ಛತ್ರೋನ್ ಕಿ ಗೂಂಜ್: ರಾಹುಲ್ ಗಾಂಧಿಯ ಸುಳ್ಳಿನ ಸರಮಾಲೆಯನ್ನು ಬಿಚ್ಚಿಟ್ಟ ಬಿಜೆಪಿಯ ಜೂಟ್ ಕಿ ಗೂಂಜ್

ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂದು ನಡೆದ ಛತ್ರೋನ್ ಕಿ ಗೂಂಜ್ ಸಮಾವೇಶದಲ್ಲಿ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಅವರ ಭಾಷಣದ ಕೇವಲ ಒಂದು ಗಂಟೆಯ ಅವಧಿಯಲ್ಲೇ 11 ಸುಳ್ಳು ಹಾಗೂ 1 ದಾರಿತಪ್ಪಿಸುವ ಹೇಳಿಕೆಗಳನ್ನು ಜೂಟ್ ಕಿ ಗೂಂಜ್ ಫ್ಯಾಕ್ಟ್‌ಚೆಕ್ ಮೂಲಕ ಬಯಲು ಮಾಡಿದೆ.​​

ಛತ್ರೋನ್ ಕಿ ಗೂಂಜ್: ರಾಹುಲ್ ಗಾಂಧಿಯ ಸುಳ್ಳಿನ ಸರಮಾಲೆಯನ್ನು ಬಿಚ್ಚಿಟ್ಟ ಬಿಜೆಪಿಯ ಜೂಟ್ ಕಿ ಗೂಂಜ್
ರಾಹುಲ್​ ಗಾಂಧಿ
Image Credit source: x.RahulGandhi

Updated on: Sep 19, 2026 | 10:18 PM

ನವದೆಹಲಿ, ಸೆಪ್ಟೆಂಬರ್​​ 19: ಕಾಂಗ್ರೆಸ್​​ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರು ದೇಶಾದ್ಯಂತ ‘ಛತ್ರೋನ್ ಕಿ ಗೂಂಜ್’ ಎಂಬ ರಾಷ್ಟೀಯ ವಿದ್ಯಾರ್ಥಿಗಳ ಸಂವಾದ ಮತ್ತು ಯುವ ಸಬಲೀಕರಣ ಅಭಿಯಾನವನ್ನು ನಡೆಸಿದ್ದಾರೆ. ಇದರ ಭಾಗವಾಗಿ ಇಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಮಾವೇಶ ನಡೆಯಿತು. ಈ ವೇಳೆ ಅವರು ಕೇಂದ್ರ ಸರ್ಕಾರದ ನೇಮಕಾತಿಗಳು, ಮೀಸಲಾತಿ, ಒಪ್ಪಂದಗಳು, ಶಿಕ್ಷಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬಿಜೆಪಿ ‘ಜೂಟ್ ಕಿ ಗೂಂಜ್’ ಎಂದು ಲೇವಡಿ ಮಾಡಿದ್ದು, ರಾಹುಲ್​ ಗಾಂಧಿ ಸಾಲು ಸಾಲು ಸುಳ್ಳು ಆರೋಪಗಳನ್ನು ಮಾಡಿದ್ದಾರೆಂದು ದಾಖಲೆಗಳ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟು ತಿರುಗೇಟು ನಿಡಿದೆ.

