Congress Protests Live Updates: ರಾಹುಲ್​ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಧರಣಿ, ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ರಾಜ್ಯ ಕಾಂಗ್ರೆಸ್​ ಘಟಕ

| Updated By: ಗಂಗಾಧರ​ ಬ. ಸಾಬೋಜಿ

Updated on:Jun 16, 2022 | 2:51 PM

ಕಾಂಗ್ರೆಸ್​ ರ‍್ಯಾಲಿ ಲೈವ್​: ಬೆಳಗ್ಗೆ 9:30 ರ ವೇಳೆಗೆ ಕೆಪಿಸಿಸಿ ಕಚೇರಿಯಿಂದ ರಾಜ್‌ಭವನ್​​ವರೆಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸಲಿದ್ದು, ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.

Congress Protests Live Updates: ರಾಹುಲ್​ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಧರಣಿ, ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ರಾಜ್ಯ ಕಾಂಗ್ರೆಸ್​ ಘಟಕ
ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ

LIVE NEWS & UPDATES

  • 16 Jun 2022 02:51 PM (IST)

    Congress Protests Live Updates: ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ

    ಇಡಿಯಿಂದ ರಾಹುಲ್​ ಗಾಂಧಿ ವಿಚಾರಣೆ ಹಿನ್ನೆಲೆ ರಾಷ್ಟ್ರಪತಿಗೆ ರಾಜ್ಯ ಕಾಂಗ್ರೆಸ್​ ಘಟಕ ಮನವಿ ಸಲ್ಲಿಸಿದೆ. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ ಸಲ್ಲಿಸಿದ ಬಳಿಕ ಸಲೀಂ ಅಹ್ಮದ್​ ಪ್ರತಿಕ್ರಿಯೆ ನೀಡಿದ್ದು, ವಿಚಾರಣೆ ಹೆಸರಲ್ಲಿ 3 ದಿನ ರಾಹುಲ್ ಗಾಂಧಿಗೆ ಚಿತ್ರಹಿಂಸೆ ನೀಡಿದ್ದಾರೆ. ರಾಷ್ಟ್ರಪತಿ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಮನವಿ ಸಲ್ಲಿಕೆ ಮಾಡಲಾಗಿದೆ ಎಂದು ನಗರದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್​ ಹೇಳಿಕೆ ನೀಡಿದರು.

  • 16 Jun 2022 02:45 PM (IST)

    Congress Protests Live Updates: ಲೆಫ್ಟಿನೆಂಟ್ ಗವರ್ನರ್ ಕಚೇರಿ ಮುಂದೆ‌ ಕಾಂಗ್ರೆಸ್ ಪ್ರತಿಭಟನೆ

    ದೆಹಲಿ: ಲೆಫ್ಟಿನೆಂಟ್ ಗವರ್ನರ್ ಕಚೇರಿ ಮುಂದೆ‌ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದ್ದು,  ಈ ವೇಳೆ ಜಲಫಿರಂಗಿ ರಬಸಕ್ಕೆ ಬ್ಯಾರಿಕೇಟ್​ನಿಂದ ಕಾರ್ಯಕರ್ತ ಹಾರಿ ಬಿದಿದ್ದಾನೆ.

  • 16 Jun 2022 02:40 PM (IST)

    Congress Protests Live Updates: ಮಹಿಳಾ ಸಂಸದೆಯ ಮೇಲೆ‌ ಹಲ್ಲೆ ನಡೆದಿದೆ

    ದೆಹಲಿ: ಕಳೆದ 3 ದಿನಗಳು ರಾಹುಲ್ ಗಾಂಧಿಯವರನ್ನು ವಿಚಾರಣೆ ಮಾಡಲಾಗಿದೆ. ರಾಹುಲ್​ರನ್ನು ಬೆಂಬಲಿಸಲು ಕಾಂಗ್ರೆಸ್ ಕಚೇರಿಗೆ ಹೋಗಿದ್ದೆವು. ಆದ್ರೆ ದೆಹಲಿ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿ ಬಂಧಿಸಿದ್ರು. ನಮ್ಮನ್ನು ಪೊಲೀಸ್ ಠಾಣೆಯಲ್ಲಿ ದಿಗ್ಬಂಧನದಲ್ಲಿ ಇಟ್ಟಿದ್ರು. ಏನುಕ್ಕೆ ಬಂಧಿಸಿದ್ರು ಏನೂ ಹೇಳದೆ ಕತ್ತಲೆಯಲ್ಲಿ ಇಟ್ಟಿದ್ರು. ಮಹಿಳಾ ಸಂಸದೆಯ ಮೇಲೆ‌ ಹಲ್ಲೆ ನಡೆದಿದೆ. ಲೋಕಸಭಾ ಸ್ಪೀಕರ್ ಅವರಿಗೆ ರಕ್ಷಣೆಗೆ ಬರುವಂತೆ ಮನವಿ ಮಾಡಿದ್ದೇವೆ ಎಂದು ದೆಹಲಿಯಲ್ಲಿ ಸಂಸದ‌ ಡಿ.ಕೆ‌ ಸುರೇಶ್‌ ಹೇಳಿಕೆ ನೀಡಿದರು.

