್ಕಾರ ಜಾರಿಮಾಡಿದ್ದ ಶೋಕಾಸ್ ನೋಟೀಸಿಗೆ ಬಂಡೋಪಾಧ್ಯಾಯ ಉತ್ತರ

ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಜಗಳದ ನಂತರ ಕೇಂದ್ರ ಗೃಹ ಸಚಿವಾಲಯವು ಕಠಿಣ ವಿಕೋಪ ನಿರ್ವಹಣೆ ಕಾಯ್ದೆ 2005 ರ ಅಡಿ ಬಂಡೋಪಾಧ್ಯಾಯ ಅವರಿಗೆ ಶೋಕಾಸ್ ನೋಟೀಸು ಜಾರಿಮಾಡಿತ್ತು.

ವಿಕೋಪ ನಿರ್ವಹಣೆ ಕಾಯ್ದೆಯಡಿ ಕೇಂದ್ರ ಸರ್ಕಾರ ಜಾರಿಮಾಡಿದ್ದ ಶೋಕಾಸ್ ನೋಟೀಸಿಗೆ ಬಂಡೋಪಾಧ್ಯಾಯ ಉತ್ತರ
ಅಲಾಪನ್ ಬಂಡೋಪಾಧ್ಯಾಯ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: Jun 04, 2021 | 4:55 PM

Share

ನವದೆಹಲಿ: ಕಳೆದ ತಿಂಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಭೆಗೆ ಗೈರುಹಾಜರಿಗಿದ್ದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಅವರಿಗೆ ತಾನು ವಿಕೋಪ ನಿರ್ವಹಣೆ ಕಾಯ್ದೆ ಅಡಿ ಜಾರಿಗೊಳಿಸಿದ್ದ ಶೋಕಾಸ್ ನೋಟೀಸ್​ಗೆ ಕೇಂದ್ರ ಸರ್ಕಾರವು ಉತ್ತರ ಪಡೆದಿದ್ದು ಅದನ್ನು ಪರಿಶೀಲಿಸಲಾಗುತ್ತಿದೆಯೆಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ‘ಮುಂದಿನ ಕ್ರಮವನ್ನು ಇಷ್ಟರಲ್ಲೇ ನಿರ್ಧರಿಸಲಾಗುವುದು,’ ಅಂತ ಸದರಿ ಬೆಳವಣಿಗೆ ಕುರಿತು ಮಾಹಿತಿ ಇರುವವರು ತಿಳಿಸಿರುವುದನ್ನು ಸುದ್ದಿಸಂಸ್ಥೆ ವರದಿ ಮಾಡಿದೆ.

ಕೇಂದ್ರ ಸರ್ಕಾರ ಮೇ 31 ರಂದು ಜಾರಿಗೊಳಿಸಿದ್ದ ನೋಟೀಸ್​ಗೆ ಉತ್ತರಿಸಿರುವ ಬಂಡೋಪಾಧ್ಯಾಯ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆದೇಶದ ಮೇರೆಗೆ ಚಂಡಮಾರುತ ಯಾಸ್​ನಿಂದ ಹಾನಿಗೊಳಗಾಗಿದ್ದ ಪೂರ್ವ ಮಿದ್ನಾಪುರ್ ಜಿಲೆಯಲ್ಲಿರುವ ದಿಘಾ ಎಂಬ ಹೆಸರಿನ ಊರಿಗೆ ಹೋಗಿರುವ ಬಗ್ಗೆ ಹೇಳಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರವೂ ಗೃಹಖಾತೆ ವ್ಯವಹಾರಗಳ ಸಚಿವಾಲಯಕ್ಕೆ ಅದೇ ದಿನ ಉತ್ತರವನ್ನು ಬರೆದು ಕಳಿಸಿದೆ. ಈಗಿನ ಮುಖ್ಯ ಕಾರ್ಯದರ್ಶಿ ಹೆಚ್​ಕೆ ದ್ವಿವೇದಿ ಅವರು ಸರ್ಕಾರದ ಪರ ಉತ್ತರ ಕಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಜಗಳದ ನಂತರ ಕೇಂದ್ರ ಗೃಹ ಸಚಿವಾಲಯವು ಕಠಿಣ ವಿಕೋಪ ನಿರ್ವಹಣೆ ಕಾಯ್ದೆ 2005 ರ ಅಡಿ ಬಂಡೋಪಾಧ್ಯಾಯ ಅವರಿಗೆ ಶೋಕಾಸ್ ನೋಟೀಸು ಜಾರಿಮಾಡಿತ್ತು. ಸದರಿ ಕಾಯ್ದೆಯಡಿ ದೋಷಿ ಎಂದು ಸಾಬೀತಾದರೆ ಎರಡು ವರ್ಷಗಳವರೆಗೆ ಜೈಲುವಾಸದ ಶಿಕ್ಷೆಯಾಗಬಹುದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಂಡಮಾರುತ ಯಾಸ್​ನನಿಂದ ಪಶ್ಚಿಮ ಬಂಗಾಳಕ್ಕೆ ಆಗಿರುವ ಹಾನಿಯನ್ನು ಪರಿಶೀಲಿಸಲು ಮೇ 28ರಂದು ಕಲೈಕುಂಡಾ ವೈಮಾನಿಕ ನೆಲೆಗೆ ಆಗಮಿಸಿದ್ದಾಗ, ಮಮತಾ ಬ್ಯಾನರ್ಜಿ ಅವರು ದೀರ್ಘಾಧಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಕೆಲವೇ ನಿಮಿಷಗಳಷ್ಟು ಕಾಲ ಹಾಜರಿದ್ದು ಅಲ್ಲಿಂದ ನಿರ್ಗಮಿಸಿದ್ದರು. ರಾಜ್ಯಕ್ಕೆ ಆಗಿರುವ ಹಾನಿಯ ಬಗ್ಗೆ ಒಂದಷ್ಟು ಕಾಗದಗಳನ್ನು ಪ್ರಧಾನ ಮಂತ್ರಿಯವರಿಗೆ ನೀಡಿ ಮಮತಾ ಹೊರಟು ಬಿಟ್ಟಿದ್ದರು. ಅವರು ಮತ್ತು ಆಗ ಮುಖ್ಯ ಕಾರ್ಯದರ್ಶಿಯಾಗಿದ್ದ ಬಂಡೋಪಾಧ್ಯಾಯ ಸಭೆಯಲ್ಲಿ ಕುಳಿತುಕೊಳ್ಳಲಿಲ್ಲ.

