Gyanvapi Case: ಜ್ಞಾನವಾಪಿ ಆವರಣದಲ್ಲಿ ಹಿಂದೂಗಳ ಪೂಜೆಗೆ ಸದ್ಯಕ್ಕಿಲ್ಲ ನಿರ್ಬಂಧ: ಅಲಹಾಬಾದ್ ಹೈಕೋರ್ಟ್​

ವಾರಾಣಸಿಯ ಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಮಸೀದಿ ಸಮಿತಿಗೆ ಭಾರಿ ಹಿನ್ನಡೆಯಾಗಿದೆ. ಸದ್ಯಕ್ಕೆ ಹಿಂದೂಗಳ ಪೂಜೆಗೆ ತಡೆ ನೀಡಲಾಗದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, ಫೆಬ್ರವರಿ 6 ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

Gyanvapi Case: ಜ್ಞಾನವಾಪಿ ಆವರಣದಲ್ಲಿ ಹಿಂದೂಗಳ ಪೂಜೆಗೆ ಸದ್ಯಕ್ಕಿಲ್ಲ ನಿರ್ಬಂಧ: ಅಲಹಾಬಾದ್ ಹೈಕೋರ್ಟ್​
ಜ್ಞಾನವಾಪಿ ಆವರಣದಲ್ಲಿ ಹಿಂದೂಗಳ ಪೂಜೆಗೆ ಸದ್ಯಕ್ಕಿಲ್ಲ ನಿರ್ಬಂಧ: ಅಲಹಾಬಾದ್ ಹೈಕೋರ್ಟ್
Follow us
|

Updated on:Feb 02, 2024 | 2:11 PM

ಅಲಹಾಬಾದ್, ಫೆಬ್ರವರಿ 2: ವಾರಾಣಸಿಯ ಜ್ಞಾನವಾಪಿಯ (Gyanvapi) ಆವರಣದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಮಸೀದಿ ಸಮಿತಿಯು ಅಲಹಾಬಾದ್ ಹೈಕೋರ್ಟ್‌ನಲ್ಲಿ (Allahabad High Court) ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜ್ಞಾನವಾಪಿಯ ‘ವ್ಯಾಸ್ ಜಿ ಕಾ ತೆಹ್ಖಾನಾ’ ಅಥವಾ ವ್ಯಾಸ್ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ನೀಡಿ ಜಿಲ್ಲಾ ಕೋರ್ಟ್​ ನೀಡಿದ್ದ ಆದೇಶಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿದೆ. ಇದರೊಂದಿಗೆ ಮಸೀದಿ ಸಮಿತಿಗೆ ತೀವ್ರ ಹಿನ್ನಡೆಯಾಗಿದೆ.

ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 6 ರಂದು ನಡೆಯಲಿದೆ. ಅಲ್ಲಿಯವರೆಗೆ ಹಿಂದೂಗಳ ಪೂಜೆಗೆ ನಿಷೇಧವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಫೆಬ್ರವರಿ 6 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಪುರಾತತ್ವ ಇಲಾಖೆಯ ಸಮೀಕ್ಷಾ (ಎಎಸ್‌ಐ) ವರದಿಯ ವಿಚಾರಣೆಯೂ ನಡೆಯಲಿದೆ.  ಸದ್ಯದ ಮಟ್ಟಿಗೆ ಸ್ಥಳವನ್ನು ಸಂರಕ್ಷಿಸುವಂತೆ ಉತ್ತರ ಪ್ರದೇಶದ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಯಾವುದೇ ಹಾನಿ ಅಥವಾ ನಿರ್ಮಾಣ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆಯೂ ಸರ್ಕಾರಕ್ಕೆ ಕೋರ್ಟ್​ ಸೂಚನೆ ನೀಡಿದೆ.