  • 16 Jun 2022 01:34 PM (IST)

    Congress Protests Live Updates: ಕಾಂಗ್ರೆಸ್ ಪ್ರತಿಭಟನೆಗೆ ಪಂಚ ಪ್ರಶ್ನೆಗಳನ್ನು ಕೇಳಿದ ಸಿ.ಟಿ ರವಿ

    ಬೆಂಗಳೂರು: ನಾನು ಪ್ರತಿಭಟನೆ ಮಾಡ್ತಿರುವ ಕಾಂಗ್ರೆಸ್‌ನವರಿಗೆ, ಯಾವಾಗಲೂ ಕಾನೂನಿನ ಬಗ್ಗೆ ಮಾತನಾಡುವವರಿಗೆ ಪಂಚ ಪ್ರಶ್ನೆ ಕೇಳುತ್ತೇನೆ. ಸೋನಿಯಾ, ರಾಹುಲ್ ಕುಟುಂಬ ಕಾನೂನಿಗಿಂತ ಅತೀತರೇ? ಅ ರೀತಿ ಕಾನೂನಿಗಿಂತ ಅತೀತರಾಗಿದ್ರೆ ಸಂವಿಧಾನದ ಯಾವ ಅಡಿಯಲ್ಲಿ ಪ್ರಾತಿನಿಧ್ಯ ನೀಡಿದೆ? ಅಸೋಸಿಯೇಷನ್ ಜರ್ನಲ್​ನಲ್ಲಿರೋ ಮೂಲ ಷೇರುದಾರರು ಎಷ್ಟು? ಯಂಗ್ ಇಂಡಿಯಾದಲ್ಲಿರೋ ಪಾಲುದಾರರು ಎಷ್ಟು? ಅಲ್ಲಿ ಷೇರುದಾರರು, ಇಲ್ಲಿ ಪಾರುದಾರರು ಎಷ್ಟು ಎಂದು ವಿಧಾನಸೌಧದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ. ಎಜೆಎಲ್ ಆರಂಭವಾದಾಗ ಆರಂಭದಲ್ಲಿ ಐದೂವರೆ ಸಾವಿರ ಷೇರುದಾರರಿದ್ದರು. ಯಂಗ್ ಇಂಡಿಯಾಗೆ ವರ್ಗಾವಣೆ ಮಾಡುವಾಗ ಇದ್ದದ್ದು 1,500, ಇಲ್ಲಿ ವರ್ಗಾವಣೆ ಆದಾಗ ನಾಲ್ಕು ಜನ ಪಾಲುದಾರರಿದ್ದಾರೆ. ಸೋನಿಯಾ 38%, ರಾಹುಲ್ 38%, ಮೋತಿಲಾಲ್ ವೋಹ್ರಾ, ಆಸ್ಕರ್ ಫರ್ನಾಂಡೀಸ್. ಮೋತಿಲಾಲ್ ವೋಹ್ರಾ, ಫೆರ್ನಾಂಡಿಸ್ ಶಿವನ ಪಾದ ಸೇರಿದ್ದಾರೆ.

