ಮಹಾರಾಷ್ಟ್ರದ ಈ ಹಳ್ಳಿಯಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲ, ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ. ಬಹುಮಾನ

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಿವರೆ ಬಜಾರ್ ಗ್ರಾಮ ವಿಶಿಷ್ಟವಾಗಿದೆ. ಇಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲ, ಸೊಳ್ಳೆ ಹಿಡಿದು ಕೊಟ್ಟರೆ 400 ರೂ. ಬಹುಮಾನ. ಹಿಂದೆ ಬಡತನದಿಂದ ಬಳಲುತ್ತಿದ್ದ ಈ ಗ್ರಾಮ, ಸಮುದಾಯದ ಪ್ರಯತ್ನದಿಂದ ನೀರು ನಿರ್ವಹಣೆ ಹಾಗೂ ಸ್ವಚ್ಛತೆಯಲ್ಲಿ ಮಾದರಿಯಾಗಿದೆ. ಇಂದು 80ಕ್ಕೂ ಹೆಚ್ಚು ಕೋಟ್ಯಧಿಪತಿಗಳಿರುವ ಈ ಹಳ್ಳಿಯ ಕಥೆ ದೇಶಕ್ಕೆ ಸ್ಪೂರ್ತಿದಾಯಕ.

ಮಹಾರಾಷ್ಟ್ರದ ಈ ಹಳ್ಳಿಯಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲ, ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ. ಬಹುಮಾನ
ಸೊಳ್ಳೆ

Updated on: Jul 06, 2026 | 1:28 PM

ಪುಣೆ, ಜುಲೈ 06: ಭಾರತದಲ್ಲಿ ಪ್ರತಿ ವರ್ಷ ಸೊಳ್ಳೆ(Mosquito) ಕಡಿತ ಮತ್ತು ಅದರಿಂದ ಬರುವ ರೋಗಗಳಿಂದ ಸಾವಿರಾರು ಜನರು ಪರದಾಡುತ್ತಾರೆ. ಆದರೆ, ನಮ್ಮ ದೇಶದಲ್ಲೇ ಒಂದೇ ಒಂದು ಸೊಳ್ಳೆಯೂ ಇಲ್ಲದ ವಿಚಿತ್ರ ಹಾಗೂ ಅದ್ಭುತ ಹಳ್ಳಿಯೊಂದಿದೆ. ಅಷ್ಟೇ ಅಲ್ಲ, ಈ ಗ್ರಾಮದಲ್ಲಿ ನೀವು ಎಲ್ಲಾದರೂ ಒಂದು ಸೊಳ್ಳೆಯನ್ನು ಹುಡುಕಿ ಹಿಡಿದು ಕೊಟ್ಟರೆ ನಿಮಗೆ 400 ರೂಪಾಯಿ ಬಹುಮಾನ ಕೂಡ ಕೊಡ್ತಾರೆ. ಹೌದು, ಇದು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ‘ಹಿವರೆ ಬಜಾರ್’ ಎಂಬ ಹಳ್ಳಿಯ ಆಸಕ್ತಿದಾಯಕ ಕಥೆ.

ಶೇ.90 ಬಡವರಿದ್ದ ಹಳ್ಳಿಯಲ್ಲಿ ಈಗ 80 ಜನ ಕೋಟ್ಯಧಿಪತಿಗಳು
ಇಂದು ಹಿವರೆ ಬಜಾರ್ ಗ್ರಾಮದಲ್ಲಿ ಒಟ್ಟು 305 ಕುಟುಂಬಗಳಿದ್ದು, ಇವರಲ್ಲಿ 80 ಕ್ಕೂ ಹೆಚ್ಚು ಜನ ಕೋಟ್ಯಧಿಪತಿಗಳಿದ್ದಾರೆ . ಆದರೆ, 1990 ರ ದಶಕದ ಮೊದಲು ಈ ಗ್ರಾಮದ ಪರಿಸ್ಥಿತಿ ಹೀಗಿರಲಿಲ್ಲ. ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಈ ಊರಿನ ಶೇ. 90 ರಷ್ಟು ಜನರು ಅತ್ಯಂತ ಬಡವರಾಗಿದ್ದರು. ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಊರು ಬಿಟ್ಟು ವಲಸೆ ಹೋಗುತ್ತಿದ್ದರು. ಆದರೆ, ಗ್ರಾಮಸ್ಥರ ಒಗ್ಗಟ್ಟು ಮತ್ತು ಕಠಿಣ ಶ್ರಮ ಇಡೀ ಹಳ್ಳಿಯ ಹಣೆಬರಹವನ್ನೇ ಬದಲಾಯಿಸಿತು.

