AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ 1 ಲಕ್ಷ ನಕಲಿ ಮತದಾರರಿಗೇಕೆ ನೋಟಿಸ್ ನೀಡಿಲ್ಲ? ಚುನಾವಣಾ ಆಯೋಗಕ್ಕೆ ಪವನ್ ಖೇರಾ ಪ್ರಶ್ನೆ

ಇಂದು ಮುಂಜಾನೆ, ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ ಆರೋಪಗಳನ್ನು ಹೊರಿಸಿದ್ದರು. ಪವನ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ 2 ಪ್ರತ್ಯೇಕ ಕ್ಷೇತ್ರಗಳಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಅವರು ಇನ್ನೂ ಎಷ್ಟು ಕಡೆ ಮತ ಚಲಾಯಿಸಿದ್ದಾರೆ ಎಂಬುದರ ತನಿಖೆಯಾಗಬೇಕೆಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಚುನಾವಣಾ ಆಯೋಗ ಪವನ್ ಖೇರಾಗೆ ನೋಟಿಸ್ ನೀಡಿತ್ತು.

ಬೆಂಗಳೂರಿನ 1 ಲಕ್ಷ ನಕಲಿ ಮತದಾರರಿಗೇಕೆ ನೋಟಿಸ್ ನೀಡಿಲ್ಲ? ಚುನಾವಣಾ ಆಯೋಗಕ್ಕೆ ಪವನ್ ಖೇರಾ ಪ್ರಶ್ನೆ
Pawan Khera
ಸುಷ್ಮಾ ಚಕ್ರೆ
|

Updated on: Sep 02, 2025 | 8:33 PM

Share

ನವದೆಹಲಿ, ಸೆಪ್ಟೆಂಬರ್ 2: 2 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರಿದೆ ಎಂಬ ಕಾರಣಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಆದರೆ, ಬಿಜೆಪಿ ಹಾಗೂ ಚುನಾವಣಾ ಆಯೋಗಕ್ಕೆ ಪವನ್ ಖೇರಾ (Pawan Khera) ತಿರುಗೇಟು ನೀಡಿದ್ದಾರೆ. ನೋಟಿಸ್ ಸಾರ್ವಜನಿಕವಾದ ಸ್ವಲ್ಪ ಸಮಯದ ನಂತರ ಪವನ್ ಖೇರಾ ಪ್ರತಿಕ್ರಿಯಿಸಿದ್ದು, ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ. “ನಾನು ನವದೆಹಲಿ ಕ್ಷೇತ್ರದಿಂದ 2016ರಲ್ಲೇ ಶಿಫ್ಟ್ ಆಗಿದ್ದೇನೆ. ಅಲ್ಲಿಂದ ನನ್ನ ಹೆಸರು ಡಿಲೀಟ್ ಮಾಡಲು ಅರ್ಜಿಯನ್ನೂ ಸಲ್ಲಿಸಿದ್ದೇನೆ. ಆದರೂ ಚುನಾವಣಾ ಆಯೋಗ ಎರಡೂ ಕಡೆಗಳಲ್ಲಿ ನನ್ನ ಹೆಸರನ್ನು ಇರಿಸಿಕೊಂಡಿದೆ. ನಾನು ಎರಡೂ ಕಡೆ ಮತ ಚಲಾಯಿಸಿದ್ದೇನೆ ಎಂಬುದಕ್ಕೆ ಸಿಸಿಟಿವಿ ದಾಖಲೆ ನೀಡಲಿ. ಚುನಾವಣಾ ಆಯೋಗ ಮಾಡಿದ ತಪ್ಪನ್ನು ನನ್ನ ಮೇಲೆ ಹಾಕಲಾಗುತ್ತಿದೆ” ಎಂದು ಹೇಳುವ ಮೂಲಕ ಪವನ್ ಖೇರಾ ವೋಟ್ ಚೋರಿಗೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ ಎಂದಿದ್ದಾರೆ.

