AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ನಾಗೇಂದ್ರರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಆಕ್ರೋಶ: ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಂದ ಕೋಲಾಹಲ

Karnataka News Today Live Updates: ಮುಂಗಾರು ಅಧಿವೇಶನದ 3ನೇ ದಿನ ಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ-ಜೆಡಿಎಸ್ ಪ್ರತಿಭಟನೆಗೆ ಸಜ್ಜಾಗಿದ್ದು, ಸದನದಲ್ಲಿ ಭಾರಿ ಕಾದಾಟ ಸಾಧ್ಯತೆ. ಇತ್ತ ಪಶ್ಚಿಮ ಬಂಗಾಳದ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಏಳು ಮಂದಿ ಸಜೀವ ದಹನಗೊಂಡಿದ್ದಾರೆ. ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ ಪಡೆಯಿರಿ.

TV9 Kannada News Live: ನಾಗೇಂದ್ರರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಆಕ್ರೋಶ: ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಂದ ಕೋಲಾಹಲ
ವಿಧಾನಸಭೆಯಲ್ಲಿ ವಿಪಕ್ಷಗಳ ತೀವ್ರ ಗದ್ದಲ
ಭಾವನಾ ಹೆಗಡೆ
| Edited By: |

Updated on:Aug 17, 2026 | 9:09 PM

Share

Breaking News Today Live Updates in Kannada: ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಮುಂಗಾರು ಅಧಿವೇಶನದ 3ನೇ ದಿನದ ಕಲಾಪ ಇಂದು ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿದೆ. ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ-ಜೆಡಿಎಸ್ ವಿಪಕ್ಷಗಳು, ಸದನದ ಒಳಗೆ ಹಾಗೂ ಹೊರಗೆ ತೀವ್ರ ಪ್ರತಿಭಟನೆ ನಡೆಸಲು ಸಜ್ಜಾಗಿವೆ. ಇದರೊಂದಿಗೆ ಪಿಂಚಣಿ ಸ್ಥಗಿತ, ಬಿಡದಿ ಟೌನ್‌ಶಿಪ್ ಹಾಗೂ ಆರ್‌ಎಸ್‌ಎಸ್ ಕುರಿತ ಮಸೂದೆಗಳ ವಿರುದ್ಧವೂ ಕಲಾಪದಲ್ಲಿ ಭಾರಿ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಾರಾಪೀಠದ ನಾಲ್ಕು ಅಂತಸ್ತಿನ ಖಾಸಗಿ ಹೋಟೆಲ್‌ನಲ್ಲಿ ಇಂದು ಮುಂಜಾನೆ 5 ಗಂಟೆಗೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಿದ್ರೆಯಲ್ಲಿದ್ದ ಕನಿಷ್ಠ ಏಳು ಮಂದಿ ಸಜೀವ ದಹನಗೊಂಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE NEWS & UPDATES

The liveblog has ended.
  • 17 Aug 2026 09:09 PM (IST)

    ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನ ಹಂಚಿಕೆ

    ಖಾಲಿ ಇರುವ ಸರ್ಕಾರಿ ಜಮೀನು ಗುರುತಿಸಿ, ನಿವೇಶನ ರಚನೆಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ವಸತಿ ರಹಿತರಿಗೆ ನಿವೇಶನ ನೀಡುವುದಾಗಿ ಘೋಷಿಸಿದ್ದೆವುz ಅದರಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರವು ಉದ್ದೇಶಿಸಿದೆ ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ 30×40 ಅಡಿ ಅಳತೆಯ ಹಾಗೂ ನಗರ ಪ್ರದೇಶಗಳಲ್ಲಿ 20×30 ಅಡಿ ಅಳತೆ ನಿವೇಶನ ಅರ್ಹರಿಗೆ ನೀಡುತ್ತೇವೆ. ಈ ನಿಟ್ಟಿನಲ್ಲಿ ಲಭ್ಯವಿರುವ, ಖಾಲಿ ಇರುವ ಸರ್ಕಾರಿ ಜಮೀನು ತಕ್ಷಣ ಗುರುತಿಸಿ ನಿವೇಶನಗಳ ರಚನೆಗೆ ಅಗತ್ಯವಿರುವ ಎಲ್ಲಾ ಪ್ರಕ್ರಿಯೆ ವಿಳಂಬ ಮಾಡದೇ ತುರ್ತಾಗಿ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

  • 17 Aug 2026 05:49 PM (IST)