ಬದಲಾವಣೆಯ ಹಾದಿ
ಅರಣ್ಯ ನಿರ್ವಹಣಾ ಸಮಿತಿ: 1990 ರಲ್ಲಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ‘ಜಂಟಿ ಅರಣ್ಯ ನಿರ್ವಹಣಾ ಸಮಿತಿ’ಯನ್ನು ರಚಿಸಿಕೊಂಡರು. ಊರಿನಲ್ಲೇ ಬಾವಿಗಳನ್ನು ಅಗೆಯಲು ಮತ್ತು ಲಕ್ಷಾಂತರ ಮರಗಳನ್ನು ನೆಡಲು ನಿರ್ಧರಿಸಿದರು.

ಶ್ರಮದಾನ ಮತ್ತು ಸರ್ಕಾರದ ನೆರವು: ಗ್ರಾಮಸ್ಥರು ತಾವೇ ಖುದ್ದಾಗಿ ಉಚಿತವಾಗಿ ಶ್ರಮದಾನ ಮಾಡಿದರು. ಇದಕ್ಕೆ ಮಹಾರಾಷ್ಟ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ಬೆಂಬಲವೂ ಸಿಕ್ಕಿತು.

ಮತ್ತಷ್ಟು ಓದಿ: ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ವೈರಸ್​ ಸೋಂಕನ್ನು ತಪ್ಪಿಸುವುದು ಹೇಗೆ?

ಮೇಲಕ್ಕೇರಿದ ಅಂತರ್ಜಲ: ಈ ನಿರಂತರ ಪ್ರಯತ್ನದ ಫಲವಾಗಿ, ಒಂದು ಕಾಲದಲ್ಲಿ ನೀರಿಲ್ಲದಿದ್ದ ಈ ಗ್ರಾಮದಲ್ಲಿ ಇಂದು ಭೂಮಿಯ ಒಳಗಿನ ನೀರಿನ ಮಟ್ಟ ಕೇವಲ 30 ರಿಂದ 35 ಅಡಿಗೆ ತಲುಪಿದೆ.

ನೀರು ಉಳಿಸಲು ಬೆಳೆಗಳ ಬದಲಾವಣೆ
ಗ್ರಾಮಸ್ಥರು ಕೇವಲ ನೀರನ್ನು ಸಂಗ್ರಹಿಸಲಿಲ್ಲ, ಅದನ್ನು ಜಾಣ್ಮೆಯಿಂದ ಬಳಸಲು ಕಲಿತರು. ಹೆಚ್ಚು ನೀರು ಬೇಡುವ ಭತ್ತ, ಕಬ್ಬು ಮತ್ತು ಜೋಳದಂತಹ ಬೆಳೆಗಳನ್ನು ಗ್ರಾಮದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಯಿತು. ಬದಲಾಗಿ ಕಡಿಮೆ ನೀರಿನಲ್ಲಿ ಬೆಳೆಯುವ, ಹೆಚ್ಚು ಲಾಭ ನೀಡುವ ಆಲೂಗಡ್ಡೆ ಮತ್ತು ಈರುಳ್ಳಿಗಳನ್ನು ಬೆಳೆಯಲು ಆರಂಭಿಸಿದರು.

ಇಂದು ಹಿವರೆ ಬಜಾರ್‌ನ ರೈತರು ಮಳೆಗಾಗಿ ಕಾಯುತ್ತಾ ಕೂರುವುದಿಲ್ಲ. ಸರಿಯಾದ ಜಲ ನಿರ್ವಹಣೆ ಹಾಗೂ ಸ್ವಚ್ಛತೆಯಿಂದಾಗಿ ಇಡೀ ಗ್ರಾಮ ಹಸಿರಾಗಿದೆ ಮತ್ತು ಸೊಳ್ಳೆ ಮುಕ್ತವಾಗಿದೆ. ಬಡತನದಿಂದ ಕೋಟ್ಯಧಿಪತಿಗಳ ಹಳ್ಳಿಯಾಗಿ ಬದಲಾಗಿರುವ ಹಿವರೆ ಬಜಾರ್ ಇಡೀ ದೇಶಕ್ಕೆ ಮಾದರಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us