    ಪ್ರೈವೆಟ್ ಕಂಪನಿಗೆ ವರ್ಗಾವಣೆ ಮಾಡುವಾಗ ಕಾನೂನಿನಲ್ಲಿ ಅಧಿಕಾರವಿದೆಯಾ? ವರ್ಗಾವಣೆ ಮಾಡುವಾಗ ಮೂಲ ಶೇರುದಾರರ ಅನುಮತಿ ಇದೆಯಾ? ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾವಣೆ ಮಾಡುವಾಗ ಎಜೆಎಲ್ ಕಂಪನಿಯ ಸಾಲ ಎಷ್ಟಿತ್ತು? ಆಸ್ತಿಯ ಪ್ರಮಾಣ ಇವತ್ತಿನ ಮಾರುಕಟ್ಟೆ ದರ ಅಲ್ಲ. ಸಬ್ ರಿಜಿಸ್ಟ್ರಾರ್ ಮೌಲ್ಯ 2 ಸಾವಿರ ಕೋಟಿ ಬೆಲೆ ಬಾಳುವ ಆಸ್ತಿ ಅಸೆಸ್ ಮಾಡದೇ ಕೇವಲ 50 ಲಕ್ಷಕ್ಕೆ ವರ್ಗಾವಣೆ ಮಾಡಿರೋದು ಅಕ್ರಮ ಅಲ್ವಾ? ಯಂಗ್ ಇಂಡಿಯಾ ಕಂಪನಿ ಈಗ ಯಾವ ಕಾರಣವಾಗಿ ಯಾವ ವಹಿವಾಟು ನಡೆಸ್ತಿದೆ ಎಂದು ಹೇಳಿದರು.

  • 16 Jun 2022 01:20 PM (IST)

    Congress Protests Live Updates: ಕ್ವೀನ್ಸ್​ ರಸ್ತೆಯ ಕೆಪಿಸಿಸಿ ಕಚೇರಿ ಸುತ್ತಮುತ್ತ ಟ್ರಾಫಿಕ್​ಜಾಮ್​

    ಬೆಂಗಳೂರು: ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆಯಿಂದ ಕ್ವೀನ್ಸ್​ ರಸ್ತೆಯ ಕೆಪಿಸಿಸಿ ಕಚೇರಿ ಸುತ್ತಮುತ್ತ ಟ್ರಾಫಿಕ್​ಜಾಮ್ ಉಂಟಾಗಿದ್ದು,​ 1 ಗಂಟೆಗೂ ಹೆಚ್ಚು ಸಮಯದಿಂದ ವಾಹನಗಳು ನಿಂತಲ್ಲೇ ನಿಂತಿವೆ. ಟ್ರಾಫಿಕ್​ಜಾಮ್​ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಬಿಟ್ಟು ಬಸ್ ಹೋಗಿದ್ದು,​ ಬಿಎಂಟಿಸಿ ಬಸ್​ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಾಜಿನಗರದವರೆಗೆ ಟಿಕೆಟ್​ ನೀಡಿ ಅರ್ಧಕ್ಕೆ ಬಿಟ್ಟೋಗಿದ್ದಾರೆ. ನಿಲ್ದಾಣಕ್ಕೆ ಹೋಗುವುದು ಹೇಗೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

  • 16 Jun 2022 01:11 PM (IST)

    Congress Protests Live Updates: ರಾಜಭವನ ಚಲೋ ವೇಳೆ ಕಾರ್ಯಕರ್ತನಿಗೆ ಹೃದಯಾಘಾತ

    ಬೆಂಗಳೂರು: ಕಾಂಗ್ರೆಸ್​ ನಾಯಕರಿಂದ ರಾಜಭವನ ಚಲೋ ವೇಳೆ ಬಸ್​ನಲ್ಲಿ ಕುಳಿತಿದ್ದ ನಂದಿನಿ ಲೇಔಟ್​ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವಿ. ರಾಮಕೃಷ್ಣನಿಗೆ  ಹೃದಯಾಘಾತವಾಗಿದ್ದು, ಫೋರ್ಟಿಸ್​ ಆಸ್ಪತ್ರೆಗೆ ಕೆಪಿಸಿಸಿ ಪದಾಧಿಕಾರಿಗಳು ದಾಖಲಿಸಿದ್ದಾರೆ.

  • 16 Jun 2022 12:51 PM (IST)

    Congress Protests Live Updates: ಬಿಜೆಪಿಯ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರುತ್ತೆ

    ಬೆಂಗಳೂರು: ನಮ್ಮ ಪ್ರತಿಭಟನೆ ಬಿಜೆಪಿ ಸರ್ಕಾರದ ವಿರುದ್ಧ ನಡೆಯುತ್ತಿದೆ. ಸುಳ್ಳು ಕೇಸ್​ ಹಾಕಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ನಗರದಲ್ಲಿ ಟಿವಿ9ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಯಾರಿಗೂ ಕಿರುಕುಳ ನೀಡಬಾರದು. ಬಿಜೆಪಿಯ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರುತ್ತೆ ಎಂದು ಹೇಳಿದರು.