    ಬಿಜೆಪಿ ಸದಸ್ಯರ ಗದ್ದಲ ಹೆಚ್ಚಾದ ಹಿನ್ನೆಲೆ ಪರಿಷತ್ ಕಲಾಪ ಮುಂದೂಡಿಕೆ

    ವಜಾ ಮಾಡಿ ವಜಾ ಮಾಡಿ, ಬಿ.ನಾಗೇಂದ್ರರನ್ನು ವಜಾ ಮಾಡಿ ವಿಪಕ್ಷ ಬಿಜೆಪಿ ಸದನದಲ್ಲಿ ಪಟ್ಟು ಹಿಡಿದಿದ್ದು, ಕೊಡಲೇಬೇಕು ಕೊಡಲೇಬೇಕು ನಾಗೇಂದ್ರ ರಾಜೀನಾಮೆ ಕೊಡಬೇಕು ಆಗ್ರಹಿಸಿದೆ. ಮಾರಾಟ ಮಾರಾಟ ಸಚಿವಸ್ಥಾನ ಮಾರಾಟವೆಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದೆ. ಬಿಜೆಪಿ ಸದಸ್ಯರ ಗದ್ದಲ ಹೆಚ್ಚಾಗಿದ್ದರಿಂದ ಸಭಾಪತಿ ವಿಧಾನಪರಿಷತ್ ಕಲಾಪವನ್ನು ನಾಳೆ (ಆಗಸ್ಟ್ 18) ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

  • 17 Aug 2026 05:34 PM (IST)

    ನಾಗೇಂದ್ರ ರಾಜೀನಾಮೆಗೆ ಸದನದಲ್ಲಿ ಬಿಜೆಪಿ ಬಿಗಿ ಪಟ್ಟು

    ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದ್ದು, ಸದನದಲ್ಲಿ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನುಂಗಿದ ಸರ್ಕಾರಕ್ಕೆ ಧಿಕ್ಕಾರ ಎಂದು ತಮ್ಮ ತಮ್ಮ ಆಸನಗಳ ಬಳಿ ನಿಂತು ಘೋಷಣೆ ಕೂಗಿದ್ದಾರೆ. ಮತ್ತೊಂದೆಡೆ ಆಡಳಿತ ಪಕ್ಷದ ಚರ್ಚೆ ನಡೆದಿದ್ದು,ಗದ್ದಲದ ನಡುವೆಯೇ ಸ್ಪೀಕರ್ ಪ್ರಶ್ನೋತ್ತರ ಕಲಾಪ ಮುಂದುವರಿಸಿದ್ದಾರೆ.

  • 17 Aug 2026 03:30 PM (IST)

    ಬಿಜೆಪಿ ರಾಷ್ಟ್ರೀಯ ಘಟಕ ಪುನಾರಚನೆ

    ಬಿಜೆಪಿ ರಾಷ್ಟ್ರೀಯ ಘಟಕವನ್ನು ಪುನಾರಚನೆ ಮಾಡಲಾಗಿದೆ. ಪ್ರೊ.ಎಂ.ನಾಗರಾಜ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ತಾವಡೆ ಅವರನ್ನು ಮುಂದುವರಿಸಲಾಗಿದೆ. ಸ್ಮೃತಿ ಇರಾನಿ ಅವರನ್ನು ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇನ್ನು ಗುಜರಾತ್ ಮೂಲದ ಡಾ.ಹೇಮಾಂಗ್ ಜೋಶಿ ಅವರನ್ನು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

  • 17 Aug 2026 02:50 PM (IST)

    ಖರ್ಗೆ ಕಾರ್ಯಕ್ರಮ ನಡೆದ ಸ್ಥಳ ಶುದ್ಧೀಕರಣ!

    ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿ ಅಸ್ಪೃಶ್ಯತೆ ಆಚರಿಸಿದ್ದನ್ನು ಖಂಡಿಸಿ ವಿಧಾನ ಪರಿಷತ್‌ನಲ್ಲಿ ನಿರ್ಣಯ ಮಂಡಿಸಲು ಕಾಂಗ್ರೆಸ್ ಸದಸ್ಯರು ಮುಂದಾಗಿದ್ದಾರೆ. ಪರಿಷತ್ ಸದಸ್ಯ ಜಕ್ಕಪ್ಪನವರ್, ಉಮಾಶ್ರೀ ಸೇರಿ 10ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ ಪತ್ರವನ್ನು ಉಪಸಭಾಪತಿ ಸಲೀಂ ಅಹಮದ್‌ಗೆ ಸಲ್ಲಿಸಿದ್ದಾರೆ.

