ಪಾಕಿಸ್ತಾನದಂತೆ ಭಾರತ ದಲ್ಲಾಳಿ ರಾಷ್ಟ್ರವಲ್ಲ; ಇರಾನ್ ಯುದ್ಧದ ಮಧ್ಯಸ್ಥಿಕೆ ಕುರಿತು ಸಚಿವ ಜೈಶಂಕರ್ ವ್ಯಂಗ್ಯ

ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಅನೇಕ ದೇಶಗಳು ಮಧ್ಯಸ್ಥಿಕೆ ವಹಿಸಲು ಮುಂದಾಗಿವೆ. ಅದರಲ್ಲಿ ಪಾಕಿಸ್ತಾನ ಕೂಡ ಒಂದು ಎಂಬ ವದಂತಿಗಳು ಹರಿದಾಡುತ್ತಿವೆ. ಇಂದು ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳಿಂದ ಈ ಬಗ್ಗೆ ಪ್ರಸ್ತಾಪ ಬಂದಿತು. ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಭಾರತ ಏಕೆ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂಬ ಕುರಿತು ವಿವರಿಸಿದ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತವು ಪಾಕ್‌ನಂತೆ "ದಲ್ಲಾಳಿ" (ಬ್ರೋಕರ್) ಅಲ್ಲ ಎಂದು ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಂತೆ ಭಾರತ ದಲ್ಲಾಳಿ ರಾಷ್ಟ್ರವಲ್ಲ; ಇರಾನ್ ಯುದ್ಧದ ಮಧ್ಯಸ್ಥಿಕೆ ಕುರಿತು ಸಚಿವ ಜೈಶಂಕರ್ ವ್ಯಂಗ್ಯ
S Jaishankar
Image Credit source: PTI

Updated on: Mar 25, 2026 | 10:14 PM

ನವದೆಹಲಿ,ಮಾರ್ಚ್ 25: ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧದಿಂದ ಜಗತ್ತಿನ ನಾನಾ ದೇಶಗಳು ಕಂಗೆಟ್ಟು ಕುಳಿತಿವೆ. ಕದನವಿರಾಮ ಘೋಷಣೆಯಾಗಲು ಹಲವು ದೇಶಗಳು ಪ್ರಯತ್ನ ಮಾಡುತ್ತಿವೆ. ಇದರ ನಡುವೆ ಇರಾನ್- ಇಸ್ರೇಲ್- ಅಮೆರಿಕದ ಯುದ್ಧದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಯತ್ನವನ್ನು ಭಾರತ ಅಪಹಾಸ್ಯ ಮಾಡಿದೆ. ಇಂದು ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಪಾಕಿಸ್ತಾನವನ್ನು “ದಲ್ಲಾಳಿ ರಾಷ್ಟ್ರ” (ಬ್ರೋಕರ್) ಎಂದು ಅಪಹಾಸ್ಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಭಾರತವು ಪಾಕಿಸ್ತಾನದಂತೆ ಮಧ್ಯವರ್ತಿ ಅಥವಾ ದಲ್ಲಾಳಿ ರಾಷ್ಟ್ರವಾಗಿ ಕಾರ್ಯನಿರ್ವಹಿಸುವುದಿಲ್ಲ” ಎಂದು ಸಭೆಯಲ್ಲಿ ಸಚಿವ ಜೈಶಂಕರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಪಾಕಿಸ್ತಾನ ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ಎಲ್​ಪಿಜಿ ಬಿಕ್ಕಟ್ಟು ಎದುರಿಸಲು ಹರ್ದೀಪ್ ಪುರಿ ಮತ್ತು ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ

ಇಲ್ಲಿಯವರೆಗೆ 4,25,000 ಭಾರತೀಯರನ್ನು ಇರಾನ್‌ನಿಂದ ಮರಳಿ ಕರೆತರಲಾಗಿದೆ ಎಂದು ಇಂದಿನ ಸರ್ವಪಕ್ಷ ಸಭೆಯಲ್ಲಿ ತಿಳಿಸಲಾಯಿತು. ಇರಾನ್‌ನಲ್ಲಿ ಉಳಿದಿರುವವರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವ ಜೈಶಂಕರ್ ತಿಳಿಸಿದ್ದಾರೆ ಎನ್ನಲಾಗಿದೆ.

ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳು 15 ವರ್ಷಗಳಿಗೂ ಹೆಚ್ಚು ಕಾಲ ಜಾರಿಯಲ್ಲಿವೆ ಮತ್ತು ಅದು ಭಾರತವು ತನ್ನ ಇಂಧನ ಅಗತ್ಯಗಳನ್ನು ಭದ್ರಪಡಿಸಿಕೊಳ್ಳಲು ಇರಾನಿನ ತೈಲವನ್ನು ಖರೀದಿಸುವುದನ್ನು ತಡೆಯಲಿಲ್ಲ ಎಂದು ಸಭೆಯಲ್ಲಿ ಕೇಂದ್ರ ಸರ್ಕಾರವು ಹೇಳಿದೆ ಎನ್ನಲಾಗಿದೆ. ಹಾಗೇ,
ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಉಳಿದಿದೆ ಎಂದು ಸರ್ಕಾರ ಒತ್ತಿ ಹೇಳಿತು.

ಇದನ್ನೂ ಓದಿ: Iran War: ಟ್ರಂಪ್​ಗೆ ಸೆಡ್ಡು ಹೊಡೆದ ಟೆಹ್ರಾನ್; ಯುದ್ಧ ನಿಲ್ಲಿಸಲು 5 ಷರತ್ತು ವಿಧಿಸಿದ ಇರಾನ್

ಭಾರತವು ಮಧ್ಯಪ್ರಾಚ್ಯದಾದ್ಯಂತ ಸಮತೋಲಿತ ಸಂಬಂಧಗಳನ್ನು ಕಾಯ್ದುಕೊಳ್ಳುತ್ತದೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಮತ್ತು ಇರಾನ್‌ನೊಂದಿಗೆ ನಿರಂತರ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us