  • 16 Jun 2022 12:44 PM (IST)

    Congress Protests Live Updates: ರಿಜ್ವಾನ್​​, ಜಾರ್ಜ್, ಪರಮೇಶ್ವರ್​​​ ವಶಕ್ಕೆ ಪಡೆದ ಪೊಲೀಸರು

    ಬೆಂಗಳೂರು: ರಿಜ್ವಾನ್​​, ಜಾರ್ಜ್, ಪರಮೇಶ್ವರ್​ನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಮುಂದೆ ಹೋಗದಂತೆ ತಡೆಯಲು ಮುಂದಾಗಿದ್ದಾರೆ. ವಶಕ್ಕೆ ಪಡೆದು ಬಸ್​​ನಲ್ಲಿ ತುಂಬಿಸುತ್ತಿದ್ದಾರೆ. ವಶಕ್ಕೆ ಪಡೆಯವ ವೇಳೆ ಕಾರ್ಯಕರ್ತರ ತಳ್ಳಾಟ ನೂಕಾಟವಾಗಿದ್ದು, ಕೇಂದ್ರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ.

  • 16 Jun 2022 12:03 PM (IST)

    Congress Protests Live Updates: ‘ಕೈ’ ಕಾರ್ಯಕರ್ತರನ್ನ ವಶಕ್ಕೆ ಪಡೆಯುತ್ತಿರುವ ಪೊಲೀಸರು

    ಬೆಂಗಳೂರು: ‘ಕೈ’ ಕಾರ್ಯಕರ್ತರನ್ನ ವಶಕ್ಕೆ ಪಡೆಯುತ್ತಿರುವ ಪೊಲೀಸರು. ಇಂಡಿಯನ್​ ಎಕ್ಸ್​ಪ್ರೆಸ್​ ಬಳಿಕ ವಶಕ್ಕೆ ಪಡೀತಿರುವ ಸಿಬ್ಬಂದಿ. ರಿಜ್ವಾನ್​ ಅರ್ಷದ್​, ಕೆ.ಜೆ.ಜಾರ್ಜ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂದೆ ಹೋಗದಂತೆ ತಡೆಯಲು ಪೊಲೀಸರು ಮುಂದಾಗಿದ್ದಾರೆ.

  • 16 Jun 2022 11:47 AM (IST)

    Congress Protests Live Updates: ಇವರಿಂದ ಪ್ರಜಾಪ್ರಭುತ್ವದ ಹತ್ಯೆಯಾಗಿದೆ

    ಬೆಂಗಳೂರು: ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಲು ಎಲ್ಲ ರಾಜ್ಯಗಳಲ್ಲೂ ರಾಜಭವನಕ್ಕೆ ಮುತ್ತಿಗೆ ಹಾಕುವುದಕ್ಕೆ ಕರೆ ನೀಡಲಾಗಿದೆ. ಸಂವಿಧಾನ ಉಳಿಸುವುದಕ್ಕಾಗಿ ಈ ಹೋರಾಟ ಮಾಡ್ತಿದ್ದೇವೆ. ತನಿಖೆಯ ಹೆಸರಿನಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಕಚೇರಿ ಬಳಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಾವು ಕಾನೂನಿನ ವಿರುದ್ಧ ಇಲ್ಲ. ಆದ್ರೆ ಉದ್ದೇಶಪೂರ್ವಕವಾಗಿ ಈ ತನಿಖೆ ಮಾಡಿಸ್ತಿದ್ದಾರೆ. ಕಾಂಗ್ರೆಸ್​​ನ ಪಾದಯಾತ್ರೆ ಕುಗ್ಗಿಸಲು ಈ ರೀತಿ ಮಾಡ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಯಲಿದ್ದು, ಅದರ ವರ್ಚಸ್ಸನ್ನ ಕಡಿಮೆ ಮಾಡಲು ಷಡ್ಯಂತ್ರ ಮಾಡಲಾಗಿದೆ. ಇವರಿಂದ ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಬಿಜೆಪಿಯವರು ಸಂವಿಧಾನ, ಕಾನೂನಿಗೆ ಬೆಲೆ ಕೊಡ್ತಿಲ್ಲ. ಇವತ್ತು ಕಾಂಗ್ರೆಸ್​​ನವರಿಗೆ ಮಾಡಿದ್ದಾರೆ, ನಾಳೆ ಬೇರೆಯವರಿಗೆ. ನಾವೆಲ್ಲರೂ ಸೇರಿಕೊಂಡು ಈ ಷಡ್ಯಂತ್ರವನ್ನ ಖಂಡಿಸಬೇಕು ಎಂದು ಹೇಳಿದರು.

