ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಸಚಿವ ವಿಜಯ್ ಶಾ ವಿರುದ್ಧ ಮೊಕದ್ದಮೆಗೆ ಮಧ್ಯಪ್ರದೇಶ ಸರ್ಕಾರ ನಕಾರ

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧದ ವಿವಾದಿತ ಹೇಳಿಕೆ ಪ್ರಕರಣದಲ್ಲಿ ಸಚಿವ ವಿಜಯ್ ಶಾ ವಿರುದ್ಧ ಕಾನೂನು ಕ್ರಮಕ್ಕೆ ಮಧ್ಯಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿದೆ. ಸಚಿವರು ಹೆಸರು ಉಲ್ಲೇಖಿಸಿಲ್ಲ, ಅವಮಾನಿಸುವ ಉದ್ದೇಶ ಇರಲಿಲ್ಲ ಹಾಗೂ ಹಲವು ಬಾರಿ ಕ್ಷಮೆಯಾಚಿಸಿದ್ದಾರೆ ಎಂಬ ಐದು ಕಾರಣಗಳನ್ನು ಸರ್ಕಾರ ಉಲ್ಲೇಖಿಸಿದ್ದು, ಪ್ರಕರಣದ ಮುಂದಿನ ಕ್ರಮ ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ.

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಸಚಿವ ವಿಜಯ್ ಶಾ ವಿರುದ್ಧ ಮೊಕದ್ದಮೆಗೆ ಮಧ್ಯಪ್ರದೇಶ ಸರ್ಕಾರ ನಕಾರ
Vijay Qureshi
Image Credit source: NDTV

Updated on: Sep 03, 2026 | 10:08 AM

ಭೋಪಾಲ್, ಸೆಪ್ಟೆಂಬರ್ 03: ಭಾರತೀಯ ಸೇನೆಯ ಹಿರಿಯ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಂಪುಟ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಸಂಪುಟ ಸಭೆಯ ಈ ತೀರ್ಮಾನಕ್ಕೆ ರಾಜ್ಯಪಾಲ ಮಂಗುಭಾಯಿ ಪಟೇಲ್ ಕೂಡ ಅಧಿಕೃತ ಒಪ್ಪಿಗೆ ನೀಡಿದ್ದಾರೆ.

ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಸಚಿವರ ವಿರುದ್ಧ ವಿಚಾರಣೆಗೆ ಅನುಮತಿ ನೀಡದಿರಲು ಐದು ಪ್ರಮುಖ ಕಾರಣಗಳನ್ನು ನೀಡಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲು ಸಿದ್ಧತೆ ನಡೆಸಿದೆ.

ಸಚಿವರನ್ನು ಸಮರ್ಥಿಸಿಕೊಳ್ಳಲು ಸರ್ಕಾರದ 5 ಪ್ರಮುಖ ವಾದಗಳು:

ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ: ವಿವಾದಿತ ಹೇಳಿಕೆಯ ನಂತರ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಸಚಿವರ ವಿರುದ್ಧ ನೇರವಾಗಿ ದೂರು ದಾಖಲಿಸಲು ಮುಂದೆ ಬಂದಿಲ್ಲ.

ಅಧಿಕಾರಿಯ ಹೆಸರು ಉಲ್ಲೇಖಿಸಿಲ್ಲ: ಸಚಿವರು ತಮ್ಮ ಇಡೀ ಭಾಷಣದಲ್ಲಿ ಎಲ್ಲಿಯೂ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸಿಲ್ಲ.

ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್ ವೇಳೆ ಧ್ವಂಸಗೊಂಡಿದ್ದ ಜೈಶ್ ಪ್ರಧಾನ ಕಚೇರಿ ರೆಡಿ, ಮತ್ತೆ ಚುರುಕಾಯ್ತು ಜೆಇಎಂ ಉಗ್ರ ಜಾಲ

ಅವಮಾನಿಸುವ ದುರುದ್ದೇಶವಿರಲಿಲ್ಲ: ಯಾರ ಭಾವನೆಗಳಿಗೂ ಧಕ್ಕೆ ತರುವುದು ಅಥವಾ ಯಾರನ್ನೂ ಅವಮಾನಿಸುವುದು ಸಚಿವರ ಉದ್ದೇಶವಾಗಿರಲಿಲ್ಲ.

ಕೋಮು ಸೌಹಾರ್ದತೆಗೆ ಧಕ್ಕೆಯಾಗಿಲ್ಲ: ಈ ಹೇಳಿಕೆಯಿಂದ ಸಮಾಜದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಅಥವಾ ಕೋಮು ಸಾಮರಸ್ಯ ಕದಡಿಲ್ಲ.

ಲಿಖಿತ ಹಾಗೂ ಬಹಿರಂಗ ಕ್ಷಮೆಯಾಚನೆ: ವಿವಾದ ತೀವ್ರಗೊಂಡ ಬೆನ್ನಲ್ಲೇ ಸಚಿವರು ಬಹಿರಂಗವಾಗಿ ಹಾಗೂ ಲಿಖಿತ ರೂಪದಲ್ಲಿ ಹಲವು ಬಾರಿ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಸುಪ್ರೀಂ ಕೋರ್ಟ್ ವಿಚಾರಣೆ ಮತ್ತು ಎಸ್‌ಐಟಿ ತನಿಖೆ

ಎಸ್‌ಐಟಿ ತನಿಖೆ ಪೂರ್ಣ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ವಿಶೇಷ ತನಿಖಾ ತಂಡ ಈಗಾಗಲೇ ತನಿಖೆ ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ಅನುಮತಿ ಬಾಕಿ: ಸರ್ಕಾರದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ನಿರಾಕರಣೆಯಾಗಿರುವ ಕಾರಣ, ಈ ವರದಿಯನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್ ಮುಂದಿನ ಕ್ರಮ ಕೈಗೊಳ್ಳಲಿದೆ.

ಕರ್ನಲ್ ಸೋಫಿಯಾ ಖುರೇಷಿ ಯಾರು?: ಭಾರತೀಯ ಸೇನೆಯ ಸಿಗ್ನಲ್ಸ್ ವಿಭಾಗದ ಹಿರಿಯ ಅಧಿಕಾರಿಯಾಗಿರುವ ಕರ್ನಲ್ ಸೋಫಿಯಾ ಖುರೇಷಿ, ಬಹುರಾಷ್ಟ್ರೀಯ ಸೇನಾ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ದೇಶದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ‘ಆಪರೇಷನ್ ಸಿಂಧೂರ್’ ಕುರಿತ ಮಾಧ್ಯಮಗೋಷ್ಠಿಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ಸಚಿವರ ವಿವಾದಿತ ಹೇಳಿಕೆಯ ವಿಡಿಯೋ ವೈರಲ್ ಆದಾಗ, ಮಧ್ಯಪ್ರದೇಶ ಹೈಕೋರ್ಟ್ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಸಚಿವರು ಬಳಸಿದ್ದು ಕೆಟ್ಟ ಭಾಷೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us