ತಮಿಳುನಾಡಿನಲ್ಲಿ ಕಾರ್ ಸಮರ; ವಿಜಯ್ ಸರ್ಕಾರದ ಉಚಿತ ವಾಹನದ ಆಫರ್ ಬೇಡವೆಂದ ಡಿಎಂಕೆ ಶಾಸಕರು

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ರಾಜ್ಯದ ಎಲ್ಲಾ ಶಾಸಕರಿಗೆ ಸರ್ಕಾರದಿಂದ ಉಚಿತವಾಗಿ ಕಾರುಗಳನ್ನು ನೀಡುವುದಾಗಿ ಮಾಡಿದ ಘೋಷಣೆಯನ್ನು ವಿರೋಧ ಪಕ್ಷವಾದ ಡಿಎಂಕೆ ಅಧಿಕೃತವಾಗಿ ತಿರಸ್ಕರಿಸಿದೆ. ತಮಿಳುನಾಡು ತೀವ್ರ ಸಾಲದ ಹೊರೆಯಲ್ಲಿದೆ ಎಂಬುದನ್ನು ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಡಿಎಂಕೆ ಪಕ್ಷದ ಎಲ್ಲಾ 59 ಶಾಸಕರು ವಿಜಯ್ ಸರ್ಕಾರದ ಈ ಆಫರ್ ಅನ್ನು ನಿರಾಕರಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಕಾರ್ ಸಮರ; ವಿಜಯ್ ಸರ್ಕಾರದ ಉಚಿತ ವಾಹನದ ಆಫರ್ ಬೇಡವೆಂದ ಡಿಎಂಕೆ ಶಾಸಕರು
Udhayanidhi Stalin In Session
Image Credit source: PTI

Updated on: Aug 21, 2026 | 3:19 PM

ಚೆನ್ನೈ, ಆಗಸ್ಟ್ 21: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Joseph Vijay) ಅವರು ರಾಜ್ಯದ ಎಲ್ಲಾ 234 ಶಾಸಕರಿಗೆ ಉಚಿತ ಕಾರುಗಳನ್ನು ನೀಡುವುದಾಗಿ ಮಾಡಿದ ಘೋಷಣೆಯು ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ಮತ್ತು ಆಡಳಿತ ಪಕ್ಷವಾದ ಟಿವಿಕೆ ನಡುವೆ ರಾಜಕೀಯ ಸಮರಕ್ಕೆ ಕಾರಣವಾಗಿದೆ. ತಮಿಳುನಾಡು ರಾಜ್ಯದ ಸಾಲದ ಹೊರೆಯನ್ನು ಉಲ್ಲೇಖಿಸಿ ಡಿಎಂಕೆ ವಿಜಯ್ ಸರ್ಕಾರದ ಉಚಿತ ಕಾರುಗಳ ಆಫರ್ ಅನ್ನು ಅಧಿಕೃತವಾಗಿ ತಿರಸ್ಕರಿಸಿದೆ. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ತಮ್ಮ ಪಕ್ಷದ ಎಲ್ಲಾ 59 ಡಿಎಂಕೆ ಶಾಸಕರು ಈ ಕೊಡುಗೆಯನ್ನು ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು. ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ತೀವ್ರ ಸಾಲದಲ್ಲಿದೆ ಎಂದು ಹೇಳಿಕೊಳ್ಳುತ್ತಿರುವ ಟಿವಿಕೆ ನೇತೃತ್ವದ ಸರ್ಕಾರ ಈ ಆಫರ್​ನ ಹೊರೆಯನ್ನು ಹೇಗೆ ನಿರ್ವಹಿಸುತ್ತದೆ? ಎಂದು ಅವರು ಪ್ರಶ್ನಿಸಿದರು.