ಎಂಪಿಪಿಎಸ್‌ಸಿ 87:13 ಫಾರ್ಮುಲಾ ಕುರಿತ ಹೇಳಿಕೆ ಸತ್ಯಕ್ಕೆ ದೂರ

‘ಕಳೆದ ಎಂಟು ವರ್ಷಗಳಿಂದ ಎಂಪಿಪಿಎಸ್‌ಸಿ ನೇಮಕಾತಿಗಳಲ್ಲಿ ಶೇ. 13ರಷ್ಟು ಹುದ್ದೆಗಳನ್ನು ತಡೆಹಿಡಿಯಲಾಗಿದ್ದು, 4.87 ಲಕ್ಷ ಹುದ್ದೆಗಳು ಬಾಕಿ ಉಳಿದಿವೆ ಎಂಬ ರಾಹುಲ್ ಗಾಂಧಿ ಅವರ ಆರೋಪ ಸುಳ್ಳು’ ಎಂದು ಜೂಟ್ ಕಿ ಗೂಂಜ್​​ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿಸಿದೆ. ‘ಈ 87:13 ಸೂತ್ರಕ್ಕೆ ಸಂಬಂಧಿಸಿದ ಮಧ್ಯಪ್ರದೇಶ ಸಾಮಾನ್ಯ ಆಡಳಿತ ಇಲಾಖೆಯ ಸುತ್ತೋಲೆ ಹೊರಬಿದ್ದಿದ್ದು, ಕೇವಲ ನಾಲ್ಕು ವರ್ಷಗಳ ಹಿಂದೆ, ಅಂದರೆ 2022ರ ಸೆಪ್ಟೆಂಬರ್ 29ರಂದು, 2019ರಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಬಿಸಿ ಮೀಸಲಾತಿಯನ್ನು ಶೇ. 14ರಿಂದ ಶೇ. 27ಕ್ಕೆ ಹೆಚ್ಚಿಸಿದಾಗ ಕಾನೂನು ತೊಡಕುಗಳು ಎದುರಾಗಿದ್ದವು’ ಎಂದು ತಿಳಿಸಿದೆ.

ಜೂಟ್ ಕಿ ಗೂಂಜ್ ಟ್ವೀಟ್​ 


‘ಈ ಸೂತ್ರದಿಂದ ನೇಮಕಾತಿಗಳು ರದ್ದಾಗಿಲ್ಲ, ಶೇ. 87ರಷ್ಟು ಹುದ್ದೆಗಳಿಗೆ ಪ್ರಕ್ರಿಯೆ ನಡೆದಿತ್ತು ಹಾಗೂ ಉಳಿದ ಶೇ. 13ರಷ್ಟು ಹುದ್ದೆಗಳಿಗೆ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಲಾಗಿತ್ತು. 2025ರ ಜನವರಿಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಈ ವ್ಯವಸ್ಥೆಯನ್ನು ಮಧ್ಯಂತರ ಕ್ರಮವಾಗಿ ಎತ್ತಿಹಿಡಿದಿದೆ. ವಿವಿಧ ನೇಮಕಾತಿಗಳಲ್ಲಿ ಸುಮಾರು 10,000 ಹುದ್ದೆಗಳಿಗೆ ಮಾತ್ರ ಇದು ಅನ್ವಯವಾಗಿದ್ದು, 4.87 ಲಕ್ಷ ಹುದ್ದೆಗಳು ಬಾಕಿಯಿವೆ’ ಎಂಬ ಹೇಳಿಕೆ ನಿರಾಧಾರವಾಗಿದೆ.

ಒಬಿಸಿ ಮೀಸಲಾತಿಗೆ ತಡೆ ನೀಡಿದ್ದು ಹೈಕೋರ್ಟ್: ಬಿಜೆಪಿ ಸರ್ಕಾರವಲ್ಲ

ಕಾಂಗ್ರೆಸ್ ಸರ್ಕಾರ 2019ರ ಮಾರ್ಚ್‌ನಲ್ಲಿ ಹೆಚ್ಚಿಸಿದ್ದ ಒಬಿಸಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ನ್ಯಾಯಾಲಯದ ನೆಪವೊಡ್ಡಿ ತಡೆಹಿಡಿದಿದೆ ಎಂಬ ಆರೋಪ ಸುಳ್ಳು. 2019ರ ಮಾರ್ಚ್ 8ರಂದು ಕಮಲ್ ನಾಥ್ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ 9 ದಿನಗಳಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಕಾಲೇಜು ಪ್ರವೇಶಾತಿಯಲ್ಲಿ ಶೇ. 14ಕ್ಕಿಂತ ಹೆಚ್ಚು ಮೀಸಲಾತಿ ನೀಡದಂತೆ ನಿರ್ದೇಶನ ನೀಡಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ನ್ಯಾಯಾಲಯದ ವ್ಯಾಪ್ತಿಗೆ ಬಾರದ ನೇಮಕಾತಿಗಳಲ್ಲಿ ಶೇ. 27ರಷ್ಟು ಒಬಿಸಿ ಮೀಸಲಾತಿ ಜಾರಿಗೆ ತರಲು 2021ರ ಸೆಪ್ಟೆಂಬರ್ 2ರಂದು ಆದೇಶ ಹೊರಡಿಸಿತ್ತು.

