Demonetisation Verdict: ನೋಟು ಅಮಾನ್ಯೀಕರಣದ ಬಗ್ಗೆ ಇಂದು ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು

| Updated By: ಸುಷ್ಮಾ ಚಕ್ರೆ

Updated on: Jan 02, 2023 | 8:43 AM

ಕೇಂದ್ರ ಸರ್ಕಾರವು 2016ರಲ್ಲಿ 500 ರೂ. ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿತ್ತು. ಮೂಲಗಳ ಪ್ರಕಾರ, ನೋಟು ರದ್ದತಿ ತೀರ್ಪು ಎರಡು ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ.

Demonetisation Verdict: ನೋಟು ಅಮಾನ್ಯೀಕರಣದ ಬಗ್ಗೆ ಇಂದು ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು
ಸುಪ್ರೀಂಕೋರ್ಟ್
Follow us on

ನವದೆಹಲಿ: 1,000 ರೂ. ಮತ್ತು 500 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸುವ (Note Ban) 2016ರ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್‌ (Supreme Court) ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ. ಸುಪ್ರೀಂ ಕೋರ್ಟ್​ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಇಂದು ಈ ತೀರ್ಪು ಪ್ರಕಟಿಸಲಿದೆ. 2016ರ ನವೆಂಬರ್ ತಿಂಗಳಲ್ಲಿ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ (Demonetisation) ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ 58 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಇಂದು (ಸೋಮವಾರ) ಆ ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಲಿದೆ.

ನೋಟು ಅಮಾನ್ಯೀಕರಣಕ್ಕೆ ಅಗತ್ಯವಾದ ಕಾರ್ಯವಿಧಾನವನ್ನು ಅನುಸರಿಸಲಾಗಿಲ್ಲ ಮತ್ತು ಅನಿಯಂತ್ರಿತ ನಿರ್ಧಾರದಿಂದಾಗಿ ಭಾರತೀಯ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ನೋಟು ಅಮಾನ್ಯೀಕರಣದ ನಿರ್ಧಾರ ಮತ್ತು ಸಭೆಗಳ ಮೊಹರು ದಾಖಲೆಗಳನ್ನು ನೀಡುವಂತೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಾಯಿದೆಯಲ್ಲಿ ತಿಳಿಸಲಾದ ಪ್ರಕ್ರಿಯೆಯನ್ನು ಅನುಸರಿಸಲಾಗಿದೆಯೇ? ಎಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿತ್ತು.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅಧಿಕಾರಾವಧಿ ಮುಕ್ತಾಯ; ಇಂದಿನ ವಿಚಾರಣೆಯ ನೇರ ಪ್ರಸಾರ

ಅರ್ಜಿದಾರರು ಕೇಂದ್ರ ಸರ್ಕಾರದಿಂದ ಇಂತಹ ಕೃತ್ಯಗಳು ಪುನರಾವರ್ತನೆಯಾಗದಂತೆ ನಿಯಮಗಳನ್ನು ಸ್ಥಾಪಿಸಲು ಕೋರಿದ್ದಾರೆ. ಕೇಂದ್ರ ಸರ್ಕಾರವು 2016ರಲ್ಲಿ 500 ರೂ. ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿತ್ತು. ಮೂಲಗಳ ಪ್ರಕಾರ, ನೋಟು ರದ್ದತಿ ತೀರ್ಪು ಎರಡು ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಇಬ್ಬರೂ ಪ್ರತ್ಯೇಕ ತೀರ್ಪು ನೀಡುವ ಸಾಧ್ಯತೆಯಿದೆ.

ಆದರೆ, ಈ ಎರಡು ತೀರ್ಪುಗಳು ಭಿನ್ನಾಭಿಪ್ರಾಯವೋ ಅಥವಾ ಸಹಮತದ ಅಭಿಪ್ರಾಯವೋ ಮತ್ತು ಎರಡು ಅಭಿಪ್ರಾಯಗಳಲ್ಲಿ ಯಾವುದಕ್ಕೆ ಇತರ ಮೂವರು ನ್ಯಾಯಮೂರ್ತಿಗಳಾದ ಎಸ್‌ಎ ನಜೀರ್, ಎಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಬೆಂಬಲ ನೀಡುತ್ತಾರೆ ಎಂಬುದು ತಿಳಿದಿಲ್ಲ.

ಇದನ್ನೂ ಓದಿ: Rs 2000 Currency Notes: ಚಲಾವಣೆಗೆ ಸಿಗುತ್ತಿಲ್ಲ 2,000 ರೂ. ನೋಟು! ಕಾರಣ ಇಲ್ಲಿದೆ ನೋಡಿ

ಜನವರಿ 4ರಂದು ನಿವೃತ್ತರಾಗಲಿರುವ ನ್ಯಾಯಮೂರ್ತಿ ಎಸ್ ಎ ನಜೀರ್ ಅವರ ನೇತೃತ್ವದ ಸಂವಿಧಾನ ಪೀಠವು ಈ ತೀರ್ಪು ನೀಡಲಿದೆ. ಡಿಸೆಂಬರ್ 7ರಂದು ನ್ಯಾಯಾಲಯವು ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ಸಂಬಂಧಿಸಿದ ದಾಖಲೆಗಳನ್ನು ದಾಖಲಿಸುವಂತೆ ಸೂಚಿಸಿತ್ತು. ಕೇಂದ್ರ ಸರ್ಕಾರದ 2016ರ ನಿರ್ಧಾರಕ್ಕೆ ಸಂಬಂಧಿಸಿದಂತೆ ಮತ್ತು ಅದರ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಆ ತೀರ್ಪು ಇಂದು ಹೊರಬೀಳಲಿದೆ.

ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಎ.ಎಸ್ ಬೋಪಣ್ಣ, ವಿ. ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠವು ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಆರ್‌ಬಿಐ ವಕೀಲರು ಮತ್ತು ಹಿರಿಯ ವಕೀಲರಾದ ಪಿ. ಚಿದಂಬರಂ ಮತ್ತು ಶ್ಯಾಮ್ ದಿವಾನ್ ಸೇರಿದಂತೆ ಅರ್ಜಿದಾರರ ವಕೀಲರ ಸಲ್ಲಿಕೆಗಳನ್ನು ಆಲಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