ದಾವೂದ್ ಇಬ್ರಾಹಿಂ ವಿರುದ್ಧ ಕೇಸ್​ ದಾಖಲಿಸಿದ ಇ.ಡಿ.; 10 ಪ್ರದೇಶಗಳ ಮೇಲೆ ದಾಳಿ, ಕೆಲವು ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣು

ದಾವೂದ್​ ಇಬ್ರಾಹಿಂ ಮುಂಬೈನ ಒಬ್ಬ ಪ್ರಾಮಾಣಿಕ ಪೊಲೀಸ್ ಕಾನ್​ಸ್ಟೆಬಲ್​​ನ ಪುತ್ರ. ಮುಂಬೈನ ಡೊಂಗ್ರಿ ಏರಿಯಾದಲ್ಲಿ ವಾಸವಾಗಿದ್ದ ಇದ್ದ ಈತ ಗ್ಯಾಂಗ್​ವಾರ್​ಗಳಲ್ಲಿ ತೊಡಗಿಕೊಂಡಿದ್ದ. 1980ರ ದಶಕದಲ್ಲಿ ಮೊಟ್ಟಮೊದಲು ದಾವೂದ್ ಅರೆಸ್ಟ್​ ಆಗಿದ್ದು, ಒಂದು ದರೋಡೆ ಪ್ರಕರಣದಲ್ಲಿ.

ದಾವೂದ್ ಇಬ್ರಾಹಿಂ ವಿರುದ್ಧ ಕೇಸ್​ ದಾಖಲಿಸಿದ ಇ.ಡಿ.; 10 ಪ್ರದೇಶಗಳ ಮೇಲೆ ದಾಳಿ, ಕೆಲವು ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣು
ದಾವೂದ್​ ಇಬ್ರಾಹಿಂಗೆ ಲಿಂಕ್​ ಇದೆ ಎನ್ನಲಾದ ಪ್ರದೇಶಗಳ ಮೇಲೆ ಇ.ಡಿ.ದಾಳಿ
Follow us
| Updated By: Lakshmi Hegde

Updated on:Feb 15, 2022 | 1:36 PM

ಭೂಗತ ಪಾತಕಿ ದಾವೂದ್​ ಇಬ್ರಾಹಿಂ (Dawood Ibrahim) ಮತ್ತು ಆತನ ಸಹಾಯಕರಿಗೆ ಸೇರಿದ ಒಟ್ಟು 10 ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಯಲಯದ (ED) ಅಧಿಕಾರಿಗಳು ದಾಳಿ ಮಾಡಿ, ಶೋಧ ಕಾರ್ಯ ನಡೆಸಿದ್ದಾರೆ. ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ, ಅಕ್ರಮ ಹಣ ವರ್ಗಾವಣೆ ಕೇಸ್ (Money Laundering Case)​ ದಾಖಲು ಮಾಡಿರುವ ಇ.ಡಿ.ಅಧಿಕಾರಿಗಳು ಮುಂಬೈ ಹಾಗೂ ಸುತ್ತಲಿನ ಒಟ್ಟು 10 ಪ್ರದೇಶಗಳಲ್ಲಿ ರೇಡ್​ ಮಾಡಿದ್ದಾರೆ.

ಭೂಗತಪಾತಕಿ ದಾವೂದ್​ನ ಹವಾಲಾ ದಂಧೆಯ ಜಾಲ ಮತ್ತು ಆತ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳೊಟ್ಟಿಗೆ ಆಸ್ತಿ ವ್ಯವಹಾರ ಮಾಡಿದ್ದಾನೆ ಎಂಬ ಬಲವಾದ ಶಂಕೆಯ ಮೇರೆಗೆ ತನಿಖೆಗಾಗಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ತನಿಖೆ ಕೈಗೆತ್ತಿಕೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್​ ವರದಿ ಮಾಡಿದೆ. ಇದೀಗ ದಾವೂದ್​ಗೆ ಸೇರಿದ ನಾಗಪಾದ ಸೇರಿ 10 ಸ್ಥಳಗಳ ಮೇಲೆ ದಾಳಿ ನಡೆದಿದೆ. ದಾವೂದ್​​ನ ಮೃತ ಸೋದರಿ ಹಸೀನಾ ಪರ್ಕರ್​ ಮನೆಗೂ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ ಈ ನಾಗಪಾದ ಎಂಬುದು ದಾವೂದ್ ಇಬ್ರಾಹಿಂನ ಭದ್ರಕೋಟೆ ಎಂದೇ ಹೇಳಲಾಗುತ್ತದೆ.  ಅಷ್ಟೇ ಅಲ್ಲ, ಈ ಕೇಸ್​ಗೆ ಸಂಬಂಧಪಟ್ಟಂತೆ ಹಲವು ರಾಜಕಾರಣಿಗಳನ್ನೂ ಇ.ಡಿ. ಕಣ್ಗಾವಲಲ್ಲಿ ಇಟ್ಟಿದೆ ಎಂಬ ಮಾಹಿತಿಯೂ ಅಧಿಕೃತ ಮೂಲಗಳಿಂದ ಲಭ್ಯವಾಗಿದೆ.

