ಅಮೆರಿಕಕ್ಕೆ ಆಹ್ವಾನಿಸಿದ ಟ್ರಂಪ್​ಗೆ ಬರೋದಿಲ್ಲ ಎಂದೆ; ಪ್ರಧಾನಿ ಮೋದಿ ಹೀಗಂದಿದ್ದೇಕೆ?

ಕೆನಡಾದಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಹೋಗಿದ್ದಾಗ ನನಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಭೇಟಿ ನೀಡಿ, ಔತಣ ಸ್ವೀಕರಿಸಲು ಆಹ್ವಾನಿಸಿದ್ದರು. ಆದರೆ, ನಾನು ಬರುವುದಿಲ್ಲ ಎಂದು ವಿನಮ್ರವಾಗಿಯೇ ಅವರ ಆಹ್ವಾನವನ್ನು ತಿರಸ್ಕರಿಸಿದ್ದೆ ಎಂದು ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಅವರು ಈ ರೀತಿ ಹೇಳಿದ್ದು ಏಕೆಂಬುದರ ಮಾಹಿತಿ ಇಲ್ಲಿದೆ.

ಅಮೆರಿಕಕ್ಕೆ ಆಹ್ವಾನಿಸಿದ ಟ್ರಂಪ್​ಗೆ ಬರೋದಿಲ್ಲ ಎಂದೆ; ಪ್ರಧಾನಿ ಮೋದಿ ಹೀಗಂದಿದ್ದೇಕೆ?
Modi Trump

Updated on: Jun 20, 2025 | 8:17 PM

ಭುವನೇಶ್ವರ, ಜೂನ್ 20: ಕೆನಡಾದಲ್ಲಿ ಜಿ7 ಶೃಂಗಸಭೆಯಲ್ಲಿ (G7 Summit) ಭಾಗವಹಿಸಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಂದ ಭೋಜನ ಆಹ್ವಾನವನ್ನು ಸ್ವೀಕರಿಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಟ್ರಂಪ್ ಔತಣಕೂಟ ಏರ್ಪಡಿಸಿದ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ. ನಾನು ಟ್ರಂಪ್ ಅವರ ಆಹ್ವಾನವನ್ನು ವಿನಮ್ರವಾಗಿಯೇ ನಿರಾಕರಿಸಿದ್ದೆ. ಅದಕ್ಕೆ ಕಾರಣವೂ ಇದೆ. ಒಡಿಶಾದಲ್ಲಿ ಜಗನ್ನಾಥ ಸ್ವಾಮಿಯ ದರ್ಶನ ಪಡೆಯುವ ಉದ್ದೇಶದಿಂದ ನಾನು ಅಮೆರಿಕದ ಆಹ್ವಾನವನ್ನು ನಿರಾಕರಿಸಿದ್ದೆ ಎಂದು ಭುವನೇಶ್ವರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಒಡಿಶಾದಲ್ಲಿ ಭಾಷಣ ಮಾಡಿದ್ದು, “ನಾನು ಜಗನ್ನಾಥ ಮಹಾಪ್ರಭುಗಳ ಭೂಮಿಗೆ ಬರಲು ಬಯಸಿದ್ದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಭೇಟಿ ಆಹ್ವಾನವನ್ನು ತಿರಸ್ಕರಿಸಿದ್ದೇನೆ” ಎಂದು ಹೇಳಿದ್ದಾರೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರದ ಒಂದು ವರ್ಷದ ಸ್ಮರಣಾರ್ಥ ಭುವನೇಶ್ವರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾದಲ್ಲಿದ್ದಾಗ ಟ್ರಂಪ್ ಅವರಿಂದ ತಮಗೆ ಕರೆ ಬಂದಿದ್ದು, ಭೋಜನ ಮತ್ತು ಮಾತುಕತೆಗಾಗಿ ವಾಷಿಂಗ್ಟನ್‌ಗೆ ಬರುವಂತೆ ಕೇಳಿಕೊಂಡಿದ್ದರು. ಆದರೆ, ನಾನು ಅವರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದೆ ಎಂದಿದ್ದಾರೆ. ಜೂನ್ 20ರಂದು ಒಡಿಶಾಗೆ ನಿಗದಿಯಾಗಿದ್ದ ತಮ್ಮ ಭೇಟಿಗಾಗಿ ಮೋದಿ ಭಾರತಕ್ಕೆ ಮರಳಿದ್ದರು.


