ಪೊಲೀಸರು ನನ್ನನ್ನು ಅಪಹರಿಸಿ ಮಸ್ಸೂರಿಯಲ್ಲಿ ಬಿಟ್ಟರು; ಜಂತರ್ ಮಂತರ್‌ನಲ್ಲಿ ಆಹಾರ ವಿತರಿಸುತ್ತಿದ್ದ ವ್ಯಕ್ತಿ ಆರೋಪ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಿಗೆ ಆಹಾರ ವಿತರಿಸುತ್ತಿದ್ದ ಜುನೈದ್ ಎಂಬ ವ್ಯಕ್ತಿಯನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದು, ಕಣ್ಣಿಗೆ ಬಟ್ಟೆ ಕಟ್ಟಿ ವಿಚಾರಣೆ ನಡೆಸಿದ್ದಲ್ಲದೆ, ಉತ್ತರಾಖಂಡದ ಮುಸ್ಸೂರಿಯಲ್ಲಿ ತಂದು ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ಮಾತನಾಡಿರುವ ಜುನೈದ್, ತಾವು ನಾಯಿ ಕಡಿತಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಬರುತ್ತಿದ್ದಾಗ, ದೆಹಲಿ ಪೊಲೀಸರು ಎಂದು ಹೇಳಿಕೊಂಡ ವ್ಯಕ್ತಿಗಳು ತಮ್ಮನ್ನು ಮತ್ತು ತಮ್ಮ ಸ್ನೇಹಿತನನ್ನು ತಡೆದರು ಎಂದು ಹೇಳಿದ್ದಾರೆ.

ಪೊಲೀಸರು ನನ್ನನ್ನು ಅಪಹರಿಸಿ ಮಸ್ಸೂರಿಯಲ್ಲಿ ಬಿಟ್ಟರು; ಜಂತರ್ ಮಂತರ್‌ನಲ್ಲಿ ಆಹಾರ ವಿತರಿಸುತ್ತಿದ್ದ ವ್ಯಕ್ತಿ ಆರೋಪ
Junaid
Image Credit source: x

Updated on: Jul 27, 2026 | 4:32 PM

ನವದೆಹಲಿ, ಜುಲೈ 27: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ (Delhi Protest) ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಉಚಿತವಾಗಿ ಆಹಾರ ವಿತರಿಸುತ್ತಿದ್ದ ಸ್ವಯಂಸೇವಕರೊಬ್ಬರನ್ನು ದೆಹಲಿ ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದು, ದೆಹಲಿಯಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಉತ್ತರಾಖಂಡದ ಮಸ್ಸೂರಿಯಲ್ಲಿ ತಂದು ಬಿಟ್ಟಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಭಟನಾಕಾರರ ತಂಡದವರು ಮಾಹಿತಿ ಕಲೆಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಕೂಡ ಅಪ್​ಲೋಡ್ ಮಾಡಿದ್ದಾರೆ.

ಜುನೈದ್ ನೀಡಿದ ಮಾಹಿತಿಯ ಪ್ರಕಾರ, ಅವರನ್ನು ಇಡೀ ರಾತ್ರಿ ಕಣ್ಣಿಗೆ ಬಟ್ಟೆ ಕಟ್ಟಿ ಇರಿಸಲಾಗಿತ್ತು. ಮರುದಿನ ಬೆಳಿಗ್ಗೆ ಅಧಿಕಾರಿಯೊಬ್ಬರು, “ಆಹಾರ ವಿತರಣೆಗೆ ಹಣಕಾಸಿನ ನೆರವು (ಫಂಡಿಂಗ್) ಎಲ್ಲಿಂದ ಸಿಗುತ್ತಿದೆ ಮತ್ತು ಇಷ್ಟೊಂದು ಪ್ರಮಾಣದ ಆಹಾರವನ್ನು ಹೇಗೆ ನಿರ್ವಹಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ. ವಿಚಾರಣೆಯ ವೇಳೆ, ಪ್ರತಿಭಟನಾನಿರತರಿಗೆ ಸಿಗುವ ಆಹಾರ ಮತ್ತು ನೀರು ಬೆಂಬಲಿಗರಿಂದ ಬರುವ ದೇಣಿಗೆ ಮೂಲಕ ಸಿಗುತ್ತಿದೆ ಎಂದು ಜುನೈದ್ ತಿಳಿಸಿದ್ದಾರೆ. ನಂತರ ಪೊಲೀಸರು ಅವರನ್ನು ಮಸ್ಸೂರಿಯಲ್ಲಿ ಬಿಟ್ಟು ಬಂದಿದ್ದು, ಶನಿವಾರ ಜುನೈದ್ ಕ್ಯಾಬ್‌ ಮಾಡಿಕೊಂಡು ದೆಹಲಿಗೆ ಮರಳಿದ್ದಾರೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ಅಂತ್ಯ: ಜಂತರ್ ಮಂತರ್ ಸ್ವಚ್ಛತೆಗೆ 500ಕ್ಕೂ ಹೆಚ್ಚು ಎನ್‌ಡಿಎಂಸಿ ಸಿಬ್ಬಂದಿ ನಿಯೋಜನೆ

