ಭಾರತ-ಪಾಕಿಸ್ತಾನ ಉದ್ವಿಗ್ನತೆ: ಆರೋಗ್ಯ ಇಲಾಖೆ ಅಲರ್ಟ್, ಜೆಪಿ ನಡ್ಡಾ ಮಹತ್ವದ ಸಭೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ತುರ್ತು ಆರೋಗ್ಯ ಸೇವೆಗಳ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಐಸಿಯುಗಳು, ಔಷಧಿಗಳು, ರಕ್ತ ಮತ್ತು ಇತರ ವೈದ್ಯಕೀಯ ಸಾಮಗ್ರಿಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಮನ್ವಯ ಸಾಧಿಸಲು ಸೂಚಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರಮುಖ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ಗಳನ್ನು ನಡೆಸಲಾಗಿದೆ.

ನವದೆಹಲಿ, ಮೇ 09: ಭಾರತ ಮತ್ತು ಪಾಕಿಸ್ತಾನ (India-Pakistan) ನಡುವೆ ಯುದ್ಧ ಉದ್ವಿಗ್ನತೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ (JP Nadda) ಅವರು ಶುಕುವಾರ (ಮೇ.09) ಆರೋಗ್ಯ ಸಚಿವಾಲಯದ (Ministry of Health and Family Welfare) ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
ಈ ವೇಳೆ ಹಿರಿಯ ಅಧಿಕಾರಿಗಳು ತುರ್ತು ಸಂದರ್ಭ ನಿರ್ವಹಿಸಲು ವೈದ್ಯಕೀಯ ಸನ್ನದ್ಧತೆಯ ಪ್ರಸ್ತುತ ಸ್ಥಿತಿಯನ್ನು ಸಚಿವರಿಗೆ ತಿಳಿಸಿದರು. ಆಂಬ್ಯುಲೆನ್ಸ್ಗಳ ನಿಯೋಜನೆ, ವೈದ್ಯಕೀಯ ಉಪಕರಣಗಳು, ಔಷಧಿಗಳು, ರಕ್ತದ ಪಾಕೇಟ್ ಮತ್ತು ಅದಕ್ಕೆ ಬೇಕಾದ ವಸ್ತುಗಳ ಪೂರೈಕೆ ಸೇರಿದಂತೆ ವೈದ್ಯಕೀಯ ಸರಬರಾಜುಗಳ ಸಮರ್ಪಕವಾಗಿವೆ ಎಂದು ತಿಳಿಸಿದರು.
ಹಾಗೇ, ಆಸ್ಪತ್ರೆಗಳಲ್ಲಿನ ಹಾಸಿಗೆಗಳು (ಬೆಡ್), ಐಸಿಯು ಕಾರ್ಯನಿರ್ವಹಣೆ, ಸುಧಾರಿತ ಮೊಬೈಲ್ ಟ್ರಾಮಾ ಕೇರ್ ಸೆಂಟರ್ ಇತ್ಯಾದಿಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಿದರು. ಮತ್ತು ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿನ ಅಗತ್ಯ ಔಷಧಗಳ ಲಭ್ಯತೆ, ರಕ್ತ, ಆಮ್ಲಜನಕ, ಆರೈಕೆ ಕಿಟ್ ಗಳು ಸಮರ್ಪಕವಾಗಿವೆ ಎಂದು ಹೇಳಿದರು.
ನವದೆಹಲಿಯ ಏಮ್ಸ್ ಮತ್ತು ಇತರ ಕೇಂದ್ರ ಸರ್ಕಾರಿ ಆಸ್ಪತ್ರೆಗಳ ತುರ್ತು ಸಂದರ್ಭವನ್ನು ಎದುರಿಸಲು ವೈದ್ಯರು ಮತ್ತು ದಾದಿಯರು ಸಿದ್ದಗೊಂಡಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾಡಳಿತ, ಸಶಸ್ತ್ರ ಪಡೆಗಳು ಮತ್ತು ವೈದ್ಯರು, ದಾದಿಯರು, ಅರೆವೈದ್ಯರು, ಖಾಸಗಿ ವಲಯದ ಆಸ್ಪತ್ರೆಗಳು, ದತ್ತಿ ಸಂಸ್ಥೆಗಳು ಇತ್ಯಾದಿಗಳ ಪ್ರಾದೇಶಿಕ ಸಂಘಗಳೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸಚಿವ ಜೆಪಿ ನಡ್ಡಾ ಸೂಚಿಸಿದರು.
AIIMS, PGIMER, JIPMER ಮತ್ತು ಇತರ ಪ್ರಮುಖ ಆಸ್ಪತ್ರೆಗಳಲ್ಲಿ ವಿಪತ್ತು ಸನ್ನದ್ಧತೆಗಾಗಿ ಮಾಕ್ ಡ್ರಿಲ್ ನಡೆಸಲಾಗಿದೆ. ಹಾಗೇ, ಕೇಂದ್ರ ಮತ್ತು ರಾಜ್ಯಗಳೊಂದಿಗೆ ಸುಲಭ ಸಮನ್ವಯಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳೊಂದಿಗೆ ಸರಭೆ ಸಭೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಮಾಹಿತಿ ನೀಡಿದರು.
ಇದನ್ನೂ ಓದಿ: ಜಮ್ಮು, ಪಂಜಾಬ್, ರಾಜಸ್ಥಾನದಲ್ಲಿ ಮತ್ತೆ ಪಾಕಿಸ್ತಾನದಿಂದ ಡ್ರೋನ್ ದಾಳಿ; ಭಾರತೀಯ ಸೇನೆಯಿಂದ ಪ್ರತ್ಯುತ್ತರ
ಎಲ್ಲ ರೀತಿಯ ವೈದ್ಯಕೀಯ ವ್ಯವಸ್ಥೆಗಳು ಸಮರ್ಪಕವಾಗಿ ಸಜ್ಜುಗೊಳಿಸಿ. ಮತ್ತು ಎಲ್ಲ ಸಮಯದಲ್ಲೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಆರೋಗ್ಯ ಸಚಿವರು ನಿರ್ದೇಶನ ನೀಡಿದರು. ತುರ್ತು ಆರೋಗ್ಯ ಸೇವೆಗಾಗಿ ಎಲ್ಲ ರಾಜ್ಯ ಸರ್ಕಾರಗಳೊಂದಿಗೆ, ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ, ವಿಶೇಷವಾಗಿ ಗಡಿ ರಾಜ್ಯಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ. ಸಚಿವಾಲಯದಲ್ಲಿ 24×7 ಕಾರ್ಯನಿರ್ವಹಿಸುತ್ತಿರುವ ಕಮಾಂಡ್ ಸೆಂಟರ್ಗಳ ಮೇಲ್ವಿಚಾರಣೆ ನಡೆಸಿ. ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಎಲ್ಲ ಪ್ರದೇಶಗಳಲ್ಲಿ ನಿರಂತರ ಆರೋಗ್ಯ ಸೇವೆಗಳು ಮತ್ತು ತುರ್ತು ಪ್ರತಿಕ್ರಿಯೆಯನ್ನು ಒದಗಿಸಲು ಬದ್ಧವಾಗಿರಿ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 pm, Fri, 9 May 25