  • 16 Jun 2022 11:39 AM (IST)

    Congress Protests Live Updates: ಕಾಂಗ್ರೆಸ್​ನವರು ಜನರೆದುರು ಬೆತ್ತಲಾಗುತ್ತಿದ್ದಾರೆ

    ಬೆಂಗಳೂರು: ಕಾಂಗ್ರೆಸ್​ನವರಿಗೊಂದು ಕಾನೂನು ಜನರಿಗೊಂದು ಕಾನೂ‌ನು ಇದೆಯಾ ಅಂತ ಜನ ಕೇಳುತ್ತಿದ್ದಾರೆ. ದೇಶದ ಕಾನೂನು, ಸಂವಿಧಾನ ಒಂದು ಮನೆತನಕ್ಕೆ ಸಂಬಂಧ ಇಲ್ಲ ಅಂದ್ರೆ ಹೇಗೆ? ಜನತಂತ್ರ ವ್ಯವಸ್ಥೆಯಲ್ಲಿ ಹೀಗೆ ಪ್ರತಿಭಟನೆ ಮಾಡಿದ್ರೆ ಕಾಯ್ದೆ ಕಾನೂನಿಗೆ ಏನು ಬೆಲೆ ಕೊಟ್ಟಂತಾಯ್ತು? ಒಂದೂ ಕಾಲು ಶತಮಾನದಷ್ಟು ಹಳೆಯ ಪಕ್ಷ ನಡೆದುಕೊಳ್ಳುವ ರೀತೀನಾ ಇದು? ಕೋವಿಡ್ ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿದೆ. ಎರಡು ಶಾಲೆಗಳು ಬಂದ್ ಆಗಿವೆ. ಈ ಹಿಂದೆಯೂ ಕೋವಿಡ್​ನಲ್ಲಿ ಪ್ರತಿಭಟನೆ ಮಾಡಿದ್ರು, ಈಗಲೂ ಪ್ರತಿಭಟನೆ ಮಾಡ್ತಿದ್ದಾರೆ. ಇವರ ಬಗ್ಗೆ ಜನರೇ ಯೋಚನೆ ಮಾಡಬೇಕು. ಇದು ಕಾಂಗ್ರೆಸ್​ನವರ ಗುಲಾಮಿತನದ ಸಂಕೇತ. ದೆಹಲಿಯಲ್ಲೂ, ಬೆಂಗಳೂರಿನಲ್ಲೂ ಪ್ರತಿಭಟನೆ ಮಾಡ್ತಿದಾರೆ. ವಿಚಾರಣೆಗೆ ಕರೆದಿದ್ದಾರೆ, ಹೋಗಿ ವಿಚಾರಣೆ ಎದುರಿಸಬೇಕು. ಅದು ಬಿಟ್ಟು ಪ್ರತಿಭಟನೆ ಮಾಡೋದು ಸರಿಯಲ್ಲ. ಕಾಂಗ್ರೆಸ್​ನವರು ಜನರೆದುರು ಬೆತ್ತಲಾಗುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು.

  • 16 Jun 2022 10:52 AM (IST)

    Congress Protests Live Updates: ನಾಳೆ ಮತ್ತೆ ತನಿಖೆಗೆ ರಾಹುಲ್ ಗಾಂಧಿ ಹಾಜರ್

    ನ್ಯಾಷನಲ್ ಹೆರಾಲ್ಡ್ ಪ್ರಕರಣ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ತನಿಖೆಗೆ ಮರು ಹಾಜರಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

  • 16 Jun 2022 10:44 AM (IST)

    Congress Protests Live Updates: ಬಿಜೆಪಿ ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ

    ಬೆಂಗಳೂರು: ಬಿಜೆಪಿ ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ನಗರದಲ್ಲಿ ಕಾಂಗ್ರೆಸ್​ ನಾಯಕ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದರು. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಭಾಗಿ ಆಗಿದ್ರಾ. ಬಿಜೆಪಿಯ ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರು? ದೇಶದಲ್ಲಿ ರಾಹುಲ್​ ಗಾಂಧಿ ಆಸ್ತಿಯೇ ಇಲ್ಲ. ದೇಶಕ್ಕಾಗಿ ತಮ್ಮ ಆಸ್ತಿಯನ್ನು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್​ ನಾಯಕ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದರು.