ಮಮತಾ ಬ್ಯಾನರ್ಜಿ ತಮ್ಮ ವರ್ತನೆಯಿಂದ ಪ್ರಧಾನಿ ಮೋದಿಯವರನ್ನು ಅವಮಾನಿಸಿದ್ದಾರೆ ಎಂದು ಭಾರತಿಯ ಜನತಾ ಪಕ್ಷದ ಧುರೀಣರು ಹೇಳಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತಿಕ್ಕಾಟ ಶುರುವಾಯಿತು.

1987ರ ಬ್ಯಾಚಿನ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್) ಪಶ್ಚಿಮ ಬಂಗಾಳ ಕೇಡರ್​ನ ಅಧಿಕಾರಿಯಾಗಿರುವ ಬಂಡೋಪಾಧ್ಯಾಯ, ಮೇ 31 ರಂದು ಸೇವೆಯಿಂದ ನಿವೃತ್ತರಾಗಬೇಕಿತ್ತು. ಆದರೆ, ಕೊವಿಡ್​ ಸಾಂಕ್ರಾಮಿಕ ಪಿಡುಗಿನ ವಿರುದ್ಧ ನಡೆದಿರುವ ಹೋರಾಟದಲ್ಲಿ ಅವರು ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆಂದು ಹೇಳಿ ಮೂರು ತಿಂಗಳು ಅವಧಿಯ ವಿಸ್ತರಣೆಯನ್ನು ಬಂಗಾಳ ಸರ್ಕಾರ ಕೇಳಿತ್ತು. ಅವರು ಸೇವೆಯಲ್ಲಿ ಮುಂದುವರೆಯಲು ಕೇಂದ್ರ ಸಮ್ಮತಿಸಿತ್ತು.

ಆದರೆ, ನಂತರ ನಡೆದ ವಿದ್ಯಮಾನಗಳಲ್ಲಿ ಕೇಂದ್ರ ಸರ್ಕಾರವು ಬಂಡೋಪಾಧ್ಯಾಯ ಅವರನ್ನು ಮೇ 31, ಬೆಳಗ್ಗೆ 10 ಗಂಟೆಯೊಳಗೆ ದೆಹಲಿಗೆ ಬಂದು ರಿಪೋರ್ಟ್​ ಮಾಡಿಕೊಳ್ಳುವಂತೆ ಹೇಳಿ, ರಾಜ್ಯ ಸರ್ಕಾರ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ತಿಳಿಸಿತ್ತು. ಆದರೆ, ಬಂಡೋಪಾಧ್ಯಾಯ ಅವರು ದೆಹಲಿಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳುವ ಬದಲು ರಿಟೈರಾಗುವ ನಿರ್ಧಾರ ತೆಗೆದುಕೊಂಡರು. ಆಮೇಲೆ ಮಮತಾ ಬ್ಯಾನರ್ಜಿ ಅವರು ಬಂಡೋಪಾಧ್ಯಾಯರನ್ನು ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿದರು. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇನ್ನೊಂದು ಸುತ್ತಿನ ಯುದ್ಧಕ್ಕೆ ವೇದಿಕೆಯಾಗಿ ಪರಿಣಮಿಸಿದೆ.

(West Bengals former cs alapan bandopadhyay replies to centres show cause notice)

ಇದನ್ನೂ ಓದಿ: ಕೇಂದ್ರ-ಮಮತಾ ಕಾದಾಟಕ್ಕೆ ನಾಟಕೀಯ ತಿರುವು, ಸೇವೆಗೆ ನಿವೃತ್ತಿ ಘೋಷಿಸಿದ ಮುಖ್ಯ ಕಾರ್ಯದರ್ಶಿ ಈಗ ಬಂಗಾಳ ಸರ್ಕಾರದ ಮುಖ್ಯ ಸಲಹೆಗಾರ!