ಇಂಡಿಯಾ-ಭಾರತ ವಿವಾದ: ಈ ಕುರಿತು ಹೇಳಿಕೆ ನೀಡದಂತೆ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಇಂಡಿಯಾವನ್ನು ಇನ್ನುಮುಂದೆ ಭಾರತ ಎಂದು ಕರೆಯಬೇಕೆನ್ನುವ ವಿಚಾರ ಕಳೆದ ಎರಡು ದಿನಗಳಿಂದ ರಾಜಕೀಯ ಗದ್ದಲವನ್ನುಂಟು ಮಾಡಿದೆ. ಈ ವಿಚಾರವಾಗಿ ಯಾವುದೇ ರೀತಿಯ ಹೇಳಿಕೆಯನ್ನು ನೀಡದಿರಲು ಪ್ರಧಾನಿ ಮೋದಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ತಮ್ಮ ಸಚಿವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಕಳೆದ ಎರಡು ದಿನಗಳಿಂದ, ಪ್ರತಿಪಕ್ಷಗಳು ಈ ವಿಷಯದ ಬಗ್ಗೆ ಗೇಮ್‌ಪ್ಲಾನ್ ಮಾಡಲು ಎರಡು ಸಭೆಗಳನ್ನು ನಡೆಸಿವೆ.

ಇಂಡಿಯಾ-ಭಾರತ ವಿವಾದ: ಈ ಕುರಿತು ಹೇಳಿಕೆ ನೀಡದಂತೆ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ
ನರೇಂದ್ರ ಮೋದಿ

Updated on: Sep 07, 2023 | 11:18 AM

ಇಂಡಿಯಾ(India)ವನ್ನು ಇನ್ನುಮುಂದೆ ಭಾರತ(Bharat) ಎಂದು ಕರೆಯಬೇಕೆನ್ನುವ ವಿಚಾರ ಕಳೆದ ಎರಡು ದಿನಗಳಿಂದ ರಾಜಕೀಯ ಗದ್ದಲವನ್ನುಂಟು ಮಾಡಿದೆ. ಈ ವಿಚಾರವಾಗಿ ಯಾವುದೇ ರೀತಿಯ ಹೇಳಿಕೆಯನ್ನು ನೀಡದಿರಲು ಪ್ರಧಾನಿ ಮೋದಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ತಮ್ಮ ಸಚಿವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಕಳೆದ ಎರಡು ದಿನಗಳಿಂದ, ಪ್ರತಿಪಕ್ಷಗಳು ಈ ವಿಷಯದ ಬಗ್ಗೆ ಗೇಮ್‌ಪ್ಲಾನ್ ಮಾಡಲು ಎರಡು ಸಭೆಗಳನ್ನು ನಡೆಸಿವೆ.

ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚಿಸಬಹುದಾದ 9 ವಿಷಯಗಳ ಪಟ್ಟಿಗಳ ಬಗ್ಗೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರಪತಿ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಕರೆಯಲಾಗಿದ್ದು ಈ ಕುರಿತು ಕಾಂಗ್ರೆಸ್ ಕಿಡಿ ಕಾರಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ , ಸಂವಿಧಾನ ಒಂದನೇ ವಿಧಿಯಡಿ, ಭಾರತ, ಅದು ಇಂಡಿಯಾ, ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಈ ರಾಜ್ಯಗಳ ಒಕ್ಕೂಟ ಆಕ್ರಮಣಕ್ಕೆ ಒಳಗಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು.

ಎರಡು ದಿನಗಳ ಹಿಂದಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂಡಿಯಾ ಎಂದು ಹೇಳುವುದನ್ನು ಇನ್ನು ಬಿಡಿ, ಭಾರತ ಎಂದು ಹೇಳಿ ಎಂದು ಮನವಿ ಮಾಡಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: ಪ್ರೆಸಿಡೆಂಟ್ ಆಫ್ ಭಾರತ್ ಬಳಿಕ ಪ್ರೈಮ್ ಮಿನಿಸ್ಟರ್ ಆಫ್ ಭಾರತ್: ಮೋದಿ ಪ್ರವಾಸದ ಕುರಿತು ಸಂಬಿತ್ ಪಾತ್ರಾ ಪೋಸ್ಟ್​

ಅದಾದ ಬಳಿಕ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಧಾನಿ ಮೋದಿಯನ್ನು ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಬರೆಯಲಾಗಿತ್ತು. ಈ ಕುರಿತು ಕೂಡ ಸಾಕಷ್ಟು ಗೊಂದಲಗಳೆದ್ದಿವೆ.

ಬಿಜೆಪಿ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಇಂಡಿಯಾ ಬದಲು ಭಾರತ ಪದವನ್ನು ಬಳಸಬೇಕೆಂದು ಇಡೀ ದೇಶ ಒತ್ತಾಯಿಸುತ್ತಿದೆ ಎಂದರು, ಇಂಡಿಯಾ ಎಂಬ ಪದವು ಬ್ರಿಟಿಷರು ನಮಗೆ ನೀಡಿದ ನಿಂದನೆಯಾಗಿದೆ ಆದರೆ ‘ಭಾರತ್’ ಎಂಬ ಪದವು ನಮ್ಮ ಸಂಸ್ಕೃತಿಯ ಸಂಕೇತವಾಗಿದೆ ಎಂದು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us