ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಐವರು ಪೊಲೀಸರು ಸೇರಿ 14 ಮಂದಿ ದಾರುಣ ಸಾವು
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಐವರು ಪೊಲೀಸರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಸ್ವಾತ್ ಜಿಲ್ಲೆಯಲ್ಲಿ ಶಾಂತಿ ರ್ಯಾಲಿಯನ್ನು ಗುರಿಯಾಗಿಸಿ ನಡೆಸಿದ ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲವಾದರೂ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಈ ದಾಳಿಯು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆಗಳನ್ನು ಎತ್ತಿ ತೋರಿಸುತ್ತದೆ.

ಇಸ್ಲಾಮಾಬಾದ್, ಆಗಸ್ಟ್ 03: ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ರಕ್ತಪಾತ ನಡೆದಿದೆ. ಸ್ವಾತ್ ಜಿಲ್ಲೆಯ ಕಬಲ್ ಪಟ್ಟಣದಲ್ಲಿ ನಡೆಯುತ್ತಿದ್ದ ಶಾಂತಿ ರ್ಯಾಲಿಯನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿ(Bomb Blast)ಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯ ‘ಸ್ವಾತ್ ಅಮಾನ್ ಜಿರ್ಗಾ’ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಸಾರ್ವಜನಿಕರು ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಚೌಕದಲ್ಲಿದ್ದ ಪೊಲೀಸ್ ಠಾಣೆಯ ಮುಖ್ಯ ದ್ವಾರದ ಬಳಿ ತಡೆದ ಪೊಲೀಸರ ಮೇಲೆಯೇ ಉಗ್ರ ತನ್ನ ಸ್ಫೋಟಕ ಭರಿತ ಜಾಕೆಟ್ ಸ್ಫೋಟಿಸಿಕೊಂಡಿದ್ದಾನೆ.
ಟಿಟಿಪಿ ಉಗ್ರರ ಕೈವಾಡದ ಶಂಕೆ ಈ ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲವಾದರೂ, ನಿಷೇಧಿತ ‘ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್’ ಉಗ್ರ ಸಂಘಟನೆಯೇ ಈ ಕೃತ್ಯ ಎಸಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಟಿಟಿಪಿ ಉಗ್ರರ ದಾಳಿ ತೀವ್ರಗೊಂಡಿದ್ದು, ಈಗಾಗಲೇ 819 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಮತ್ತಷ್ಟು ಓದಿ: ಅಯೋಧ್ಯೆಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ‘ಸೂತ್ರ’ ಪತ್ತೆ: ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಖಾನ್ ಪೊಲೀಸರ ವಶಕ್ಕೆ
ಟಿಟಿಪಿ ಉಗ್ರರು ಅಫ್ಘಾನಿಸ್ತಾನದಲ್ಲಿ ಅಡಗುತಾಣಗಳನ್ನು ಹೊಂದಿದ್ದು, ಅಲ್ಲಿಂದಲೇ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಆದರೆ ಕಾಬೂಲ್ನಲ್ಲಿರುವ ತಾಲಿಬಾನ್ ಸರ್ಕಾರ ಈ ಆರೋಪವನ್ನು ಸಸಾರವಾಗಿ ನಿರಾಕರಿಸಿದೆ. ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಗಡಿ ಪ್ರದೇಶಗಳ ಮೇಲೆ ನಡೆಸಿದ ಪ್ರತೀಕಾರದ ವೈಮಾನಿಕ ದಾಳಿಗಳಿಂದಾಗಿ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಪಾಕಿಸ್ತಾನವು ಗಡಿ ಮಾರ್ಗಗಳನ್ನು ಮುಚ್ಚಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದೆ. ನಾವು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧರಿದ್ದೇವೆ ಎಂದು ಅಫ್ಘಾನ್ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದರೂ, ಪಾಕಿಸ್ತಾನದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸ್ವಾತ್ ಕಣಿವೆಯು ಒಂದು ಕಾಲದಲ್ಲಿ ಟಿಟಿಪಿ ಉಗ್ರರ ಭದ್ರಕೋಟೆಯಾಗಿತ್ತು. 2009 ರಲ್ಲಿ ಪಾಕಿಸ್ತಾನ ಸೇನೆಯು ಬೃಹತ್ ಮಿಲಿಟರಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಓಡಿಸಿತ್ತಾದರೂ, 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮರಳಿದ ನಂತರ ಟಿಟಿಪಿ ಮತ್ತೆ ಬಲವರ್ಧನೆಗೊಂಡು ಸರಣಿ ದಾಳಿಗಳನ್ನು ನಡೆಸುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 am, Mon, 3 August 26




