Chhota Rajan: ಮುಂಬೈ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಕೊಲೆ ಪ್ರಕರಣ; ಭೂಗತ ಪಾತಕಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ

2001ರಲ್ಲಿ ಮುಂಬೈ ಹೊಟೇಲ್ ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೀವ ಬೆದರಿಕೆಯಿಂದಾಗಿ ಮಹಾರಾಷ್ಟ್ರ ಪೊಲೀಸರು ಜಯ ಶೆಟ್ಟಿ ಅವರಿಗೆ ಭದ್ರತೆ ಒದಗಿಸಿದ್ದರು. ಆದರೆ, ಕೊಲೆಯಾಗುವ 2 ತಿಂಗಳ ಮೊದಲು ಅವರ ಭದ್ರತೆಯನ್ನು ಹಿಂಪಡೆಯಲಾಗಿತ್ತು.

Chhota Rajan: ಮುಂಬೈ ಹೋಟೆಲ್ ಉದ್ಯಮಿ ಜಯ ಶೆಟ್ಟಿ ಕೊಲೆ ಪ್ರಕರಣ; ಭೂಗತ ಪಾತಕಿ ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ
ಛೋಟಾ ರಾಜನ್‌

Updated on: May 30, 2024 | 7:58 PM

ಮುಂಬೈ: 2001ರಲ್ಲಿ ಮಹಾರಾಷ್ಟ್ರ ಮೂಲದ ಹೊಟೇಲ್ ಉದ್ಯಮಿಯಾಗಿದ್ದ ಜಯ ಶೆಟ್ಟಿ (Jaya Shetty) ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಮಾಫಿಯಾ ಡಾನ್ ರಾಜೇಂದ್ರ ಎಸ್. ನಿಖಾಲ್ಜೆ ಅಲಿಯಾಸ್ ಛೋಟಾ ರಾಜನ್‌ಗೆ ಮುಂಬೈ ವಿಶೇಷ ನ್ಯಾಯಾಲಯ ಇಂದು (ಗುರುವಾರ) ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ MCOCA ನ್ಯಾಯಾಲಯದ ನ್ಯಾಯಾಧೀಶ 23 ವರ್ಷಗಳ ಹಿಂದೆ ನಡೆದ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳು ಮತ್ತು ಇತರ ಕಾನೂನುಗಳ ಅಡಿಯಲ್ಲಿ ಛೋಟಾ ರಾಜನ್ (Chhota Rajan) ಅಪರಾಧಿ ಎಂದು ನ್ಯಾಯಮೂರ್ತಿ ಘೋಷಿಸಿದ್ದಾರೆ.

ಹತ್ಯೆಗೊಳಗಾಗಿರುವ ಜಯ ಶೆಟ್ಟಿ ದಕ್ಷಿಣ ಮುಂಬೈನ ಗ್ರಾಂಟ್ ರೋಡ್ ಪ್ರದೇಶದ ಪ್ರಸಿದ್ಧ ಗೋಲ್ಡನ್ ಕ್ರೌನ್ ಹೋಟೆಲ್ ಮತ್ತು ಬಾರ್‌ನ ಮಾಲೀಕರಾಗಿದ್ದು, ಛೋಟಾ ರಾಜನ್ ಮತ್ತು ಹಿಂಬಾಲಕರನ್ನು ಫೌಲ್ ಮಾಡಿದ್ದರು. 2001ರ ಮೇ 4ರಂದು ರಾತ್ರಿ ಛೋಟಾ ರಾಜನ್ ಅವರ ಇಬ್ಬರು ಶೂಟರ್‌ಗಳು ಹೋಟೆಲ್ ಆವರಣಕ್ಕೆ ನುಗ್ಗಿ, ಜಯ ಶೆಟ್ಟಿಯನ್ನು ಕೊಲೆ ಮಾಡಿದ್ದರು.

ಇದನ್ನೂ ಓದಿ: ತಿಹಾರ್​ ಜೈಲು ಸೇರಿ 9 ವರ್ಷಗಳ ಬಳಿಕ ಹೊರಬಿತ್ತು ಭೂಗತ ಪಾತಕಿ ಛೋಟಾ ರಾಜನ್​ ಚಿತ್ರ

ಭೂಗತ ಪಾತಕಿ ಛೋಟಾ ರಾಜನ್ ಸಹಚರರಿಂದ ಸುಲಿಗೆ ಬೆದರಿಕೆಗಳು ಮತ್ತು ಕರೆಗಳು ಬರುತ್ತಿವೆ ಎಂದು ಜಯ ಶೆಟ್ಟಿ ದೂರು ನೀಡಿದ್ದರು. ಅವರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ನಂತರ, ಅವರು ಪೊಲೀಸ್ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಕೇಳಿದರು. ಆದರೆ, ಭದ್ರತೆಯನ್ನು ಹಿಂತೆಗೆದುಕೊಂಡ ಕೇವಲ 2 ತಿಂಗಳ ನಂತರ ಅವರು ಕೊಲೆಗೀಡಾಗಿದ್ದರು.

2011ರ ಜೂನ್ 11ರಂದು ಪತ್ರಕರ್ತ ಜೆ. ಡೇ ಅವರನ್ನು ಹಗಲು ಹೊತ್ತಿನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಮೇ ತಿಂಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಮುಂಬೈನಲ್ಲಿ ಛೋಟಾ ರಾಜನ್‌ಗೆ ಇದು ಎರಡನೇ ಜೀವಾವಧಿ ಶಿಕ್ಷೆಯಾಗಿದೆ.

ಇದನ್ನೂ ಓದಿ: ಪೋರ್ಷೆ ಕಾರು ಅಪಘಾತ: ಆರೋಪಿ ಬಾಲಕನ ಕುಟುಂಬ ಹಾಗೂ ಭೂಗತ ಪಾತಕಿ ಛೋಟಾ ರಾಜನ್​ಗಿದೆ ನಂಟು?

ಮುಂಬೈನ ಭಯಾನಕ ಗ್ಯಾಂಗ್​ಸ್ಟರ್​ಗಳಲ್ಲಿ ಒಬ್ಬರಾದ 64 ವರ್ಷದ ಛೋಟಾ ರಾಜನ್, 1989ರಲ್ಲಿ ದುಬೈಗೆ ಪರಾರಿಯಾಗಿದ್ದರು. ಸುಮಾರು 27 ವರ್ಷಗಳ ಕಾಲ ದೇಶ ಬಿಟ್ಟು ಪರಾರಿಯಾಗಿದ್ದ ಅವರನ್ನು ನವೆಂಬರ್ 2015ರಲ್ಲಿ ಇಂಡೋನೇಷ್ಯಾದಿಂದ ಭಾರತಕ್ಕೆ ಗಡಿಪಾರು ಮಾಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