ಭಾರತ ಪಾಕಿಸ್ತಾನ ಉದ್ವಿಗ್ನತೆ: ಕಳೆದ 12 ಗಂಟೆ ಅವಧಿಯಲ್ಲಿ ಏನೇನಾಯ್ತು? ಇಲ್ಲಿವೆ ಮುಖ್ಯಾಂಶಗಳು
ಭಾರತ ಮತ್ತು ಪಾಕಿಸ್ತಾನ ನಡುವಣ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು ಪರಸ್ಪರ ದಾಳಿ ಮುಂದುವರೆದಿದೆ. ಭಾರತದ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಡ್ರೋನ್ ದಾಳಿ ಹಾಗೂ ಗುಂಡಿನ ದಾಳಿ ನಡೆದಿದ್ದರೆ, ಭಾರತೀಯ ಸೇನೆ ಸೂಕ್ತತೆ ತಿರುಗೇಟು ನೀಡಿದೆ. ಕಳೆದ 12 ಗಂಟೆ ಅವಧಿಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಹೈಲೈಟ್ಸ್ ಇಲ್ಲಿದೆ.

ಸಾಂದರ್ಭಿಕ ಚಿತ್ರ
ನವದೆಹಲಿ, ಮೇ 10: ಪಾಕಿಸ್ತಾನ ಸೇನೆ ಭಾರತದ (India) ಮೇಲೆ ನಿರಂತರವಾಗಿ ಡ್ರೋನ್ ಮತ್ತು ಕ್ಷಿಪಣಿ ದಾರಿಗಳನ್ನು ನಡೆಸುತ್ತಿದ್ದು, ಅವುಗಳನ್ನು ಯಶಸ್ವಿಯಾಗಿ ತಟಸ್ಥ ಗೊಳಿಸುವಲ್ಲಿ ಭಾರತೀಯ ಸೇನೆ (Indian Army) ಸಫಲವಾಗಿದೆ. ಅಷ್ಟೇ ಅಲ್ಲದೆ, ಭಾರತೀಯ ಸೇನೆ ಕೂಡ ಪಾಕಿಸ್ತಾನದ ಪ್ರಮುಖ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಶನಿವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಪಠಾಣ್ಕೋಟ್ ಮತ್ತು ಶ್ರೀನಗರ ವಾಯುನೆಲೆಗಳಲ್ಲಿ ಭಾರಿ ಸ್ಫೋಟಗಳ ಶಬ್ದ ಕೇಳಿಬಂದಿದೆ. ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ನಿರಂತರ ಗುಂಡಿನ ಚಕಮಕಿಯ ನಡುವೆ ಕಳೆದ 12 ಗಂಟೆಗಳಲ್ಲಿ ಏನಾಯಿತು ಎಂಬ ಮಾಹಿತಿ ಇಲ್ಲಿದೆ.
- ಪಾಕಿಸ್ತಾನದ ಕನಿಷ್ಠ 4 ವಾಯುನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ.
- ಜಮ್ಮು ಮತ್ತು ಕಾಶ್ಮೀರದ ವಾಯುನೆಲೆಗಳಲ್ಲಿ ಭಾರಿ ಸ್ಫೋಟಗಳ ಶಬ್ದ ಕೇಳಿಬಂದಿದೆ.
- ಜಮ್ಮು ಬಳಿ ಪಾಕಿಸ್ತಾನದ ಡ್ರೋನ್ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
- ಶ್ರೀನಗರ, ಜಮ್ಮು, ಫಿರೋಜ್ಪುರ, ಪಠಾಣ್ಕೋಟ್, ಜೈಸಲ್ಮೇರ್, ಬಾರ್ಮರ್ ಮತ್ತು ಭುಜ್ ಸೇರಿದಂತೆ 26 ಸ್ಥಳಗಳಲ್ಲಿ ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತ ವಿಫಲಗೊಳಿಸಿದೆ.
- ಪಂಜಾಬ್ನ ಅಮೃತಸರದಲ್ಲಿ ಭಾರತೀಯ ವಾಯು ರಕ್ಷಣಾ ಪಡೆಗಳು ಹಲವಾರು ಪಾಕಿಸ್ತಾನಿ ಡ್ರೋನ್ಗಳನ್ನು ತಟಸ್ಥಗೊಳಿಸಿ ಹೊಡೆದುರುಳಿಸಿವೆ.
- ಈ ತಿಂಗಳ 15 ರವರೆಗೆ ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
- ಪಾಕಿಸ್ತಾನವು ಐಎಂಎಫ್ ಸಾಲದ ಹಣವನ್ನು ಗಡಿಯಾಚೆಗಿನ ಭಯೋತ್ಪಾದನೆಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಭಾರತ ಆರೋಪಿಸಿದೆ.
- ಪಂಜಾಬ್ ಸರ್ಕಾರವು ಮಾದಕ ದ್ರವ್ಯ ಭಯೋತ್ಪಾದನೆಯ ಮೇಲೆ ನಿಗಾ ಇಡಲು ರಾಜ್ಯದ ಆರು ಗಡಿ ಜಿಲ್ಲೆಗಳಲ್ಲಿ ನಿಯೋಜಿಸಲು 9 ಡ್ರೋನ್ ನಿಗ್ರಹ ಉಪಕರಣಗಳನ್ನು ಖರೀದಿಸಲಿದೆ.
- ಭಾರತದ ಪಶ್ಚಿಮ ಗಡಿಗಳಲ್ಲಿ ಪಾಕಿಸ್ತಾನದ ಡ್ರೋನ್ ದಾಳಿ ಮತ್ತು ಇತರ ದಾಳಿಗಳು ಮುಂದುವರೆದಿವೆ.
- ಇಂದು ಬೆಳಿಗ್ಗೆ ಸುಮಾರು 5 ಗಂಟೆಗೆ, ಅಮೃತಸರದ ಖಾಸಾ ಕ್ಯಾಂಟ್ ಮೇಲೆ ಹಾರುತ್ತಿದ್ದ ಶಸ್ತ್ರಸಜ್ಜಿತ ಡ್ರೋನ್ಗಳನ್ನು ಭಾರತೀಯ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