
ಗುವಾಹಟಿ, ಮೇ 2: ಅಸ್ಸಾಂ ವಿಧಾನಸಭಾ ಚುನಾವಣೆಯ (Assam Assembly Elections) ಕಾಂಗ್ರೆಸ್ ಪಕ್ಷದ ಹಿರಿಯ ವೀಕ್ಷಕರಾದ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್, ಭೂಪೇಶ್ ಬಘೇಲ್ ಮತ್ತು ಜಿತೇಂದ್ರ ಸಿಂಗ್ ಇಂದು ಅಸ್ಸಾಂನಲ್ಲಿ ಮೈತ್ರಿಕೂಟದ ಪಾಲುದಾರರೊಂದಿಗೆ ಸಭೆ ನಡೆಸಿದರು. ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಅಸ್ಸಾಂನ ಇತರ 5 ಪಕ್ಷಗಳಾದ ರೈಜೋರ್ ದಳ, ಅಸ್ಸಾಂ ರಾಷ್ಟ್ರೀಯ ಪರಿಷತ್ (AJP), ಸಿಪಿಐಎಂ (CPIM), ಎಪಿಎಚ್ಎಲ್ಸಿ (APHLC) ಮತ್ತು ಸಿಪಿಐಎಂಎಲ್ (CPIML) ಜೊತೆ ಮೈತ್ರಿ ಮಾಡಿಕೊಂಡಿದೆ.
ಈ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ತಳ್ಳಿಹಾಕಿದರು. “ಅಸ್ಸಾಂನಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ, ಒಗ್ಗಟ್ಟಾಗಿದೆ ಮತ್ತು ಆತ್ಮವಿಶ್ವಾಸದಿಂದ ಕೂಡಿದೆ. ನಾವು ಚುನಾವಣೆಯಲ್ಲಿ ಚೆನ್ನಾಗಿ ಹೋರಾಡಿದ್ದೇವೆ. ಮಾಧ್ಯಮಗಳು ಎಕ್ಸಿಟ್ ಪೋಲ್ ಬಗ್ಗೆ ಏನೇ ವರದಿ ಮಾಡಿದರೂ ವೈಯಕ್ತಿಕವಾಗಿ ನಾನು ಅದನ್ನು ನಂಬುವುದಿಲ್ಲ. ಅಸ್ಸಾಂನ ಮತದಾರರಲ್ಲಿ ದೊಡ್ಡ ಭಯವಿದೆ. ಬಿಜೆಪಿಯೊಂದಿಗೆ ಗುರುತಿಸಿಕೊಳ್ಳದವರಿಗೆ ಉಚಿತ ಕೊಡುಗೆಗಳನ್ನು ಸಹ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ, ಯಾರು ಯಾರಿಗೆ ಮತ ಹಾಕಿದ್ದಾರೆಂದು ಹೇಳಲು ಯಾರು ಮುಂದೆ ಬರುತ್ತಾರೆ? ಈ ಮತದಾನೋತ್ತರ ಸಮೀಕ್ಷೆಗಳೆಲ್ಲ ಬರೀ ಸುಳ್ಳು” ಎಂದಿದ್ದಾರೆ.
ಇದನ್ನೂ ಓದಿ: ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯ
“ನಮ್ಮದೇ ಆದ ಆಂತರಿಕ ಸಮೀಕ್ಷೆಯಲ್ಲಿ ನಮಗೆ ವಿಶ್ವಾಸವಿದೆ. ಈ ಮಧ್ಯೆ ಬಿಜೆಪಿ ಕಡೆಯಿಂದಲೂ ನಾವು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಶಾಸಕರು ಮತ್ತು ಸಚಿವರು ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ನಾವು ಭೇಟಿ ಮಾಡಿದ್ದೇವೆ. ಅವರು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ ಎಂಬ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ನಮ್ಮ ನಾಯಕರು, ಅಭ್ಯರ್ಥಿಗಳು ಮತ್ತು ಸಹಚರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಆಕ್ಸಿಸ್ ಮೈ ಇಂಡಿಯಾ 126 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 88ರಿಂದ 100 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 24ರಿಂದ 36 ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜಿಸಿದೆ. ಅಸ್ಸಾಂ ಚುನಾವಣೆಗೆ ಮತ ಎಣಿಕೆ ಮೇ 4ರಂದು ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Sat, 2 May 26