ಅದಾನಿ ನಂಟು ಆರೋಪಕ್ಕೆ ತಿರುಗೇಟು 

ಅದಾನಿ ಸಂಸ್ಥೆಗೆ ಸರ್ಕಾರಿ ಗುತ್ತಿಗೆಗಳನ್ನು ನೀಡಿ, ಅದರಿಂದ ಬಂದ ಹಣವನ್ನು ಬಿಜೆಪಿಗೆ ನೀಡಲಾಗುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಜೂಟ್ ಕಿ ಗೂಂಜ್​​ ತಿರುಗೇಟು ನೀಡಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ 22,267 ಕೋಟಿ ರೂ ಮೊತ್ತದ ಬೆಂಗಳೂರು ಸುರಂಗ ಮಾರ್ಗ ಯೋಜನೆಯ ಬಿಡ್ ತೆರೆದಾಗ ಅದಾನಿ ಸಂಸ್ಥೆ ಅತ್ಯಂತ ಕಡಿಮೆ ಬಿಡ್ಡುದಾರರಾಗಿ ಹೊರಹೊಮ್ಮಿದೆ. ತೆಲಂಗಾಣದ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದಾನಿ ಸಮೂಹದೊಂದಿಗೆ 12,400 ಕೋಟಿ ರೂ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ, ಕೇರಳಂನಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣ ಹಾಗೂ ವಿಝಿಂಜಂ ಬಂದರು ಸೇರಿದಂತೆ ಅದಾನಿ ಮೂಲಸೌಕರ್ಯ ಯೋಜನೆಗಳು ಮುಂದುವರಿದಿವೆ. ಹೀಗಿರುವಾಗ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿನ ಅದಾನಿ ಒಪ್ಪಂದಗಳ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ನೀಡಬೇಕಿತ್ತು ಅಲ್ವಾ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ‘ಪ್ರಜಾಪ್ರಭುತ್ವದ ಕೊಲೆ’; ನಂದಿಗ್ರಾಮದ ಅಭ್ಯರ್ಥಿ ಬಂಧನಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಇನ್ನು ಬುಡಕಟ್ಟು ಜನಾಂಗದವರು ಶಿಕ್ಷಣ ಪಡೆದುಕೊಳ್ಳುವುದು ಪ್ರಧಾನಿ ಮೋದಿ ಸರ್ಕಾರಕ್ಕೆ ಇಷ್ಟವಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. 2014-15ರಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ ಸಂಖ್ಯೆ 129. ಆದರೆ 2026ರ ಆಗಸ್ಟ್ ವೇಳೆಗೆ 511ಕ್ಕೆ ಹೆಚ್ಚಿಸಲಾಗಿದೆ. 2014ರಲ್ಲಿ ಇದ್ದದ್ದು 40 ಸಾವಿರ ವಿದ್ಯಾರ್ಥಿಗಳು ಆದರೆ, 2024-25ರ ವೇಳೆಗೆ ಸುಮಾರು ನಾಲ್ಕು ಪಟ್ಟು ಅಂದರೆ 1.5 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ಎರಡು ವರ್ಷದಲ್ಲಿ ಪ್ರಿ-ಮೆಟ್ರಿಕ್ ವಿದ್ಯಾರ್ಥಿವೇತನವನ್ನು 29 ಲಕ್ಷಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಜೂಟ್ ಕಿ ಗೂಂಜ್ ಅಂಕಿಅಂಶ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:45 pm, Sat, 19 September 26

Loading...
Unable to load recommendations.
Follow Us