  • 16 Jun 2022 10:36 AM (IST)

    Congress Protests Live Updates: ಎಲ್ಲ ಸುಳ್ಳು ಕೇಸ್​ ಹಾಕಿ ನಮ್ಮನ್ನು ಹೆದರಿಸುತ್ತಿದ್ದಾರೆ

    ಬೆಂಗಳೂರು: ಎಲ್ಲ ಸುಳ್ಳು ಕೇಸ್​ ಹಾಕಿ ನಮ್ಮನ್ನು ಹೆದರಿಸುತ್ತಿದ್ದಾರೆ. ನಮ್ಮ ಪಕ್ಷ ಇವರ ಯಾವ ಬೆದರಿಕೆಗೂ ಬಗ್ಗುವುದಿಲ್ಲ. ನಮ್ಮನ್ನು ಜೈಲಿಗೆ ಹಾಕ್ತೀರಾ ಹಾಕಿ ಎಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.

  • 16 Jun 2022 10:29 AM (IST)

    Congress Protests Live Updates: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಧನ

    ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ್ದಕ್ಕೆ ಪ್ರತಿಭಟನೆಯ ನಡುವೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

  • 16 Jun 2022 10:26 AM (IST)

    Congress Protests Live Updates: ಇವರು ಪ್ರತಿಭಟನೆ ಮಾಡಿದಾಗ ಕಾನೂನು ಉಲ್ಲಂಘನೆ ಆಗಿಲ್ವಾ?

    ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ವಿರೋಧ ಪಕ್ಷದವರನ್ನ ಹೆದರಿಸಲು ಪ್ರಯತ್ನ ಮಾಡ್ತಿದ್ದಾರೆ. ಇವರ ಬೆದರಿಕೆಗೆಲ್ಲ ಕಾಂಗ್ರೆಸ್​ ಹೆದರುವುದಿಲ್ಲ. ಇವರು ಪ್ರತಿಭಟನೆ ಮಾಡಿದಾಗ ಕಾನೂನು ಉಲ್ಲಂಘನೆ ಆಗಿಲ್ವಾ ಎಂದು ಪ್ರಶ್ನಿಸಿದರು.

  • 16 Jun 2022 10:20 AM (IST)

    Congress Protests Live Updates: ಸ್ಪೀಕರ್​ ಓಂ ಬಿರ್ಲಾ ಭೇಟಿಯಾಗಿ ದೂರು ನೀಡಲಿರುವ ಸಂಸದರು

    ದೆಹಲಿ: ಧರಣಿನಿರತ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ ಆರೋಪ ಖಂಡಿಸಿ ಕಾಂಗ್ರೆಸ್​​​ ಸಂಸದರು ಲೋಕಸಭಾ ಸ್ಪೀಕರ್​​ ಓಂ ಬಿರ್ಲಾ ಭೇಟಿಯಾಗಿ ದೂರು ನೀಡಲಿದ್ದಾರೆ.

  • 16 Jun 2022 10:12 AM (IST)

    Congress Protests Live Updates: ರಾಜ್ಯದಲ್ಲಿ ಕೊವಿಡ್ ಹೆಚ್ಚಾದ್ರೆ ಕಾಂಗ್ರೆಸ್​ ಪಕ್ಷವೇ ಹೊಣೆ

    ಬೆಂಗಳೂರು: ಕಾಂಗ್ರೆಸ್​​ ರ್ಯಾಲಿ ಕುರಿತು ಸಚಿವ ಸುಧಾಕರ್​ ಪ್ರತಿಕ್ರಿಯೆ ನೀಡಿದ್ದು, ಪ್ರತಿಭಟನೆಯಿಂದ ರಾಜ್ಯದಲ್ಲಿ ಕೊವಿಡ್​ ಹೆಚ್ಚಾದ್ರೆ ಕಾಂಗ್ರೆಸ್​ ಹೊಣೆ. ಪ್ರತಿಭಟನೆ ಮಾಡುವುದಾದರೆ ಫ್ರೀಡಂಪಾರ್ಕ್​​ನಲ್ಲಿ ಮಾಡಲಿ. ಜನ ಸೇರಿಸಿ ರಸ್ತೆಯಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಕೊವಿಡ್ ಉಲ್ಲಂಘನೆ ಅಡಿ ಕೇಸ್ ದಾಖಲಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದರು.