ನಾಯಿ ಕಚ್ಚಿದ್ದರಿಂದ ಜುನೈದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಹೋಗುತ್ತಿದ್ದಾಗ ದೆಹಲಿ ಪೊಲೀಸರು ಎಂದು ಹೇಳಿಕೊಂಡ ವ್ಯಕ್ತಿಗಳು ಅವರನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅವರನ್ನು ನಗರದ ಯಾವುದೇ ಪೊಲೀಸ್ ಠಾಣೆಗೆ ಕರೆದೊಯ್ಯುವ ಬದಲು, ಬೇರೆಡೆ ವಿಚಾರಣೆ ನಡೆಸಿ, ಬಳಿಕ ಅವರನ್ನು ರಾತ್ರೋರಾತ್ರಿ ಉತ್ತರಾಖಂಡದ ಬೆಟ್ಟದ ಪ್ರದೇಶವಾದ ಮಸ್ಸೂರಿಯಲ್ಲಿ ನಿರ್ಜನ ಸ್ಥಳವೊಂದರಲ್ಲಿ ಬಿಟ್ಟು ಪೊಲೀಸರು ಹಿಂತಿರುಗಿದ್ದಾರೆ ಎಂದು ಆರೋಪಿಸಲಾಗಿದೆ.


ತಮ್ಮ ಬಳಿಯಿದ್ದ ಮೊಬೈಲ್ ಫೋನ್ ಮತ್ತು ಹಣವನ್ನು ಪೊಲೀಸರು ಕಸಿದುಕೊಂಡಿದ್ದರಿಂದ ತಮಗೆ ತಕ್ಷಣಕ್ಕೆ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಮತ್ತು ವಾಪಸ್ ಬರಲು ತೊಂದರೆಯಾಯಿತು ಎಂದು ಜುನೈದ್ ದೂರಿದ್ದಾರೆ.

ಪ್ರತಿಭಟನೆ ಹತೋಟಿಗೆ ಹುನ್ನಾರ:

ಪ್ರತಿಭಟನಾಕಾರರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಅಥವಾ ಆಹಾರ-ನೀರು ಸಿಗದಂತೆ ತಡೆದು, ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಇಂತಹ ಹಾದಿ ತಪ್ಪಿಸುವ ಮತ್ತು ಬೆದರಿಸುವ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಪ್ರತಿಭಟನಾ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ನೀಟ್ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶನ: ಯುವತಿ ವಿರುದ್ಧ FIR

ಆದರೆ, ದೆಹಲಿ ಪೊಲೀಸರು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಸ್ವಯಂಸೇವಕರನ್ನು ಬಲವಂತವಾಗಿ ಕರೆದೊಯ್ದು ಮಸ್ಸೂರಿಯಲ್ಲಿ ಬಿಡಲಾಗಿದೆ ಎಂಬುದು ಸಂಪೂರ್ಣ ಆಧಾರರಹಿತ ಎಂದು ಹೇಳಿದ್ದಾರೆ. ಈ ಘಟನೆಯ ಕುರಿತು ವಿದ್ಯಾರ್ಥಿ ಪ್ರತಿಭಟನಾಕಾರರ ಗುಂಪು ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us