“ಟಿವಿಕೆ ಸರ್ಕಾರ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ತಮಿಳುನಾಡು ರಾಜ್ಯದ ಖಜಾನೆ ಖಾಲಿಯಾಗಿದೆ ಮತ್ತು ಸರ್ಕಾರ ಸಾಲದಲ್ಲಿದೆ ಎಂದು ಪದೇಪದೆ ಹೇಳಿಕೆ ನೀಡುತ್ತಿದೆ. ಹೀಗಾಗಿ, ಸರ್ಕಾರದ ಮೇಲಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು 59 ಡಿಎಂಕೆ ಶಾಸಕರು ಈ ಉಚಿತ ಕಾರುಗಳನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇವೆ. ಶಾಸಕರ ಚುನಾವಣಾ ಅಫಿಡವಿಟ್ ಪರಿಶೀಲಿಸಿ, ಅವರ ಬಳಿ ಈಗಾಗಲೇ ಸ್ವಂತ ಕಾರುಗಳಿವೆಯೇ ಮತ್ತು ಅವರ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಸರ್ಕಾರ ವಾಹನಗಳನ್ನು ವಿತರಿಸಬೇಕು” ಎಂದು ಉದಯನಿಧಿ ಸ್ಟಾಲಿನ್ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ತಮಿಳುನಾಡು ಶಾಸಕರಿಗೆ ಸರ್ಕಾರಿ ಕಾರು, 1 ಲಕ್ಷ ರೂ. ಭತ್ಯೆ: ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ: ಸಿಎಂ ವಿಜಯ್ ಘೋಷಣೆ

ಅಗತ್ಯವಿಲ್ಲದ ಐಷಾರಾಮಿ ವೆಚ್ಚ ಎಂದ ಡಿಎಂಕೆ:

ಇದಕ್ಕೂ ಮುನ್ನ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ವಿಜಯ್ ನೇತೃತ್ವದ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದರು. “ಟಿವಿಕೆ ಸರ್ಕಾರವು ಸಾರ್ವಜನಿಕರ ಹಣವನ್ನು ಅಗತ್ಯವಿಲ್ಲದ ಐಷಾರಾಮಿ ಸೌಲಭ್ಯಗಳಿಗೆ ಪೋಲು ಮಾಡಲು ಹೊರಟಿದೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದಾಗ ಖಜಾನೆ ಖಾಲಿಯಾಗಿದೆ ಎಂದಿದ್ದ ವಿಜಯ್ ಈಗ ಈ ಭರವಸೆಯನ್ನು ಹೇಗೆ ಈಡೇರಿಸುತ್ತಾರೆ?” ಎಂದು ಅವರು ಪ್ರಶ್ನಿಸಿದ್ದರು.


ವಿಜಯ್ ಸರ್ಕಾರದ ಸಮರ್ಥನೆ:

ಡಿಎಂಕೆ ಮಾಡಿದ ಆರೋಪಗಳಿಗೆ ತಮಿಳುನಾಡು ಸಚಿವ ಆಧವ್ ಅರ್ಜುನ್ ತಿರುಗೇಟು ನೀಡಿದ್ದು, ಮುಖ್ಯಮಂತ್ರಿಗಳು ಎಲ್ಲಾ ಶಾಸಕರನ್ನು ಸಮಾನವಾಗಿ ಕಾಣುವ ಉದ್ದೇಶದಿಂದ ಈ ನಿರ್ಧಾರ ತಳೆದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ವಿಸಿಕೆ ಮತ್ತು ಕಮ್ಯುನಿಸ್ಟ್ ಪಕ್ಷಗಳಂತಹ ಸಣ್ಣ ಪಕ್ಷಗಳ ಅನೇಕ ಶಾಸಕರು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು, ಕ್ಷೇತ್ರ ಪ್ರವಾಸ ಮಾಡಲು ಕಾರುಗಳು ಐಷಾರಾಮಿಯಲ್ಲ ಬದಲಿಗೆ ಕನಿಷ್ಠ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ‘ಸೂಕ್ತ ಸಮಯದಲ್ಲಿ ಹಿಂದಿನ ಸರ್ಕಾರದ ಭ್ರಷ್ಟಾಚಾರದ ಫೈಲ್​ಗಳನ್ನು ಬಹಿರಂಗಪಡಿಸುತ್ತೇನೆ’; ಡಿಎಂಕೆಗೆ ಸಿಎಂ ವಿಜಯ್ ಎಚ್ಚರಿಕೆ

ತಮಿಳುನಾಡು ಸರ್ಕಾರದ ಘೋಷಣೆಯೇನು?:

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಎಲ್ಲ ಶಾಸಕರಿಗೆ ಉಚಿತ ಕಾರುಗಳ ಜೊತೆಗೆ ಕಾರಿನ ಚಾಲಕ, ಇಂಧನ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ಹಾಗೂ ಕಚೇರಿ ಸಹಾಯಕರಿಗಾಗಿ ತಿಂಗಳಿಗೆ 1 ಲಕ್ಷ ರೂ. ಭತ್ಯೆ ನೀಡಲಾಗುವುದು ಎಂದು ಈ ಹಿಂದೆ ಘೋಷಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us