ಜಿಲ್ಲಾಧಿಕಾರಿ ರಿಸೀವರ್ ನೇಮಕ ಮಾಡುವಾಗ ನೀವು ಪ್ರತಿಭಟಿಸಲಿಲ್ಲ ಎಂದು ಮಸೀದಿ ಸಮಿತಿಯನ್ನು ಉದ್ದೇಶಿಸಿ ಕೋರ್ಟ್ ಹೇಳಿದೆ. ಮಸೀದಿ ಸಮಿತಿಯು ತನ್ನ ಮೇಲ್ಮನವಿಯನ್ನು ತಿದ್ದುಪಡಿ ಮಾಡಲು ಕೋರಿ ಮತ್ತು ಜಿಲ್ಲಾ ನ್ಯಾಯಾಧೀಶರ ಜನವರಿ 17 ರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಜನವರಿ 17 ರ ಆದೇಶದಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟರ್ ಅನ್ನು ‘ವ್ಯಾಸ್ ಜಿ ಕಾ ತೆಹ್ಖಾನಾ’ದ ರಿಸೀವರ್ ಆಗಿ ನೇಮಿಸಲಾಗಿತ್ತು. ಅಲ್ಲದೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು.

ಇದಕ್ಕೂ ಮುನ್ನ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸುವಂತೆ ಉತ್ತರ ಪ್ರದೇಶದ ಅಡ್ವೊಕೇಟ್ ಜನರಲ್ ಅವರನ್ನು ನ್ಯಾಯಾಲಯ ಕೇಳಿದೆ. ಇದೇ ವೇಳೆ, ‘ವ್ಯಾಸ್ ಜಿ ಕಾ ತೆಹ್ಖಾನಾ’ದಲ್ಲಿ ಹಿಂದೂಗಳ ಪೂಜೆ ಆರಂಭವಾಗಿದೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ. ಇದೀಗ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ ಎಂಬುದನ್ನೂ ತಿಳಿಸಿದ್ದಾರೆ. ಬಳಿಕ, ಅಲ್ಲಿ ಮಾಡಲಾದ ವ್ಯವಸ್ಥೆಗಳ ಬಗ್ಗೆ ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರದಿಂದ ವಿವರವಾದ ಮಾಹಿತಿಯನ್ನು ಕೇಳಿದೆ.

ಡಿಎಂ (ಜಿಲ್ಲಾ ಮ್ಯಾಜಿಸ್ಟ್ರೇಟರ್) ಅವರನ್ನು ರಿಸೀವರ್ ಆಗಿ ನೇಮಿಸಿರುವ ಜನವರಿ 17ರ ಆದೇಶವನ್ನು ನೀವು ಪ್ರಶ್ನಿಸಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಮಸೀದಿ ಸಮಿತಿಯ ವಕೀಲರನ್ನು ಪ್ರಶ್ನಿಸಿದ್ದಾರೆ. ಜನವರಿ 31ರ ಆದೇಶದ ವಿರುದ್ಧ ನೇರವಾಗಿ ಅರ್ಜಿ ಸಲ್ಲಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಅರ್ಜಿಯ ನಿರ್ವಹಣೆ ಏನು ಎಂದು ನಮಗೆ ತಿಳಿಸಿ ಎಂದೂ ಸೂಚಿಸಿದ್ದಾರೆ.

ಇದನ್ನೂ ಓದಿ: ಜ್ಞಾನವಾಪಿ ಸಂಕೀರ್ಣದಲ್ಲಿ ಹಿಂದೂಗಳಿಂದ ಪೂಜೆ, ವಾರಾಣಸಿ ಬಂದ್​ಗೆ ಕರೆ ನೀಡಿದ ಮುಸ್ಲಿಮರು

ಉತ್ತರ ಪ್ರದೇಶ ಸರ್ಕಾರವು ಮಾಹಿತಿ ನೀಡಿದ ನಂತರ, ಹಿಂದೂ ಕಡೆಯವರು ಮಸೀದಿ ಸಮಿತಿಯ ಮನವಿಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ. ಹಿಂದೂಗಳ ಪರವಾಗಿ ವಿಷ್ಣು ಶಂಕರ್ ಜೈನ್ ಕೋರ್ಟ್​​​ಗೆ ಹಾಜರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:01 pm, Fri, 2 February 24