ಇದೇ ರೀತಿ ಚುನಾವಣಾ ಆಯೋಗ ಹಲವು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಒಂದೇ ಹೆಸರನ್ನಿಟ್ಟಿದೆ. ಆ ಮೂಲಕ ಮತ ಕಳ್ಳತನ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಸಾಕ್ಷಿ ಸಮೇತ ಸಾಬೀತುಪಡಿಸಿದ್ದರು. ಆದರೆ, ಆ ಬಗ್ಗೆ ಆಯೋಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರೆಲ್ಲರೂ ಎರಡು ಕಡೆ ಹೆಸರಿದ್ದರೂ ಒಂದೇ ಕಡೆ ಮತ ಚಲಾವಣೆ ಮಾಡಿದ್ದಾರೆ ಎಂದು ಬಿಜೆಪಿ ಘೋಷಿಸಿತ್ತು. ಅದೇ ರೀತಿ ನಾನು ಕೂಡ ನವದೆಹಲಿಯಿಂದ 2016ರಲ್ಲೇ ಶಿಫ್ಟ್ ಆಗಿದ್ದೇನೆ. ಹಾಗಿದ್ದರೆ ದೆಹಲಿ ಕ್ಷೇತ್ರದಲ್ಲಿ ನನ್ನ ಹೆಸರಿನಲ್ಲಿ ಯಾರು, ಯಾರಿಗೆ ಮತ ಹಾಕುತ್ತಿದ್ದಾರೆ ಎಂಬುದನ್ನು ತಿಳಿಯಲು ಸಿಸಿಟಿವಿ ವಿಡಿಯೋ ನೀಡಬೇಕು ಎಂದಿದ್ದಾರೆ.

ಇದನ್ನೂ ಓದಿ: 2 ಮತದಾರರ ಗುರುತಿನ ಚೀಟಿ ಹೊಂದಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಚುನಾವಣಾ ಆಯೋಗ ನೋಟಿಸ್

“ನಾನು 2016ರಲ್ಲಿಯೇ ನವದೆಹಲಿಯಿಂದ ಸ್ಥಳಾಂತರಗೊಂಡೆ. ಅಲ್ಲಿಂದ ನನ್ನ ಹೆಸರನ್ನು ತೆಗೆದುಹಾಕಲು ನಾನು ಅಪ್ಲಿಕೇಷನ್ ನೀಡಿದ್ದೇನೆ. ಆದರೂ ನನ್ನ ಹೆಸರು ಇನ್ನೂ ಏಕೆ ಇದೆ? ಆಗಸ್ಟ್ 7ರಿಂದ ಇಲ್ಲಿಯವರೆಗೆ ರಾಹುಲ್ ಗಾಂಧಿ ಇದನ್ನೇ ಹೇಳುತ್ತಿದ್ದಾರೆ. ಭಾರತದ ಪ್ರತಿಯೊಂದು ಕ್ಷೇತ್ರದಲ್ಲಿಯೂ ನೂರಾರು ಮತ್ತು ಸಾವಿರಾರು ಅಂತಹ ನಕಲಿ ಹೆಸರುಗಳಿವೆ. ಇವುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ” ಎಂದು ಪವನ್ ಖೇರಾ ಆರೋಪಿಸಿದ್ದಾರೆ.

ಮತದಾರರ ವಂಚನೆಯ ಕುರಿತು ಕಾಂಗ್ರೆಸ್‌ನಿಂದ ಬಂದ ದೂರುಗಳನ್ನು ನಿರ್ಲಕ್ಷಿಸಲಾಗಿದ್ದರೂ, ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಬಹಳ ಆಸಕ್ತಿ ತೋರುತ್ತಿದೆ. ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ 1,00,000 ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಯಾಕೆ ಯಾವುದೇ ನೋಟಿಸ್ ನೀಡಿಲ್ಲ? ಈಗ ನನಗೆ ಮಾತ್ರ ನೋಟಿಸ್ ನೀಡಿದ್ದೇಕೆ? ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