Delhi Car Blast: ದೆಹಲಿಯ ಕೆಂಪು ಕೋಟೆ ಬಳಿ ಇಂದು ಸಂಜೆ ನಡೆದಿದ್ದೇನು? ಸ್ಫೋಟಕ್ಕೆ ಕಾರಣವೇನು?
ಇಂದು ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸಂಭವಿಸಿದ ಸ್ಫೋಟವು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಈ ಸ್ಫೋಟದ ಬಳಿಕ ದೆಹಲಿ, ಹರಿಯಾಣ, ಬಿಹಾರ, ಚಂಡೀಗಢ, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿಯ ಸ್ಫೋಟದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

Delhi Car Blast
ನವದೆಹಲಿ, ನವೆಂಬರ್ 10: ದೆಹಲಿಯ ಕೆಂಪುಕೋಟೆಯ (Red Fort) ಬಳಿ ಇರುವ ಮೆಟ್ರೋ ಸ್ಟೇಷನ್ ಗೇಟ್ ಬಳಿ ಟ್ರಾಫಿಕ್ ಸಿಗ್ನಲ್ನಲ್ಲಿ ಇಂದು ಸಂಜೆ ಕಾರು ಸ್ಫೋಟಗೊಂಡಿದೆ. ಈ ಕಾರು ಸ್ಫೋಟವಾದಾಗ (Delhi Car Blast) ಕಾರಿನಲ್ಲೂ ಜನರಿದ್ದರು. ಕಾರೊಳಗಿದ್ದ ಜನರು ಸೇರಿದಂತೆ ಒಟ್ಟು 11 ಜನರು ಮೃತಪಟ್ಟಿದ್ದಾರೆ. 4 ಕಾರುಗಳು ಸುಟ್ಟು ಕರಕಲಾಗಿವೆ. 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದ ಹಿಂದೆ ಉಗ್ರರ ಕೈವಾಡದ ಶಂಕೆಯೂ ಎದುರಾಗಿದೆ. ಹಾಗಾದರೆ, ಇಂದು ಸಂಜೆ ಕಾರು ಸ್ಫೋಟಗೊಂಡಿದ್ದು ಹೇಗೆ? ಅಲ್ಲಿ ನಿಜವಾಗಿಯೂ ನಡೆದಿದ್ದು ಏನು? ಎಂಬುದರ ಪೂರ್ತಿ ವಿವರ ಇಲ್ಲಿದೆ.
- ಇಂದು ಸಂಜೆ 6.55ಕ್ಕೆ i20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಇದರ ಪರಿಣಾಮದಿಂದ ಆ ಕಾರಿನ ಹತ್ತಿರದ ಹಲವಾರು ವಾಹನಗಳಿಗೆ ಹಾನಿಯಾಗಿದೆ.
- ಕಾರು ಸ್ಫೋಟವಾಗಿ 11 ಜನರು ಮೃತಪಟ್ಟಿದ್ದಾರೆ. 16ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ರಸ್ತೆಯಲ್ಲೆಲ್ಲ ಮೃತದೇಹದ ತುಂಡುಗಳು ಬಿದ್ದಿರುವುದು ಈ ಸ್ಫೋಟದ ಭೀಕರತೆಯನ್ನು ತೆರೆದಿಡುತ್ತಿದೆ.
- ಈಗಾಗಲೇ ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎನ್ಐಎ) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್ಜಿ) ತಂಡಗಳು ಸ್ಫೋ ನಡೆದ ಸ್ಥಳಕ್ಕೆ ಆಗಮಿಸಿವೆ.
- ಈ ಘಟನೆಯ ನಂತರ, ದೆಹಲಿ-ಎನ್ಸಿಆರ್ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಕೆಂಪು ಕೋಟೆ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
- ಅಮಿತ್ ಶಾ ದೆಹಲಿ ಪೊಲೀಸರು, ಗುಪ್ತಚರ ಇಲಾಖೆಯ ಜೊತೆ ಮಾತನಾಡಿದರು. ಕೆಂಪು ಕೋಟೆ ಬಳಿ ಸ್ಫೋಟದ ಬಗ್ಗೆ ಪ್ರಧಾನಿ ಮೋದಿಗೆ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
- ಸರ್ಕಾರವು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಮತ್ತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
- ಇಂದು ಸಂಜೆ 6.55ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಐ20 ಕಾರು ರೆಡ್ ಸಿಗ್ನಲ್ ಬಳಿ ನಿಂತಿತು. ಆ ಕಾರಿನಲ್ಲಿಯೇ ಸ್ಫೋಟ ಸಂಭವಿಸಿದೆ. ಕಾರಿನೊಳಗೆ ಸ್ಫೋಟ ಸಂಭವಿಸಿದಾಗಲೂ ಅದರಲ್ಲಿ ಕೆಲವು ಇತರ ಪ್ರಯಾಣಿಕರಿದ್ದರು. ಕಾರಿನ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದವರು, ಪಾದಚಾರಿಗಳು ಸಾವನ್ನಪ್ಪಿದ್ದಾರೆ.
- ಸ್ಫೋಟದಿಂದಾಗಿ ಹತ್ತಿರದ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿವೆ. ತನಿಖೆಗೆ ಸಹಾಯ ಮಾಡಲು ರಾಷ್ಟ್ರೀಯ ಭದ್ರತಾ ಪಡೆ (NSG), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ವಿಧಿವಿಜ್ಞಾನ ವಿಭಾಗದ ತಂಡಗಳನ್ನು ನಿಯೋಜಿಸಲಾಗಿದೆ.
- ಇಂದು ಸಂಜೆ ಸ್ಫೋಟ ಸಂಭವಿಸಿದ ಕಾರನ್ನು HR26 ಅಡಿಯಲ್ಲಿ ನೋಂದಾಯಿಸಲಾಗಿದೆ. ಇದನ್ನು ನದೀಮ್ ಖಾನ್ ಎಂದು ಗುರುತಿಸಲಾದ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಅಮೋನಿಯಂ ನೈಟ್ರೇಟ್ ಬಳಸಿ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಫೋಟಕ್ಕೆ ನಟ್ಟು, ಬೋಲ್ಟ್ ಬಳಸಿಲ್ಲ. i20 ಕಾರಿನ ಹಿಂಭಾಗದಲ್ಲಿ ಅಮೋನಿಯಂ ನೈಟ್ರೇಟ್ ಇಟ್ಟು ಕೃತ್ಯ ಎಸಗಿರುವ ಸಾಧ್ಯತೆ ಹೆಚ್ಚಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




