Gorakhpur Raid: ಗೋರಖ್​ಪುರ ಪೊಲೀಸ್ ರೇಡ್ ಪ್ರಕರಣ; ಸಾವನ್ನಪ್ಪಿದ ಉದ್ಯಮಿಯ ಪತ್ನಿಗೆ ಉದ್ಯೋಗದ ಭರವಸೆ ನೀಡಿದ ಸಿಎಂ

Crime News | ಇಂದು ಉದ್ಯಮಿಯ ಹೆಂಡತಿ, ಮನೆಯವರನ್ನು ಭೇಟಿ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಯಮಿಯ ಪತ್ನಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಹಾಗೇ, 10 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಘೋಷಿಸಿದ್ದಾರೆ.

Gorakhpur Raid: ಗೋರಖ್​ಪುರ ಪೊಲೀಸ್ ರೇಡ್ ಪ್ರಕರಣ; ಸಾವನ್ನಪ್ಪಿದ ಉದ್ಯಮಿಯ ಪತ್ನಿಗೆ  ಉದ್ಯೋಗದ ಭರವಸೆ ನೀಡಿದ ಸಿಎಂ
ಗೋರಖ್​ಪುರ ದಾಳಿಯಲ್ಲಿ ಸಾವನ್ನಪ್ಪಿದ ಉದ್ಯಮಿ ಮನೀಶ್ ಗುಪ್ತ
Edited By:

Updated on: Sep 30, 2021 | 6:13 PM

ಗೋರಖ್​ಪುರ: ಉತ್ತರ ಪ್ರದೇಶದ ಗೋರಖ್​ಪುರದ ಹೋಟೆಲ್​ನಲ್ಲಿ ಪೊಲೀಸರ ದಾಳಿ ವೇಳೆ ಕಾನ್ಪುರ ಮೂಲದ ಉದ್ಯಮಿ ಮನೀಶ್ ಗುಪ್ತ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಪೊಲೀಸರಿಂದಲೇ ನನ್ನ ಗಂಡ ಸಾವನ್ನಪ್ಪಿದ್ದು ಎಂದು ಆ ಉದ್ಯಮಿಯ ಹೆಂಡತಿ ವಿಡಿಯೋದಲ್ಲಿ ಆರೋಪಿಸಿದ್ದರು. ಇದಾದ ಬಳಿಕ ಉತ್ತರ ಪ್ರದೇಶದ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ 6 ಪೊಲೀಸರನ್ನು ಅಮಾನತು ಮಾಡಲಾಗಿದೆ. ಇಂದು ಉದ್ಯಮಿಯ ಹೆಂಡತಿ, ಮನೆಯವರನ್ನು ಭೇಟಿ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಯಮಿಯ ಪತ್ನಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಹಾಗೇ, 10 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಘೋಷಿಸಿದ್ದಾರೆ.

ಗೋರಖ್​ಪುರ ಪೊಲೀಸ್ ದಾಳಿ ಪ್ರಕರಣದಲ್ಲಿ ಉದ್ಯಮಿ ಸಾವನ್ನಪ್ಪಿದ ಕೇಸ್​ಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಆರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಅಮಾನತುಗೊಂಡಿರುವ ಆರು ಮಂದಿ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಹಾಗೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.

ಸೆ. 28ರಂದು ರಾತ್ರಿ ಗೋರಖ್​ಪುರದ ಹೋಟೆಲ್ ಮೇಲೆ ಪೊಲೀಸರ ರೇಡ್ ಮಾಡಿದ್ದರು. ಅದಾದ ಬಳಿಕ ಹೋಟೆಲ್​ನಲ್ಲಿ 38 ವರ್ಷದ ಪ್ರಾಪರ್ಟಿ ಡೀಲರ್ ಮನೀಶ್ ಗುಪ್ತ ಅವರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಪೊಲೀಸರೇ ನನ್ನ ಗಂಡನನ್ನು ಕೊಂದಿದ್ದಾರೆ ಎಂದು ಉದ್ಯಮಿಯ ಹೆಂಡತಿ ಆರೋಪಿಸಿದ್ದರು. ಆದರೆ, ಪೊಲೀಸ್ ದಾಳಿ ವೇಳೆ ತಪ್ಪಿಸಿಕೊಳ್ಳಲು ಕೆಳಗೆ ಹಾರಿದಾಗ ಗಾಯವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಈ ನಿಗೂಢ ಸಾವು ಭಾರೀ ಚರ್ಚೆಗೆ ಕಾರಣವಾಗಿತ್ತು.

ಮನೀಶ್ ಗುಪ್ತ ಮತ್ತು ಅವರ ಸ್ನೇಹಿತರು ಕಾರ್ಯದ ನಿಮಿತ್ತ ಆಗಮಿಸಿದ್ದು ಹೋಟೆಲ್ ನಲ್ಲಿ ತಂಗಿದ್ದರು. ಪೊಲೀಸರೇ ಥಳಿಸಿ ಅವರನ್ನು ಕೊಂದಿದ್ದಾರೆ ಎಂಬ ಆರೋಪ ಬಂದಿದ್ದರಿಂದ ಮನೀಶ್ ಗುಪ್ತ ಅವರ ಹೆಂಡತಿ ನೀಡಿದ ದೂರಿನ ಅನ್ವಯ 6 ಪೊಲೀಸರನ್ನು ಕೊಲೆ ಆರೋಪದಲ್ಲಿ ಅಮಾನತು ಮಾಡಲಾಗಿತ್ತು.

ಇದನ್ನೂ ಓದಿ: Crime News: ಹಾಡಹಗಲೇ ಕಾಲೇಜು ಯುವತಿಯ ಕುತ್ತಿಗೆ ಸೀಳಿ ಕೊಲೆ; ಪ್ರೇಮ ವೈಫಲ್ಯದ ಶಂಕೆ

Murder: ದಾವಣಗೆರೆ; ಅಕ್ರಮ ಸಂಬಂಧ ಮುಚ್ಚಿಡಲು ಪ್ರಿಯಕರನ ಜೊತೆ ಸೇರಿ ಹೆಂಡತಿಯಿಂದಲೇ ಗಂಡನ ಕೊಲೆ

Follow Us