ಮುಸ್ಲಿಂ ಮೀಸಲಾತಿ ನೀಡುವುದಾಗಿ ರಾಹುಲ್ ಗಾಂಧಿಯೇ ಹೇಳಿದ್ದಾರೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

Lok Sabha Elections 2024: ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮೀಸಲಾತಿ ನೀಡಲಾಗುವುದು ಎಂದು ಖುದ್ದು ರಾಹುಲ್ ಗಾಂಧಿಯವರೇ ಹೇಳಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ 10-12 ವರ್ಷಗಳ ಹಿಂದೆ ಹೇಳಿದ್ದ ಮಾತಿನ ವಿಡಿಯೋವೊಂದನ್ನು ಪ್ರಸ್ತಾಪಿಸಿ ಮೋದಿ ಟೀಕಾಪ್ರಹಾರ ನಡೆಸಿದ್ದಾರೆ.

ಮುಸ್ಲಿಂ ಮೀಸಲಾತಿ ನೀಡುವುದಾಗಿ ರಾಹುಲ್ ಗಾಂಧಿಯೇ ಹೇಳಿದ್ದಾರೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ - ರಾಹುಲ್ ಗಾಂಧಿ

Updated on: May 20, 2024 | 6:37 PM

ನವದೆಹಲಿ: ಕಾಂಗ್ರೆಸ್ ಹಿಂದೂ-ಮುಸ್ಲಿಂ ರಾಜಕಾರಣ ಮಾಡುತ್ತಿದೆ. ಮೊದಲಿನಿಂದಲೂ ಬಿಜೆಪಿಯನ್ನು ಮುಸ್ಲಿಂ ವಿರೋಧಿ ಪಕ್ಷವೆಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ, ನಾವು ಯಾವ ಧರ್ಮಕ್ಕೂ ಓಲೈಕೆ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್ ಎಸ್​ಸಿ, ಎಸ್​ಟಿ ಮೀಸಲಾತಿಯನ್ನು ತೆಗೆದು ಮುಸ್ಲಿಮರಿಗೆ ಹಂಚಿಕೆ ಮಾಡುವ ಯೋಚನೆಯಲ್ಲಿದೆ. ಈ ಹಿಂದೆ ರಾಹುಲ್ ಗಾಂಧಿಯವರೇ (Rahul Gandhi) ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಿದ್ಧವಿದೆ ಎಂದು ಹೇಳಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಟೀಕಿಸಿದ್ದಾರೆ.

ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿರುವ ಪಿಎಂ ನರೇಂದ್ರ ಮೋದಿ, ನಾನು ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ಶೇರ್ ಮಾಡಿದ ರಾಹುಲ್ ಗಾಂಧಿಯವರ 11-12 ವರ್ಷ ಹಳೇ ವಿಡಿಯೋವೊಂದನ್ನು ನೋಡುತ್ತಿದ್ದೆ. ಅದರಲ್ಲಿ ರಾಹುಲ್ ಗಾಂಧಿ, “ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರೂ ಮುಸ್ಲಿಂ ಮೀಸಲಾತಿ ಬಗ್ಗೆ ಒಮ್ಮೆಯೂ ತುಟಿ ಬಿಚ್ಚಿ ಮಾತನಾಡಿಲ್ಲ. ನಾವೂ ನೇರವಾಗಿಯೇ ಅವರ ಬಳಿ ಕೇಳಿದ್ದೇವೆ. ಆದರೂ ಅವರು ಮೌನ ವಹಿಸಿದ್ದಾರೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ” ಎಂದು ಹೇಳಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.

ಇದನ್ನೂ ಓದಿ: Rahul Gandhi: ಮದುವೆ ಯಾವಾಗ?; ರಾಯ್​ಬರೇಲಿ ಜನರಿಗೆ ನಗುತ್ತಲೇ ಉತ್ತರ ಕೊಟ್ಟ ರಾಹುಲ್ ಗಾಂಧಿ

ಈ ವಿಡಿಯೋವನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆಯೂ ಕಾಂಗ್ರೆಸ್​ನ ಮುಸ್ಲಿಂ ಪರ ಧೋರಣೆಯನ್ನು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಹಿಂದೂಗಳಿಗೆ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಬಜೆಟ್ ಮಾಡಲು ಕಾಂಗ್ರೆಸ್ ಬಯಸುತ್ತಿದೆ. ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅವರು ಅದೇ ರೀತಿ ಮಾಡುತ್ತಾರೆ, ನಾವು ದೇಶವನ್ನು ಒಟ್ಟಿಗೆ ಇಡಲು ಬಯಸುತ್ತೇವೆಯೇ ಅಥವಾ ಇಲ್ಲವೇ? ಈ ರೀತಿ ಭಾರತೀಯರನ್ನು ವಿಭಜಿಸುವುದು ಒಳ್ಳೆಯದೇ?” ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ನ ಪ್ರಣಾಳಿಕೆ ಎಂದು ಕರೆದಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದ ಗುಪ್ತ ಅಜೆಂಡಾವು ಜಾತಿಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವುದು ಮತ್ತು ಓಟ್ ಬ್ಯಾಂಕ್ ಅನ್ನು ತುಷ್ಟೀಕರಣದ ಮೂಲಕ ಒಗ್ಗೂಡಿಸುವುದು ಎಂಬುದು ಸ್ಪಷ್ಟವಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ಈ ಪ್ರಯೋಜನಗಳನ್ನು ನೀಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ನಾನು ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ: ವಿವಾದಕ್ಕೆ ತೆರೆ ಎಳೆದ ಪ್ರಧಾನಿ ಮೋದಿ

2014ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ “ವೋಟ್ ಜಿಹಾದ್” ಗಾಗಿ ಪ್ರತಿಪಾದಿಸುವವರ ಜೊತೆ ಕೈಜೋಡಿಸಿದೆ. ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಒಪ್ಪಂದ ಮಾಡಿಕೊಂಡ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ದೇಶದ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಿತು. ಈ ಆಸ್ತಿಗಳು ಪ್ರಮುಖ ಸ್ಥಳಗಳಲ್ಲಿ ಹರಡಿಕೊಂಡಿವೆ, ಅಲ್ಲಿ ಒಂದು ಗಜ ಭೂಮಿ ಹಲವು ಲಕ್ಷ ರೂಪಾಯಿಗಳ ಬೆಲೆಯಾಗಿದೆ ”ಎಂದು ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Mon, 20 May 24

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us