  • 16 Jun 2022 09:46 AM (IST)

    Congress Protests Live Updates: ಕಾಂಗ್ರೆಸ್ ನಾಯಕರ​​ ಱಲಿ ತಡೆಯಲು ಪೊಲೀಸರ ಸಿದ್ಧತೆ

    ಬೆಂಗಳೂರು: ರಾಹುಲ್ ಗಾಂಧಿಗೆ ಇಡಿ ವಿಚಾರಣೆ ಖಂಡಿಸಿ ರಾಜಭವನ ಚಲೋಗೆ ಕೈ ನಾಯಕರು ಮುಂದಾಗಿದ್ದು, ಕೆಪಿಸಿಸಿ ಯಿಂದ ರ್ಯಾಲಿ ಆರಂಭವಾಗಲಿದೆ. ಇಂಡಿಯನ್ ಎಕ್ಸ್ ಪ್ರೆಸ್ ಸರ್ಕಲ್ ಬಳಿ ರ್ಯಾಲಿ ತಡೆಯಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಲ್​ವರೆಗೂ ಬಂದರೆ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗಲಿದ್ದು, ಈ ಹಿನ್ನಲೆ ಸರ್ಕಲ್ ಪ್ರವೇಶಿಸುವ ಮುನ್ನವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಸಿದ್ಧತೆ ಮಾಡಲಾಗುತ್ತಿದೆ.

  • ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಜಾರಿ ನಿರ್ದೇಶನಾಲಯ (ED) ಕ್ರಮ ಮತ್ತು ಪಕ್ಷದ ಮುಖಂಡರನ್ನು ದೆಹಲಿ ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ಕರ್ನಾಟಕದ ಕಾಂಗ್ರೆಸ್ ನಾಯಕರು ಇಂದು (ಗುರುವಾರ) ರಾಜಭವನಕ್ಕೆ ಮುತ್ತಿಗೆ  (Raj Bhavan Chalo) ಹಾಕಲಿದ್ದಾರೆ. ಬೆಳಗ್ಗೆ 9:30 ರ ವೇಳೆಗೆ ಕೆಪಿಸಿಸಿ ಕಚೇರಿಯಿಂದ ರಾಜ್‌ಭವನ್​​ವರೆಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸಲಿದ್ದು, ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಬುಧವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದರು ಮತ್ತು ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಬೆಳಿಗ್ಗೆ 10 ಗಂಟೆಗೆ ಪಕ್ಷದ ಕಚೇರಿಯಿಂದ ‘ರಾಜ್‌ಭವನ್‌ ಚಲೋ’ ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ. ಸೇಡಿನ ರಾಜಕಾರಣ ಮತ್ತು ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದ್ದಾರೆ.

    ಯಾವ ಯಾವ ಮಾರ್ಗದಲ್ಲಿ‌ ಇರಲಿದೆ ಟ್ರಾಫಿಕ್ ಗೊತ್ತಾ..?

    ಕ್ವೀನ್ಸ್‌‌ ರೋಡ್‌- ಇಂಡಿಯನ್ ಎಕ್ಸ್‌ ಪ್ರೆಸ್, ಜಿಪಿಓ‌ ಸಿಗ್ನಲ್ ಮೂಲಕ‌ ರಾಜ್ ಭವನ ತಲುಪಲಿರುವ ರ್ಯಾಲಿ, ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್, ವಸಂತ‌ನಗರ, ಶಿವಾಜಿನಗರ, ಕೋಲ್ಸ್‌ಪಾರ್ಕ್‌, ನಂದಿ‌ದುರ್ಗ ‌ರಸ್ತೆ, ವಿಧಾನ ಸೌಧ, ಕೆ ಆರ್ ಸರ್ಕಲ್‌‌ ಸೇರಿದಂತೆ‌ ಬೆಂಗಳೂರಿನ ಹೃದಯ ಭಾಗದಲ್ಲಿ‌ ಸಂಚಾರ ದಟ್ಟಣೆ ಇರಲಿದೆ.

    ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

    Published On - Jun 16,2022 9:36 AM

    Follow us