1993ರ ಮುಂಬೈ ದಾಳಿಯ ರೂವಾರಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು 1993ರ ಮುಂಬೈ ದಾಳಿಗೂ ಮುನ್ನವೇ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಆತ ವಿದೇಶದಲ್ಲಿದ್ದುಕೊಂಡೇ ಹವಾಲಾ ಜಾಲದ ಮೂಲಕ ನ್ಯಾಕ್ರೋ ಭಯೋತ್ಪಾದನೆ(ಮಾದಕ ದ್ರವ್ಯಗಳ ಸಾಗಣೆ ಇತರ ಕಾನೂನು ಬಾಹಿರ ಕೆಲಸ) ಯಲ್ಲಿ ತೊಡಗಿದ್ದಾನೆ.  ಅಂದಹಾಗೇ, ದಾವೂದ್​ ಇಬ್ರಾಹಿಂ ಮುಂಬೈನ ಒಬ್ಬ ಪ್ರಾಮಾಣಿಕ ಪೊಲೀಸ್ ಕಾನ್​ಸ್ಟೆಬಲ್​​ನ ಪುತ್ರ. ಮುಂಬೈನ ಡೊಂಗ್ರಿ ಏರಿಯಾದಲ್ಲಿ ವಾಸವಾಗಿದ್ದ ಇದ್ದ ಈತ ಗ್ಯಾಂಗ್​ವಾರ್​ಗಳಲ್ಲಿ ತೊಡಗಿಕೊಂಡಿದ್ದ. 1980ರ ದಶಕದಲ್ಲಿ ಮೊಟ್ಟಮೊದಲು ದಾವೂದ್ ಅರೆಸ್ಟ್​ ಆಗಿದ್ದು, ಒಂದು ದರೋಡೆ ಪ್ರಕರಣದಲ್ಲಿ. ಅದಾದ ನಂತರ ಆತನ ಕ್ರೈಂಗಳು ಒಂದೇ ಸಮನೆ ಏರತೊಡಗಿದವು.

ಅಫ್ಘಾನಿಸ್ತಾನದಿಂದ ವಲಸೆ ಬಂದಿರುವ ಪಠಾಣ್​ ಗ್ಯಾಂಗ್​ ಮತ್ತು ಹಾಜಿ ಗ್ಯಾಂಗ್​ ನಡುವೆ ನಡೆಯುತ್ತಿದ್ದ ಹೊಡೆದಾಟದಲ್ಲಿ ದಾವೂದ್ ಸಕ್ರಿಯನಾಗಿದ್ದ. ಇದರ ಮೂಲಕನೇ ಆತ ಅತ್ಯಂತ ಅಪಾಯಕಾರಿಯಾಗಿ ಬೆಳೆಯಲು ತೊಡಗಿದ್ದು. ಪಠಾಣ್​ ಗ್ಯಾಂಗ್​ ದಾವೂದ್ ಇಬ್ರಾಹಿಂನ ಒಬ್ಬ ಸೋದರನನ್ನು ಕೊಂದಿತ್ತು. ಆ ಸೇಡನ್ನು ದಾವೂದ್ ತೀರಿಸಿಕೊಂಡಿದ್ದ. ಪಠಾಣ್​ ಗ್ಯಾಂಗ್​​ನ ಒಬ್ಬೊಬ್ಬರನ್ನೇ ಕೊಲ್ಲುತ್ತ ಬಂದ. ಮುಂದೆ ಹಾಜಿ ಗ್ಯಾಂಗ್​​ನಲ್ಲೇ ಬೆಳೆದ ಈ ವ್ಯಕ್ತಿ, ಭೂಗತ ಲೋಕದಲ್ಲಿ ಸಿಕ್ಕಾಪಟೆ ಬೆಳೆದುಬಿಟ್ಟ.  ದಾವೂದ್​ ಇಬ್ರಾಹಿಂಗೆ ಬಾಲಿವುಡ್​ ಜತೆಗೂ ನಂಟಿತ್ತು. ಬೇರೆ ಹೆಸರಿನಲ್ಲಿ ಹಲವು ಸಿನಿಮಾಗಳನ್ನೂ ನಿರ್ಮಿಸಿದ್ದಾನೆ ಎಂದೂ ಹೇಳಲಾಗುತ್ತದೆ. ಅಷ್ಟೇ ಅಲ್ಲ, ಕೆಲವು ಬಾಲಿವುಡ್ ನಟಿಯರೊಟ್ಟಿಗೆ ಡೇಟಿಂಗ್​ ಕೂಡ ಮಾಡಿದ್ದಾನೆ. ಅಷ್ಟೆಲ್ಲ ಆದರೂ 1993ರ ಮುಂಬೈ ಸ್ಫೋಟದವರೆಗೆ ದಾವೂದ್ ಇಬ್ರಾಹಿಂ ಹೆಸರು ಅಷ್ಟೊಂದು ಬೆಳಕಿಗೆ ಬಂದಿರಲಿಲ್ಲ.

ಇದನ್ನೂ ಓದಿ: ಡೆಲಿವರಿ ನೀಡಲು ಬಂದು ಆಭರಣ ಕದ್ದ ಮಹಿಳೆ; ಮರಳುವ ಮುನ್ನ ಹೇಳಿದ್ದೇನು ಗೊತ್ತಾ? ಇಲ್ಲಿದೆ ಸಿಸಿಟಿವಿ ವಿಡಿಯೋ

Published On - 1:36 pm, Tue, 15 February 22