  • 17 Aug 2026 01:30 PM (IST)

    ‘ಬ್ಲ್ಯಾಕ್‌ಮೇಲ್ ಮಾಡಿ ಸಚಿವರಾಗಿದ್ದಾರೆ ಬಿ. ನಾಗೇಂದ್ರ’: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ!

    ಬಿ. ನಾಗೇಂದ್ರ ಬ್ಲ್ಯಾಕ್‌ಮೇಲ್ ಮಾಡಿ ಸಚಿವರಾಗಿದ್ದು, ಸರ್ಕಾರ ಅವರ ರಕ್ಷಣೆಗೆ ನಿಂತು ಸಾಕ್ಷ್ಯನಾಶಕ್ಕೆ ಕೈಜೋಡಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಸುವುದಾಗಿ ಹಾಗೂ ರಾಜೀನಾಮೆ ನೀಡಿದರೆ ಮಾತ್ರ ಕಲಾಪಕ್ಕೆ ಸಹಕರಿಸುವುದಾಗಿ ವಿಧಾನಸೌಧದಲ್ಲಿ ಎಚ್ಚರಿಸಿದರು.

  • 17 Aug 2026 01:29 PM (IST)

    ಕಾವೇರಿ ಕಿಚ್ಚು: ಮಂಡ್ಯದಲ್ಲಿ ನೇಣು ಕುಣಿಕೆ ಹಿಡಿದು ರೈತರ ಭಾರಿ ಪ್ರತಿಭಟನೆ!

    ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ರೈತರು ನೇಣು ಕುಣಿಕೆ ಹಿಡಿದು ಧರಣಿ ನಡೆಸಿದರು. ಸರ್ಕಾರ ವಾದ ಮಂಡನೆಯಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದ ರೈತರು, ನೀರು ಹರಿಸದಂತೆ ಪಟ್ಟು ಹಿಡಿದರು.

  • 17 Aug 2026 01:07 PM (IST)

    ವಿಧಾನಸಭೆಯಲ್ಲಿ ವಿಪಕ್ಷಗಳ ತೀವ್ರ ಗದ್ದಲ: ಸಚಿವ ಬಿ. ನಾಗೇಂದ್ರ ವಜಾಗೆ ಪಟ್ಟು

    ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗೇಂದ್ರ ಅವರನ್ನು ವಜಾಗೊಳಿಸುವವರೆಗೆ ಕಲಾಪ ನಡೆಯಲು ಬಿಡುವುದಿಲ್ಲವೆಂದು ಭಾವಿಗಿಳಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಸದನ ಕಾಪಾಡುವಂತೆ ಘೋಷಣೆಗಳನ್ನು ಕೂಗಿದರು.

  • 17 Aug 2026 01:07 PM (IST)

    ಹನೂರು ಎನ್‌ಕೌಂಟರ್: ನ್ಯಾಯಾಂಗ ತನಿಖೆಗೆ ಆರ್‌‌. ಅಶೋಕ್ ಆಗ್ರಹ!

    ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಹಾಗೂ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌‌. ಅಶೋಕ್ ಒತ್ತಾಯಿಸಿದ್ದಾರೆ. ಜೊತೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

  • 17 Aug 2026 12:48 PM (IST)

    ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿಯಿಂದ ಅನಿರ್ದಿಷ್ಟಾವಧಿ ಧರಣಿ!

    ಮಹರ್ಷಿ ಶ್ರೀ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಜಿಲ್ಲಾ ಬಿಜೆಪಿ ಘಟಕದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರ ಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಹಗರಣದ ತನಿಖೆ ನಡೆಯುತ್ತಿದ್ದರೂ ಸಚಿವ ಸ್ಥಾನದಲ್ಲಿ ಮುಂದುವರಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಚಿವ ಬಿ. ನಾಗೇಂದ್ರ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪಟ್ಟು ಹಿಡಿದರು.

  • 17 Aug 2026 12:32 PM (IST)

    Cauvery Water Dispute: ದಿನಕ್ಕೆ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂಕೋರ್ಟ್ ಆದೇಶ!

    ಕಾವೇರಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು ಎತ್ತಿಹಿಡಿದಿದೆ. ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

  • 17 Aug 2026 12:03 PM (IST)

    ಫಿಜಿ ದೇಶದಲ್ಲಿ ಕಷ್ಟಕ್ಕೆ ಸಿಲುಕಿದ ಹಕ್ಕಿಪಿಕ್ಕಿ ಜನಾಂಗದ 6 ಜನರು

    ಗಿಡಮೂಲಿಕೆ ಮಾರಾಟಕ್ಕೆ ಹೋಗಿದ್ದ ದಾವಣಗೆರೆ ಹಾಗೂ ಮೈಸೂರು ಮೂಲದ 6 ಮಂದಿ ಹಕ್ಕಿಪಿಕ್ಕಿ ಜನಾಂಗದವರು ಫಿಜಿಯಲ್ಲಿ 60 ಸಾವಿರ ಫಿಜಿ ಡಾಲರ್ ಅಕ್ರಮ ಸಾಗಣೆ ಆರೋಪದಡಿ 20 ದಿನಗಳಿಂದ ಸಂಕಷ್ಟದಲ್ಲಿದ್ದಾರೆ. ರಾಯಭಾರಿ ಕಚೇರಿ ಸ್ಪಂದಿಸದ ಹಿನ್ನೆಲೆ, ವಿದೇಶಾಂಗ ಇಲಾಖೆ ಮಧ್ಯಪ್ರವೇಶಿಸಿ ರಕ್ಷಿಸುವಂತೆ ಆದಿವಾಸಿ ಒಕ್ಕೂಟ ಮನವಿ ಮಾಡಿದೆ

  • 17 Aug 2026 11:44 AM (IST)

    ಹನೂರು ಗುಂಡೇಟು ಪ್ರಕರಣ: ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ಮಾಡಿದ್ದಾರೆ ಎಂದ ರಾಮಲಿಂಗರೆಡ್ಡಿ

    ಹನೂರು ಮೀಸಲು ಅರಣ್ಯದಲ್ಲಿ ಕಳ್ಳಬೇಟೆಗಾರರು ಅಕ್ರಮವಾಗಿ ಪ್ರವೇಶಿಸಿದ್ದರೆಂದು ಸಚಿವ ರಾಮಲಿಂಗರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಗೆ ತೆರಳಿದಾಗ ಕಳ್ಳಬೇಟೆಗಾರರು ದಾಳಿಗೆ ಮುಂದಾಗಿದ್ದರಿಂದ, ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಮೂರು ಬಾರಿ ಪ್ರತಿದಾಳಿ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

  • 17 Aug 2026 11:13 AM (IST)

    ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಮಂಕಾಳು ವೈದ್ಯ ನಾಮಪತ್ರ ಸಲ್ಲಿಕೆ!

    ವಿಧಾನಸಭೆ ಉಪಸಭಾಧ್ಯಕ್ಷ (ಡೆಪ್ಯೂಟಿ ಸ್ಪೀಕರ್) ಹುದ್ದೆಗೆ ಮಂಕಾಳು ವೈದ್ಯ ಅವರು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಲಕ್ಷ್ಮಣ ಸವದಿ, ಹೆಚ್.ಸಿ. ಬಾಲಕೃಷ್ಣ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಸಾಥ್ ನೀಡಿದರು.

  • 17 Aug 2026 11:12 AM (IST)

    ಹನೂರು ಗುಂಡೇಟು ಪ್ರಕರಣ: ಮೃತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ವಿತರಣೆ!

    ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಎಂ.ಆರ್. ಮಂಜುನಾಥ್ ಹನೂರು ತಹಶೀಲ್ದಾರ್ ಚೈತ್ರಾ ಅವರ ಮೂಲಕ ಮೃತರ ಕುಟುಂಬಕ್ಕೆ ಸರ್ಕಾರದ 5 ಲಕ್ಷ ರೂ. ಹಾಗೂ ವೈಯಕ್ತಿಕ 10 ಲಕ್ಷ ರೂ. ಸೇರಿದಂತೆ ತಲಾ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

  • 17 Aug 2026 11:12 AM (IST)

    ಪರಿಷತ್ ಉಪಸಭಾಪತಿ ಚುನಾವಣೆ: ಅಭ್ಯರ್ಥಿ ಕಣಕ್ಕಿಳಿಸದೆ ಹಿಂದೆ ಸರಿದ ಮೈತ್ರಿಕೂಟ!

