ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರಾ ಬಿಜೆಪಿ ನಾಯಕ ಅಣ್ಣಾಮಲೈ?
ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಹೊಸ ಪಕ್ಷ ಅಥವಾ 'ಜನಶಕ್ತಿ ಆಂದೋಲನ' ಆರಂಭಿಸುವ ಸುಳಿವು ನೀಡಿದ್ದಾರೆ. ಕೇಂದ್ರ ನೀತಿಗಳ ಭಿನ್ನಾಭಿಪ್ರಾಯ, ಎಐಎಡಿಎಂಕೆ ಜೊತೆಗಿನ ಮೈತ್ರಿ ಬಿರುಕು ಮತ್ತು ನಾಯಕತ್ವ ಬದಲಾವಣೆಗಳು ಇದಕ್ಕೆ ಕಾರಣ. 'ಮಕ್ಕಳ್ ಶಕ್ತಿ ಇಯಕ್ಕಂ' ಹೆಸರಿನಲ್ಲಿ ಜನರೊಂದಿಗೆ ನೇರವಾಗಿ ಬೆರೆಯುವ ಈ ನಡೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಚೆನ್ನೈ, ಜೂನ್ 1: ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗುವ ಮುನ್ಸೂಚನೆ ದೊರೆತಿದೆ. ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ(K Annamalai) ಹೊಸ ಪಕ್ಷ ಕಟ್ಟಲು ಸಿದ್ಧತೆ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಮಾನ ಮನಸ್ಕ ಜನರನ್ನು ಒಗ್ಗೂಡಿಸುವುದು ಮತ್ತು ತಳಮಟ್ಟದಲ್ಲಿ ಬಲಿಷ್ಠ ಸ್ವಯಂಸೇವಕರ ಪಡೆಯನ್ನು ನಿರ್ಮಿಸುವುದು ಈ ಆಂದೋಲನದ ಮುಖ್ಯ ಉದ್ದೇಶ ಎನ್ನಲಾಗಿದೆ. ಈ ಹೊಸ ಚಳವಳಿಗೆ “ಮಕ್ಕಳ್ ಶಕ್ತಿ ಇಯಕ್ಕಂ” (ಜನಶಕ್ತಿ ಆಂದೋಲನ) ಎಂದು ಹೆಸರಿಡಬಹುದು ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಕೇಂದ್ರದ ನೀತಿ ವಿರುದ್ಧವೇ ಧ್ವನಿ ಎತ್ತಿದ್ದ ಅಣ್ಣಾಮಲೈ
ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ಕುರಿತು ಉಂಟಾದ ಭಿನ್ನಾಭಿಪ್ರಾಯಗಳ ಬೆನ್ನಲ್ಲೇ ಅಣ್ಣಾಮಲೈ ಅವರ ಈ ಹೊಸ ನಡೆ ತೀವ್ರ ಕುತೂಹಲ ಮೂಡಿಸಿದೆ.
ವಿದ್ಯಾರ್ಥಿಗಳ ಪರ ನಿಲುವು: ಸಿಬಿಎಸ್ಇ (CBSE) ಶಾಲೆಗಳಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯನ್ನು ಕಡ್ಡಾಯಗೊಳಿಸಿ ಇತ್ತೀಚೆಗೆ ಹೊರಡಿಸಲಾದ ಆದೇಶವನ್ನು ಹಿಂಪಡೆಯಬೇಕೆಂದು ಅಣ್ಣಾಮಲೈ ಬಹಿರಂಗವಾಗಿ ಒತ್ತಾಯಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಟೀಕೆ: ಈ ಕಡ್ಡಾಯ ನಿಯಮವು ತಮಿಳುನಾಡಿನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಮಾನಸಿಕ ಒತ್ತಡ ಉಂಟುಮಾಡುತ್ತದೆ ಎಂದು ಆಕ್ಷೇಪಿಸಿ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕೇಂದ್ರದ ನಿರ್ಧಾರವನ್ನು ಮುಕ್ತವಾಗಿ ಟೀಕಿಸಿದ್ದರು.
ತಮಿಳುನಾಡು ಬಿಜೆಪಿಯಲ್ಲಿ ಅಣ್ಣಾಮಲೈ ಹಾದಿ
ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2020ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದರು. ಆಡಳಿತದ ಶೈಲಿ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದಾಗಿ ಅವರು 2021ರಲ್ಲಿ ಎಲ್ ಮುರುಗನ್ ನಂತರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಪಕ್ಷದ ಪುನರುಜ್ಜೀವನ: 2021ಎಇಂದ 2025ರವರೆಗೆ ಪಕ್ಷ ಮುನ್ನಡೆಸಿದ ಅಣ್ಣಾಮಲೈ, ತಮ್ಮ ಆಕ್ರಮಣಕಾರಿ ಭಾಷಣ ಶೈಲಿ ಮೂಲಕತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ರಂಗು ತಂದಿದ್ದರು. ಇವರ ದೃಢ ನಿಲುವುಗಳಿಂದಾಗಿ ಕೇಂದ್ರ ನಾಯಕತ್ವವೂ ಇವರ ಧ್ವನಿಗೆ ವಿಶೇಷ ಮನ್ನಣೆ ನೀಡಿತ್ತು.
ಮೈತ್ರಿಯಲ್ಲಿ ಬಿರುಕು ಮತ್ತು ನಾಯಕತ್ವ ಬದಲಾವಣೆ: ಆದರೆ, ತಮಿಳುನಾಡಿನ ದ್ರಾವಿಡ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಮಾಜಿ ಸಿಎಂ ಜೆ. ಜಯಲಲಿತಾ ಅವರ ಕುರಿತಾದ ಇವರ ಕೆಲವು ವಿವಾದಾತ್ಮಕ ಹೇಳಿಕೆಗಳು ಮಿತ್ರಪಕ್ಷವಾದ ಎಐಎಡಿಎಂಕೆ (AIADMK) ಅನ್ನು ಕೆರಳಿಸಿತ್ತು. ಇದರಿಂದ ಮೈತ್ರಿ ಮುರಿದುಬಿದ್ದು, ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟ ಭರ್ಜರಿ ಜಯ ಗಳಿಸಿತ್ತು.
ಇತ್ತೀಚಿನ ಬೆಳವಣಿಗೆ: ತಮಿಳುನಾಡಿನಲ್ಲಿ ಮತ್ತೆ ಮೈತ್ರಿ ನವೀಕರಿಸಲು ಮುಂದಾದಾಗ, ಎಐಎಡಿಎಂಕೆ ಮುಖ್ಯಸ್ಥ ಇ. ಪಳನಿಸ್ವಾಮಿ ಅವರು ಬಿಜೆಪಿ ರಾಜ್ಯ ನಾಯಕತ್ವವನ್ನು ಬದಲಾಯಿಸಬೇಕೆಂಬ ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಅಣ್ಣಾಮಲೈ ಅವರ ಬದಲಿಗೆ ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಘಟಕದ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಇದುವರೆಗೆ ಲೋಕಸಭೆ ಅಥವಾ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸದ ಅಣ್ಣಾಮಲೈ, ಈಗ ನೇರವಾಗಿ ಜನರ ನಡುವೆ ಹೋಗಿ ಸಂಘಟನೆ ಕಟ್ಟಲು ‘ಜನಶಕ್ತಿ ಆಂದೋಲನ’ದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