ಇದನ್ನೂ ಓದಿ: Narendra Modi: ಬಿಹಾರ, ಒಡಿಶಾ, ಆಂಧ್ರಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ, ಎರಡು ದಿನಗಳ ಪ್ರವಾಸ


“ಎರಡು ದಿನಗಳ ಹಿಂದೆ ನಾನು G7 ಶೃಂಗಸಭೆಗಾಗಿ ಕೆನಡಾದಲ್ಲಿದ್ದೆ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನನಗೆ ಕರೆ ಮಾಡಿದರು. ನೀವು ಕೆನಡಾಕ್ಕೆ ಬಂದಿರುವುದರಿಂದ, ವಾಷಿಂಗ್ಟನ್ ಮೂಲಕ ಹೋಗಿ. ನಾವು ಒಟ್ಟಿಗೆ ಭೋಜನ ಮಾಡಿ ಮಾತನಾಡೋಣ ಎಂದು ಅವರು ಹೇಳಿದರು. ಅವರು ಬಹಳ ಒತ್ತಾಯದಿಂದ ಆಹ್ವಾನವನ್ನು ನೀಡಿದರು. ಆಗ ನಾನು ಅಮೆರಿಕ ಅಧ್ಯಕ್ಷರಿಗೆ ಹೇಳಿದೆ, ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು. ಆದರೆ ನನಗೆ ತುರ್ತು ಕೆಲಸವಿದೆ ಎಂದಿದ್ದೆ. ಜಗನ್ನಾಥ ಮಹಾಪ್ರಭುಗಳ ಭೂಮಿಗೆ ಹೋಗುವುದು ನನಗೆ ಬಹಳ ಮುಖ್ಯ ಎಂಬ ಕಾರಣಕ್ಕೆ ನಾನು ಅವರ ಆಹ್ವಾನವನ್ನು ನಯವಾಗಿ ನಿರಾಕರಿಸಿದೆ. ಮಹಾಪ್ರಭುಗಳ ಮೇಲಿನ ನಿಮ್ಮ ಪ್ರೀತಿ ಮತ್ತು ಭಕ್ತಿ ನನ್ನನ್ನು ಈ ಭೂಮಿಗೆ ಕರೆತಂದಿತು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ನಾಳೆ ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಶಾಖಪಟ್ಟಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 18,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 105 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು ಮತ್ತು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಇದರಲ್ಲಿ ಬೌಧ್ ಜಿಲ್ಲೆಗೆ ಮೊದಲ ಪ್ರಯಾಣಿಕ ರೈಲು ಕೂಡ ಸೇರಿತ್ತು. ಅವರು “ಒಡಿಶಾ ವಿಷನ್ ಡಾಕ್ಯುಮೆಂಟ್” ಅನ್ನು ಅನಾವರಣಗೊಳಿಸಿದರು.


ಕೆನಡಾದಲ್ಲಿದ್ದಾಗ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೃಂಗಸಭೆಯಿಂದ ಬೇಗನೆ ನಿರ್ಗಮಿಸಿದ ನಂತರ ಅವರೊಂದಿಗೆ 35 ನಿಮಿಷಗಳ ಕಾಲ ಫೋನ್ ಸಂಭಾಷಣೆ ನಡೆಸಿದರು, ಆಪರೇಷನ್ ಸಿಂಧೂರ್ ನಂತರದ ಮೊದಲ ಸಂಭಾಷಣೆ ಇದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