    ವಿಧಾನಪರಿಷತ್ ಉಪಸಭಾಪತಿ ಚುನಾವಣೆಯಿಂದ ಮೈತ್ರಿಕೂಟ ಹಿಂದೆ ಸರಿದಿದೆ. ಈಗಾಗಲೇ ಸಭಾಪತಿ ಚುನಾವಣೆಯಲ್ಲಿ ಸೋಲು ಕಂಡಿದ್ದು, ಸಂಖ್ಯಾಬಲದ ಕೊರತೆ ಅರಿತ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಮುಜುಗರ ತಪ್ಪಿಸಿಕೊಳ್ಳಲು ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಜಾಣ ತೀರ್ಮಾನ ಕೈಗೊಂಡಿದ್ದಾರೆ.

  • 17 Aug 2026 10:59 AM (IST)

    ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆ: ಕೋಲಾರದ ಶ್ರೀಕರ್ ಗೆ ಜೋಡಿ ಪ್ರಶಸ್ತಿ!

    ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಎಂ.ಎನ್. ಜಿಮ್ ಆಯೋಜಿಸಿದ್ದ ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಕಠಿಣ ಸ್ಪರ್ಧೆಯಲ್ಲಿ ಕೋಲಾರದ ಶ್ರೀಕರ್ ಅದ್ಭುತ ಪ್ರದರ್ಶನ ನೀಡಿ, ‘ಕೋಲಾರ ಅತ್ಯುತ್ತಮ ದೇಹದಾಢ್ಯ’ ಹಾಗೂ ‘ಮಿಸ್ಟರ್ ಕರ್ನಾಟಕ ಬೆಸ್ಟ್ ಪೋಸರ್’ ಟೈಟಲ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

  • 17 Aug 2026 10:58 AM (IST)

    ‘ವಂದೇ ಮಾತರಂ’ಗೆ ಅಗೌರವ ಆರೋಪ: ಕಾಂಗ್ರೆಸ್ ವಿರುದ್ಧ ರಾಯಚೂರಿನಲ್ಲಿ ಬಿಜೆಪಿ ಭಾರಿ ಪ್ರತಿಭಟನೆ

    ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ “ವಂದೇ ಮಾತರಂ” ಗೀತೆಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ, ರಾಯಚೂರಿನ ಅಂಬೇಡ್ಕರ್ ಸರ್ಕಲ್ ಬಳಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿ ಭಾರಿ ಪ್ರತಿಭಟನೆ ನಡೆಸಿದರು.

  • 17 Aug 2026 10:58 AM (IST)

    ಕಾರು-ಬೈಕ್ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಚಾಲಕ ಗಂಭೀರ!

    ಹೆಬ್ಬಾಳ-ಕೆ.ಆರ್.ಪುರಂ ಮುಖ್ಯರಸ್ತೆಯಲ್ಲಿ ಅತಿ ವೇಗವಾಗಿ ಬಂದ ಬೊಲೆನೊ ಕಾರು ಹಿಂದಿನಿಂದ ಬೈಕ್‌ಗೆ ಭೀಕರವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಪಲ್ಟಿಯಾದ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 17 Aug 2026 10:58 AM (IST)

    ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ: ತಲೆಮರೆಸಿಕೊಂಡಿದ್ದ ಆರೋಪಿ ಗೊಟ್ಟಿಗೆರೆ ಮಂಜ ಬಂಧನ!

    ಗೊಟ್ಟಿಗೆರೆ ಜಂಕ್ಷನ್‌ನಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ರಕ್ತಗಾಯಗೊಳಿಸಿ ಪರಾರಿಯಾಗಿದ್ದ ಆರೋಪಿ ಮಂಜುನಾಥ್ ಸಿ. ಅಲಿಯಾಸ್ ಗೊಟ್ಟಿಗೆರೆ ಮಂಜಣ್ಣನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ನಲ್ಲಿ ಬೇರೊಬ್ಬರ ಹೆಸರಿನಲ್ಲಿ ರೂಮ್ ಬುಕ್ ಮಾಡಿ ಅಡಗಿದ್ದಾಗ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ.

  • 17 Aug 2026 10:57 AM (IST)

    ನೆಲಮಂಗಲ ಅಪ್ಪ-ಮಗ ಅನುಮಾನಾಸ್ಪದ ಸಾವು!

