ಟಿಶ್ಯೂ ಪೇಪರ್‌ನಲ್ಲಿತ್ತು ‘ಬಾಂಬ್’ ಎಂಬ ಮೆಸೇಜ್; ಇಂಡಿಗೋ ವಿಮಾನ ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ

ಉತ್ತರ ಪ್ರದೇಶದ ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ 'ಬಾಂಬ್' ಎಂದು ಬರೆದಿದ್ದ ಟಿಶ್ಯೂ ಪೇಪರ್ ಪತ್ತೆಯಾದ ಹಿನ್ನೆಲೆಯಲ್ಲಿ, ಇಂದು ಸಂಜೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದೆ. ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 113 ಪ್ರಯಾಣಿಕರಿದ್ದು, ಸಂಜೆ ಸುಮಾರು 5.55ಕ್ಕೆ ವಿಮಾನವು ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿದಿದೆ. ಕೂಡಲೇ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.

ಟಿಶ್ಯೂ ಪೇಪರ್‌ನಲ್ಲಿತ್ತು ಬಾಂಬ್ ಎಂಬ ಮೆಸೇಜ್; ಇಂಡಿಗೋ ವಿಮಾನ ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ
ಇಂಡಿಗೋ ವಿಮಾನ
Image Credit source: Getty Image

Updated on: Sep 10, 2026 | 8:54 PM

ಅಹಮದಾಬಾದ್, ಸೆಪ್ಟೆಂಬರ್ 10: ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ‘ಬಾಂಬ್ ಬೆದರಿಕೆ’ ಬಂದ ಹಿನ್ನೆಲೆಯಲ್ಲಿ ಇಂದು ಸಂಜೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಆದರೆ, ತಪಾಸಣೆಯ ನಂತರ ಯಾವುದೇ ಶಂಕಾಸ್ಪದ ವಸ್ತುವಾಗಲಿ ಅಥವಾ ಬಾಂಬ್ ಆಗಲಿ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವಿಮಾನ ಹಾರಾಟ ನಡೆಸುತ್ತಿದ್ದಾಗ ಟಿಶ್ಯೂ ಪೇಪರ್ ಮೇಲೆ ‘ಬಾಂಬ್’ ಎಂದು ಬರೆದಿರುವುದನ್ನು ವಿಮಾನ ಸಿಬ್ಬಂದಿಯೊಬ್ಬರು ಗಮನಿಸಿದ್ದರು. ತಕ್ಷಣವೇ ಜಾಗರೂಕರಾದ ಪೈಲಟ್ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ಅನುಮತಿ ಪಡೆದರು.

ವಿಮಾನದಲ್ಲಿದ್ದ 107 ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 113 ಜನರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಗಿಳಿಸಿ ತಪಾಸಣೆಗೆ ಒಳಪಡಿಸಲಾಯಿತು. ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ವಿಮಾನ ಮತ್ತು ಲಗೇಜ್‌ಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡಿದ್ದು, ಈವರೆಗೆ ಯಾವುದೇ ಶಂಕಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಇದನ್ನೂ ಓದಿ: ಶ್ರೀನಗರ ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ

ಟಿಶ್ಯೂ ಪೇಪರ್​ನಲ್ಲಿತ್ತು ಬೆದರಿಕೆ ಸಂದೇಶ:

ಲಕ್ನೋ-ದಮ್ಮಾಮ್ ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದಾಗ ವಿಮಾನದ ಒಳಗೆ ‘ಬಾಂಬ್’ ಎಂಬ ಬರಹವಿದ್ದ ಟಿಶ್ಯೂ ಪೇಪರ್ ಕಂಡುಬಂದಿದ್ದು, ತಕ್ಷಣವೇ ಪೈಲಟ್ ಅಹಮದಾಬಾದ್ ಎಟಿಆರ್‌ಸಿ ಸಂಪರ್ಕಿಸಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಪಡೆದರು. ಈ ಘಟನೆಯ ತನಿಖೆಯ ಭಾಗವಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಪೊಲೀಸರು ಪ್ರಯಾಣಿಕರ ಕೈಬರಹದ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಸಿಕ್ಕಿರುವ ಟಿಶ್ಯೂ ಪೇಪರ್‌ನಲ್ಲಿನ ಬರಹಕ್ಕೆ ಹೋಲಿಸಲು ಪ್ರತಿಯೊಬ್ಬ ಪ್ರಯಾಣಿಕರಿಗೂ ಟಿಶ್ಯೂ ಪೇಪರ್ ನೀಡಿದ್ದು, ಅದರ ಮೇಲೆ ಬರೆಯುವಂತೆ ಸೂಚಿಸಲಾಗಿದೆ.


ಇದನ್ನೂ ಓದಿ: ಲಕ್ನೋದಲ್ಲಿ ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಗಾಂಧಿ ಇದ್ದ ಏರ್ ಇಂಡಿಯಾ ವಿಮಾನ

ಈ ಘಟನೆ ತಿಳಿಯುತ್ತಿದ್ದಂತೆ ವಿಮಾನ ನಿಲ್ದಾಣ ಭದ್ರತಾ ಪಡೆ (CISF), ಅಗ್ನಿಶಾಮಕ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಕ್ಕೆ ದೌಡಾಯಿಸಿದ್ದು, ವಿಮಾನ ಮತ್ತು ಲಗೇಜ್‌ಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿವೆ.

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಳೆದ 10 ದಿನಗಳ ಅಂತರದಲ್ಲಿ ಸಂಭವಿಸಿದ ಎರಡನೇ ತುರ್ತು ಭೂಸ್ಪರ್ಶ ಇದಾಗಿದೆ. ಇತ್ತೀಚೆಗಷ್ಟೇ ‘ಏರ್ ಇಂಡಿಯಾ ಎಕ್ಸ್‌ಪ್ರೆಸ್’ ವಿಮಾನವೊಂದು ತುರ್ತು ಇಳಿಕೆಯಾಗಿದ್ದು, ಆ ಪ್ರಕರಣದ ತನಿಖೆಯಲ್ಲಿ ವಿಮಾನದ ಸಿಬ್ಬಂದಿಯೊಬ್ಬರ ಹೆಸರು ಹೊರಬಂದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us