    ಚಿಕ್ಕಬಾಣಾವರದಲ್ಲಿ ಅಪ್ಪ-ಮಗ ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದು, ಗಂಡ ಅಭಿನಂದನ್ ಮುಖದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ರಾತ್ರಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದ್ದು, ಹರಿಣಿ ತನ್ನ ಸ್ನೇಹಿತನಿಗೆ ಸಂಪರ್ಕದಲ್ಲಿದ್ದ ನಂಬರ್ ಆಧರಿಸಿ, ಆಕೆಯೇ ಕೊಲೆ ಮಾಡಿರುವ ಶಂಕೆಯಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

  • 17 Aug 2026 10:57 AM (IST)

    ವರದಾನದಿಗೆ ಹಾರಿದ ತಾಯಿ-ಮಗಳ ರಕ್ಷಣೆ; ಯುವಕರ ಸಮಯಪ್ರಜ್ಞೆಗೆ ಶ್ಲಾಘನೆ

    ಕೌಟುಂಬಿಕ ಕಲಹದಿಂದ ವರದಾನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ-ಮಗಳನ್ನು ಚಿಕ್ಕಮಾಕೊಪ್ಪದ ಯುವಕರಾದ ಸಾಹಿಲ್, ಸೋನು ಹಾಗೂ ಯಾಸಿನ್ ಸಾಹಸದಿಂದ ರಕ್ಷಿಸಿದ್ದಾರೆ. ಮಗಳ ಅಳು ಕೇಳಿ ಓಡಿಬಂದು ಜೀವ ಉಳಿಸಿದ ಈ ಮೂವರು ಮೀನುಗಾರ ಯುವಕರ ಮಾನವೀಯತೆಗೆ ಜಿಲ್ಲಾ ಪೊಲೀಸರು ಗೌರವ ಸಲ್ಲಿಸಿದ್ದಾರೆ.

  • 17 Aug 2026 10:06 AM (IST)

    ಆನ್​ಲೈನ್ ಪೂಜೆ ನೆಪದಲ್ಲಿ ಹಣ ಪೀಕುತ್ತಿದ್ದವರ ವಿರುದ್ಧ ದೂರು!

    ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಗಸ್ಟ್ 17ರ ನಾಗರಪಂಚಮಿ ಹಿನ್ನೆಲೆ, AI ವಿಡಿಯೋ ಬಳಸಿ ‘ಆನ್‌ಲೈನ್ ಪೂಜಾ ಸೇವೆ’ ಹೆಸರಿನಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಬುಕಿಂಗ್ ಆ್ಯಪ್ ಮೂಲಕ 751 ರೂ. ನೀಡಿ ಬುಕಿಂಗ್ ಮಾಡಿದರೆ ಪೂಜೆ ವಿಡಿಯೋ ಹಾಗೂ ಪ್ರಸಾದ ಕಳುಹಿಸುವುದಾಗಿ ಜಾಹೀರಾತು ನೀಡಲಾಗಿತ್ತು. ಈ ವಿಡಿಯೋಗೂ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಕಾರ್ಯನಿರ್ವಹಣಾಧಿಕಾರಿ, ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • 17 Aug 2026 10:01 AM (IST)

    ಹೋಟೆಲ್, ಮೆಡಿಕಲ್ ಮುಂಭಾಗ ಇನ್ಮುಂದೆ QR ಕೋಡ್!

    ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಹೋಟೆಲ್ ಹಾಗೂ ಫಾರ್ಮಾ ಮೆಡಿಕಲ್ ಸ್ಟೋರ್‌ಗಳ ಮುಂದೆ ಕ್ಯೂಆರ್ ಕೋಡ್ (QR Code) ಅಳವಡಿಸಲು ಮುಂದಾಗಿದ್ದೇವೆ. ಸಾರ್ವಜನಿಕರು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ದೂರು ಹಾಗೂ ತೊಂದರೆಗಳನ್ನು ನೇರವಾಗಿ ದಾಖಲಿಸಬಹುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

  • 17 Aug 2026 09:58 AM (IST)

    ಉಪಸಭಾಪತಿ ರೇಸ್: ಉಮಾಶ್ರೀ ಅಂತಿಮ?

    ರಾಜ್ಯ ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಇಂದು ಮಧ್ಯಾಹ್ನ 12 ಗಂಟೆಯೊಳಗೆ ಪ್ರಸ್ತಾಪ ಸಲ್ಲಿಸಲು ಗಡುವು ವಿಧಿಸಲಾಗಿದೆ. ಕಾಂಗ್ರೆಸ್‌ನಿಂದ ಹಿರಿಯ ನಾಯಕಿ ಉಮಾಶ್ರೀ ಅವರ ಹೆಸರನ್ನು ಪ್ರಸ್ತಾವಿಸಿ ಇಂದು ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆಯಿದೆ.

Published On - Aug 17,2026 9:57 AM

Follow Us